ಕನ್ನಡಪ್ರಭ ವಾರ್ತೆ ಕಾಪು ಯುದ್ಧಪೀಡಿತ ಇಸ್ರೇಲ್ನಲ್ಲಿ ಉದ್ಯೋಗದಲ್ಲಿರುವ ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿಯ ನಡ್ಸಾಲು ಗ್ರಾಮದ ನಿವಾಸಿ ರೋಹಿಣಿ ಅವರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಿಡಿಯೋ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು. ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯದಿಂದಿರಿ, ಯಾವುದೇ ಸಮಸ್ಯೆಯಾದರೆ ನಮಗೆ ಕರೆ ಮಾಡಿ, ನಿಮ್ಮ ಮನೆಯವರಿಗೂ ಹೇಳಿ, ಎರಡೂ ದೇಶಗಳ ಮಧ್ಯೆ ಸಂಧಾನವಾಗಿ ಶಾಂತಿ ನೆಲೆಸಲಿ ಎಂದು ನಾವೆಲ್ಲ ಹಾರೈಸುತಿದ್ದೇವೆ ಎಂದು ಶಾಸಕರು ರೋಹಿಣಿ ಅವರಿಗೆ ಹೇಳಿದರು. ಕೇಂದ್ರ ಸರ್ಕಾರ ಕೂಡ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಆಪರೇಶನ್ ಆರಂಭಿಸಿದೆ, ಅಗತ್ಯವಿದ್ದರೆ ಏರ್ ಲಿಫ್ಟ್ ಮಾಡುವುದಾಗಿಯೂ ಹೇಳಿದೆ. ಆದ್ದರಿಂದ ಯಾವುದೇ ಆತಂಕ ಬೇಡ ಎಂದರು. ನಮ್ಮ ಬಗ್ಗೆ ಊರಲ್ಲೆಲ್ಲಾ ಗಾಬರಿಯಾಗಿದ್ದಾರೆ, ಆದರೆ ತಾವೆಲ್ಲರೂ ಸುರಕ್ಷಿತವಾಗಿದ್ದೇವೆ, ನಮ್ಮ ಮನೆಯವರಿಗೆ, ಸಂಬಂಧಿಕರಿಗೆ ಮನವರಿಕೆ ಮಾಡಿ ಎಂದು ರೋಹಿಣಿ ಅವರು ಶಾಸಕರಿಗೆ ಹೇಳಿದರು.