ಪಂಚನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ₹17.28 ಲಕ್ಷ ವೆಚ್ಚದ ಶಾಲಾ ಕೊಠಡಿ ಕಾಮಗಾರಿಗೆ ಗುದ್ದಲಿ ಪೂಜೆ
ಯುವ ಶಕ್ತಿಯ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿಗೆ ಶಾಸಕ ಕೆ.ಎಸ್. ಆನಂದ್ ಆದ್ಯತೆ ನೀಡುತ್ತಿದ್ದಾರೆ ಎಂದು ಇಂದಿರಾ ಕ್ಯಾಂಟೀನ್ ಮೇಲುಸ್ತುವಾರಿ ಮತ್ತು ಗುಣಮಟ್ಟ ಪರಿಶೀಲನಾ ಸಮಿತಿ ರಾಜ್ಯಾಧ್ಯಕ್ಷ ಪಂಚನಹಳ್ಳಿ ಪ್ರಸನ್ನ ಹೇಳಿದರು. ತಾಲೂಕಿನ ಪಂಚನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ₹17.28 ಲಕ್ಷ ವೆಚ್ಚದ ಶಾಲಾ ಕೊಠಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಕ್ಷೇತ್ರದ ಗಡಿ ಭಾಗವಾದ ಪಂಚನಹಳ್ಳಿಯಲ್ಲಿ ಪ್ರಾಥಮಿಕ ಶಾಲೆ ಯಿಂದ ಪದವಿವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುತ್ತಿದೆ. ಆದರೆ ಈ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿತ್ತು. ಇದನ್ನು ಮನಗಂಡ ಶಾಸಕ ಕೆ.ಎಸ್.ಆನಂದ್ ಸರ್ಕಾರದ ಮಟ್ಟದಲ್ಲಿ ಹೆಚ್ಚು ಪರಿಶ್ರಮ ಹಾಕಿ ಸಾಕಷ್ಟು ಅನುದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ₹1 ಕೋಟಿ ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದರು.
ಅದೇ ರೀತಿ ಪಂಚನಹಳ್ಳಿಯಲ್ಲಿ 2011 ರಿಂದ ಈವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಇಂದಿರಾಗಾಂಧಿ ವಸತಿ ಶಾಲೆಗೆ ₹22 ಕೋಟಿ ಅನುದಾನ ದೊರಕಿಸುವ ಜೊತೆಗೆ ಇತ್ತೀಚೆಗಷ್ಟೇ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇದೀಗ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ₹17.28 ಲಕ್ಷ ಅನುದಾನ ದೊರಕಿಸಿದ್ದಾರೆ. ಇಡೀ ಕ್ಷೇತ್ರದಲ್ಲಿ ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಸುಮಾರು ₹200 ಕೋಟಿ ಅನುದಾನ ಮಂಜೂರಾಗಿ ಬಂದಿದೆ. ಬಹುಶಃ ಇಷ್ಟೊಂದು ದೊಡ್ಡ ಮಟ್ಟದ ಅನುದಾನ ರಾಜ್ಯದ ಬೇರೆ ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಬಂದಿರಲಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಭಂಧಿಸಿದ ಸಚಿವರ ಮನವೊಲಿಸಿ ದೊಡ್ಡಮೊತ್ತದ ಅನುದಾನ ತರುವಲ್ಲಿ ಶಾಸಕರ ಶೈಕ್ಷಣಿಕ ಕಾಳಜಿ ಹೆಚ್ಚಿನದಾಗಿದೆ ಎಂದರು. ಗ್ರಾಮದ ಮುಖಂಡ ಪಿ.ಎಂ. ಸೋಮಶೇಖರ್ ಮಾತನಾಡಿ, ಹೆಚ್ಚುವರಿ ಕೊಠಡಿ ನಿರ್ಮಾಣದಿಂದ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಗಡಿ ಭಾಗ ಪಂಚನಹಳ್ಳಿಗೆ ಇನ್ನಷ್ಟು ಅನುದಾನ ದೊರಕಿಸಿಕೊಡಲು ಶಾಸಕರು ಮುಂದಾಗಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಪಿ.ಜಿ.ಸಿದ್ದರಾಮಪ್ಪ, ಪಿ.ಬಿ.ಮಲ್ಲಿಕಾರ್ಜುನ್, ಎಸ್ಡಿಎಂಸಿ ಅಧ್ಯಕ್ಷ ಪಿ.ಎಂ.ಜಯಸ್ವಾಮಿ, ಮುಖಂಡ ರಾದ ಪಿ.ಎಸ್.ರವಿಕುಮಾರ್, ಪಿ.ಎಸ್.ರಂಗನಾಥ್, ಸಂಪತ್ ಕುಮಾರ್, ಪಿ.ಕೆ.ಸಂಜಯ್, ಪಿ.ಕೆ.ಸತೀಶ್ ಮತ್ತು ಮುಖ್ಯ ಶಿಕ್ಷಕ ಎಂ.ಉದಯ್ ಕುಮಾರ್ ಮತ್ತಿತರರು ಇದ್ದರು. 15ಕೆಕೆಡಿಯು1.ಕಡೂರು ತಾಲೂಕಿನ ಪಂಚನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ₹17.28 ಲಕ್ಷ ವೆಚ್ಚದ ಕೊಠಡಿ ಕಾಮಗಾರಿಗೆ ಇಂದಿರಾ ಕ್ಯಾಂಟೀನ್ ಮೇಲುಸ್ತುವಾರಿ ಮತ್ತು ಗುಣಮಟ್ಟ ಪರಿಶೀಲನಾ ಸಮಿತಿ ರಾಜ್ಯಾಧ್ಯಕ್ಷ ಪಿ.ಸಿ.ಪ್ರಸನ್ನ ಭೂಮಿ ಪೂಜೆ ನೆರವೇರಿಸಿದರು.