ರೋಣ: ಹಸಿವು ಮುಕ್ತ ಕರ್ನಾಟಕಕ್ಕಾಗಿ ಜಾರಿಗೆ ತಂದಿರುವ ಇಂದಿರಾ ಕ್ಯಾಂಟಿನ್ ರೋಣದಲ್ಲಿ ಪ್ರಾರಂಭವಾಗಿದ್ದು, ಬೆಳಗ್ಗೆ ₹ 5 ಉಪಾಹಾರ, ಮಧ್ಯಾಹ್ನ ₹ 10ಕ್ಕೆ ಊಟ ಒದಗಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟಿನ್ 2013 -2018ರ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಜಾರಿಗೆ ತಂದಿದ್ದು, 2018ರಿಂದ 2023ರ ವರೆಗೆ ರಾಜ್ಯದಲ್ಲಿ ಆಡಳಿತ ಮಾಡಿದ್ದ ಬಿಜೆಪಿ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟಿನ್ ಸ್ಥಗಿತಗೊಳಿಸಿತ್ತು. ಈಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮರಳಿ ಇಂದಿರಾ ಕ್ಯಾಂಟಿನ್ಗಳನ್ನು ರಾಜ್ಯಾದ್ಯಂತ ಪ್ರಾರಂಬಿಸಲಾಗಿದೆ. ರೋಣ, ನರೇಗಲ್ಲ, ಗಜೇಂದ್ರಗಡದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಗಿದೆ. ರೋಣದಲ್ಲಿ ಬಸ್ ನಿಲ್ದಾಣ ರಸ್ತೆಯಲ್ಲಿರುವ ಪಿಡಬ್ಲೂಡಿ ಕಚೇರಿ ಕಂಪೌಂಡಗೆ ಹೊಂದಿಕೊಂಡು ಇಂದಿರಾ ಕ್ಯಾಂಟಿನ್ ತೆರೆಯಲಾಗಿದೆ. ಬೆಳಗ್ಗೆ ಉಪ್ಪಿಟ್ಟು ಅಥವಾ 3 ಇಡ್ಲಿ ಕೇವಲ ₹ 5ಗಳಲ್ಲಿ, ಮಧ್ಯಾಹ್ನ ₹ 10ಗಳಲ್ಲಿ 2 ರೊಟ್ಟಿ ಅಥವಾ ಚಪಾತಿ ಹಾಗೂ ಅನ್ನ ಸಾಂಬಾರ ವಿತರಿಸಲಾಗುವುದು. ರುಚಿ ಮತ್ತು ಶುಚಿತ್ವದಿಂದ ಆಹಾರ ತಯಾರಿಸಿ ವಿತರಿಸಲಾಗುವದು. ಈ ಬಗ್ಗೆ ಕ್ಯಾಂಟಿನ್ ನಿರ್ವಹಣೆ ಮಾಡುವವರಿಗೆ ಸೂಚನೆ ನೀಡಲಾಗಿದೆ ಎಂದರು.
ಸಾನಿಧ್ಯವನ್ನು ಗುಲಗಂಜಿಮಠದ ಗುರುಪಾದ ಸ್ವಾಮೀಜಿ ವಹಿಸಿ ಆಶೀರ್ವದಿಸಿದರು.ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ ,ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಿಥುನ.ಜಿ.ಪಾಟೀಲ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಅಕ್ಷಯ ಪಾಟೀಲ, ಶರಣಪ್ಪ ಬೆಟಗೇರಿ, ವೀರಣ್ಣ ಶೆಟ್ಟರ, ಬಾವಾಸಾಬ ಬೆಟಗೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಮಲ್ಲಯ್ಯ ಮಹಾಪುರುಷಮಠ, ದಾವಲಸಾಬ ಬಾಡಿನ, ಸಿದ್ದಣ್ಣ ಯಾಳಗಿ, ಈರಣ್ಣ ಯಾಳಗಿ ಮುಂತಾದವರು ಉಪಸ್ಥಿತರಿದ್ದರು.