ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪಟ್ಟಣದಲ್ಲಿ ಡಾ.ಜೈಭೀಮ್ ದಲಿತ ಜಾಗೃತಿ ಸಮಿತಿ ಹಾಗೂ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಅಂಗೈಯಲ್ಲಿ ಆರೋಗ್ಯ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಶಾಸಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ವೈದ್ಯ ಡಾ.ಆಂಜನಪ್ಪ ಮಾತನಾಡಿ, ಮಾಜಿ ಸಂಸದ ದಿ.ಜಿ.ಮಾದೇಗೌಡರಂತಹ ಪುಣ್ಯತ್ಮರು ನಿರ್ಮಾಣ ಮಾಡಿರುವ ಭಾರತೀನಗರ ಶರವೇಗದಲ್ಲಿ ಬೆಳೆಯುವ ಜೊತೆಗೆ ವಿದ್ಯಾ ಕೇಂದ್ರವೂ ದೊಡ್ಡದಾಗಿ ಬೆಳೆಯುತ್ತಿದೆ ಎಂದರು.ಭಾರತ ಸಂವಿಧಾನದಡಿ ಪ್ರತಿಯೊಬ್ಬರಿಗೂ ವಿದ್ಯೆ ಮತ್ತು ಆರೋಗ್ಯ ಹಕ್ಕಿದೆ. ಅದರಂತೆ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಅಭಿವೃದ್ಧಿಯಾಗುತ್ತಿದೆ. ಜನತೆಯೂ ವಿಜ್ಞಾನವನ್ನು ನಂಬಬೇಕು. ಮೌಢ್ಯವನ್ನು ಧಿಕ್ಕರಿಸಿ ವಾಸ್ತವಕ್ಕೆ ಹತ್ತಿರವಾಗಬೇಕು. ಸಧೃಡ ಆರೋಗ್ಯ ಕಾಪಾಡಿಕೊಳ್ಳಲು ಕ್ರಮವಹಿಸಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಶಾಸಕ ಕೆ.ಎಂ.ಉದಯ್ ಮಾತನಾಡಿ, ಪ್ರಶಸ್ತಿ ಪುರಸ್ಕಾರಗಳು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿವೆ. ನಾನು ಯಾವತ್ತೂ ಪ್ರಶಸ್ತಿಗಳಿಗೆ ಆಸೆ ಪಟ್ಟವನಲ್ಲ. ಅಭಿಮಾನದಿಂದ ನೀವು ನೀಡುವ ಗೌರವ ನನ್ನನ್ನು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಕೆಲಸ ಮಾಡಲು ಪುಷ್ಟಿ ನೀಡುತ್ತವೆ ಎಂದರು.
ಕಾರ್ಯಕ್ರಮದ ರೂವಾರಿ ಸಮಿತಿ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಮಾತನಾಡಿ, ಮಾತು ಬೆಳ್ಳಿ ಮೌನ ಬಂಗಾರ ಎಂಬ ನಾಣ್ಣುಡಿಯಂತೆ ಶಾಸಕ ಕೆ.ಎಂ.ಉದಯ್ ಅವರು ಎಲೆಮರೆ ಕಾಯಿಯಂತೆ ಎಲ್ಲೂ ಕೂಡ ಪ್ರಚಾರಕ್ಕೆ ಆಸ್ಪದ ಕೊಡದೇ, ವಿರೋಧವನ್ನು ಲೆಕ್ಕಿಸದೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಹುಲಿಕಲ್ ನಟರಾಜು ಅವರು, ವಿವಿಧ ಪವಾಡಗಳನ್ನು ಕುರಿತು ಜನ ಸಾಮಾನ್ಯರಿಗೆ ಅರಿವು ಮೂಡಿಸಿದರು. ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ. ಬಸವರಾಜು, ಜಿಪಂ ಮಾಜಿ ಸದಸ್ಯ ಎ.ಎಸ್. ರಾಜೀವ್, ವಕೀಲ ಸತ್ಯಪ್ಪ, ಕೆ.ಕೆ.ಹಳ್ಳಿ ಮಾದೇಗೌಡ, ಆತಗೂರು ವೆಂಕಟಾಚಲಯ್ಯ, ಮಹದೇವಯ್ಯ, ವಸಂತಾ ವೆಂಕಟಾಚಲಯ್ಯ, ಜಾಣಪ್ಪ, ಮುಡೀನಹಳ್ಳಿ ತಿಮ್ಮಯ್ಯ, ಕರಡಕೆರೆ ಮನು ಸೇರಿದಂತೆ ಮತ್ತಿತರಿದ್ದರು.