ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಜೋಳ ಖರೀದಿ ಕೇಂದ್ರದ ಅಧಿಕಾರಿಗಳಿಗೆ ಶಾಸಕ ತರಾಟೆ

KannadaprabhaNewsNetwork | Updated : Jun 13 2025, 03:07 AM IST

ಜೋಳ ಖರೀದಿ ಕೇಂದ್ರದ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸ ಶಾಸಕ ಬಿ.ಎಂ.ನಾಗರಾಜ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಜರುಗಿತು.

ತ್ರೈಮಾಸಿಕ ಸಭೆ: ಅವ್ಯವಸ್ಥೆ ವಿರುದ್ಧ ನಾಗರಾಜ್ ಆಕ್ರೋಶ

ಕನ್ನಡಪ್ರಭ ವಾರ್ತೆ ಸಿರುಗುಪ್ಪ

ಜೋಳ ಖರೀದಿ ಕೇಂದ್ರದ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸ ಶಾಸಕ ಬಿ.ಎಂ.ನಾಗರಾಜ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಜರುಗಿತು.

ತಾಲೂಕಿನಲ್ಲಿ ಬೆಳೆ ಸಮೀಕ್ಷೆಯ ಪ್ರಕಾರ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದ್ದು, ಸರ್ಕಾರ ಖರೀದಿಸಿದ ಜೋಳ ಎರಡನ್ನೂ ಸಮೀಕರಣ ಮಾಡಿ ನೋಡಿದಾಗ ಬೆಳೆದಿದ್ದಕ್ಕೂ ಖರೀದಿಗೂ ಹೊಂದಾಣಿಕೆ ಕಾಣುತ್ತಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅರ್ಹ ರೈತರಿಗೆ ಯಾವುದೇ ತೊಂದರೆಯಾಗದಂತೆ ಜೋಳ ಖರೀದಿ ಕೇಂದ್ರದ ಅಧಿಕಾರಿಗಳು ನಿಗಾ ವಹಿಸಬೇಕು. ರೈತರ ಹೆಸರಿನಲ್ಲಿ ಜೋಳ ವ್ಯಾಪಾರ ಮಾಡಿ ದುಡ್ಡು ಮಾಡಿಕೊಳ್ಳುವ ಕಳ್ಳಾಟಗಳನ್ನು ಬಂದ್ ಮಾಡಬೇಕು. ರೈತರು ಸರದಿ ಸಾಲಿನಲ್ಲಿ ನಿಂತು ಜೋಳ ಖರೀದಿ ಮಾಡುವುದು ಸರಿಯಾದ ಕ್ರಮವಲ್ಲ. ಕೂಡಲೇ ರೈತರ ಅನುಕೂಲಕ್ಕೆ ತಕ್ಕಂತೆ ಅಧಿಕಾರಿಗಳು ಪೂರಕ ಕ್ರಮ ವಹಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ಈ ಬಾರಿ ಬೆಳೆ ಸಮೀಕ್ಷೆ ಮಾಡುವಾಗ ವೈಜ್ಞಾನಿಕತೆ ಅನುಸರಿಸಬೇಕು. ಸಮೀಕ್ಷೆಯ ಲೋಪದಿಂದ ರೈತ ಸಮುದಾಯಕ್ಕೆ ತೊಂದರೆಯಾಗಬಾರದು. ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಶೈಕ್ಷಣಿಕ ಸಮಸ್ಯೆ ನಿವಾರಿಸಿ:

ತಾಲೂಕಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ. ಕಳೆದ ವರ್ಷ ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದ ತಾಲೂಕು ಈ ಬಾರಿ ಇಳಿಮುಖ ಅನುಭವಿಸಿದೆ. ಫಲಿತಾಂಶ ಕುಸಿಯಲು ಕಾರಣಗಳೇನು? ಮುಂದಿನ ಫಲಿತಾಂಶ ಸುಧಾರಣೆ ಯಾವ ಯೋಜನೆ ರೂಪಿಸಿಕೊಂಡಿದ್ದೀರಿ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌. ಗುರಪ್ಪ, ಪರೀಕ್ಷಾ ಫಲಿತಾಂಶ ಸುಧಾರಣೆಗೆ ಕೆಕೆಆರ್‌ಡಿಬಿಯಿಂದ ₹25 ಲಕ್ಷ ಅನುದಾನ ಬಂದಿದ್ದು, ಯೋಜನಾ ವರದಿ ತಯಾರಿಸಲಾಗುತ್ತಿದೆ ಎಂದರಲ್ಲದೆ, ತಾಲೂಕಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಇಲಾಖೆಯಿಂದ ಹಾಕಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಕುಡಿವ ನೀರಿಗೆ ಆದ್ಯತೆ ಕೊಡಿ:

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿವನೀರಿಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಕುಡಿವ ನೀರಿಗೆ ಮೊದಲ ಆದ್ಯತೆ ನೀಡಿ. ನಗರ ಪ್ರದೇಶದಲ್ಲಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಿ. ಚರಂಡಿಗಳಲ್ಲಿ ಹೂಳು ತುಂಬಿಕೊಳ್ಳದಂತೆ ನೋಡಿಕೊಳ್ಳಿ. ಮಳೆಗಾಲದಲ್ಲಿ ಚರಂಡಿಗಳಿಂದ ಸಮಸ್ಯೆಯಾಗಬಾರದು. ಈ ಬಗ್ಗೆ ಗಮನ ನೀಡಿ. ಕೆಕೆಆರ್‌ಡಿಬಿ ಅನುದಾನದಲ್ಲಿ ನಗರದಲ್ಲಿ ವಿವಿಧೆಡೆ ಸಿಸಿ ಕ್ಯಾಮೆರಾ ಅಳವಡಿಸಿ ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.ತೆಕ್ಕಲಕೋಟೆಗೆ ಕುಡಿವನೀರಿನ ಹೊಸ ಕೆರೆ ನಿರ್ಮಣಕ್ಕೆ ಮುಖ್ಯಾಧಿಕಾರಿ ಪರಶುರಾಮ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದರು. ಇದೇ ವೇಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಶಾಸಕರು, ತಾಲೂಕು ಅಭಿವೃದ್ಧಿ ನೆಲೆಯಲ್ಲಿ ಯಾವುದೇ ಕಾಮಗಾರಿಗಳು ವಿಳಂಬವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಹಶೀಲ್ದಾರ್‌ ನರಸಪ್ಪ, ತಾಪಂ ಇಒ ಪವನಕುಮಾರ್‌, ಗ್ಯಾರಂಟಿ ಯೋಜನೆ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಮಾರುತಿ ವರಪ್ರಸಾದ್‌ ರೆಡ್ಡಿ ಸೇರಿದಂತೆ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು. ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿ ಹೆಲ್ಮೆಟ್ ಧರಿಸಿ:

ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಪ್ಪದೆ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಬಾರದು ಎಂದು ಶಾಸಕ ಬಿ.ಎಂ. ನಾಗರಾಜ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಹೆಲ್ಮೆಟ್ ಧರಿಸದ ಇಲಾಖೆ ಅಧಿಕಾರಿ ಅಥವಾ ಸಿಬ್ಬಂದಿಗೆ ಮೂರರಷ್ಟು ದಂಡ ಹಾಕಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಪೊಲೀಸ್ ಕವಾಯಿತು ಮಾಡಲು ನಗರದಲ್ಲಿ 6 ಎಕರೆ ಜಮೀನು ಅಗತ್ಯವಿದೆ. ಡಿವೈಎಸ್ಪಿ ಮತ್ತು ಸಿಪಿಐಗಳಿಗೆ ಸ್ಥಳೀಯವಾಗಿ ವಸತಿ ನಿಲಯ ನಿರ್ಮಿಸಬೇಕು ಎಂದು ನಗರ ಪೊಲೀಸ್ ಠಾಣೆ ಸಿಪಿಐ ಹನುಮಂತಪ್ಪ ಶಾಸಕರಲ್ಲಿ ಮನವಿ ಮಾಡಿದರು.