ಕನ್ನಡಪ್ರಭ ವಾರ್ತೆ ತುರುವೇಕೆರೆ
ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಜೂ.೧೦ಕ್ಕೆ ೭೫ ವಸಂತಗಳು ತುಂಬಲಿವೆ. ಈ ಕಾರಣದಿಂದಾಗಿ ಎಂ.ಟಿ.ಕೃಷ್ಣಪ್ಪನವರ ಅಭಿಮಾನಿಗಳು ಜೂ. ೧೦ರಂದು ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಂ.ಟಿ.ಕೃಷ್ಣಪ್ಪ ಅಭಿಮಾನಿಗಳು ನಡೆಸಿದ ಪೂರ್ವಭಾವಿ ಸಭೆಯ ನಂತರ ಮಾತನಾಡಿದ ಹುಟ್ಟುಹಬ್ಬ ಆಚರಣಾ ಸಮಿತಿಯ ಸಂಚಾಲಕ ಡಾ.ಚೌದ್ರಿ ನಾಗೇಶ್, ಶಾಸಕ ಎಂ.ಟಿ.ಕೃಷ್ಣಪ್ಪನವರು ತುರುವೇಕೆರೆ ಕ್ಷೇತ್ರದಲ್ಲಿ ಅಲ್ಲದೇ ರಾಜ್ಯದಲ್ಲೂ ಉತ್ತಮ ಹೆಸರು ಪಡೆದುಕೊಂಡಿರುವವರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸರ್ಕಾರಿ ನೌಕರರ ಹಿತ ಕಾಪಾಡಿದ್ದಾರೆ. ತದ ನಂತರ ತುರುವೇಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಕಾಲಿಟ್ಟು ಜನಸೇವೆಯೇ ತಮ್ಮ ಉಸಿರು ಎಂಬಂತೆ ಕಳೆದ ನಲವತ್ತು ವರ್ಷಗಳಿಂದಲೂ ಜನರ ಸೇವೆ ಮಾಡಿದ್ದಾರೆ. ಇವರ ಜನಸೇವೆ ಕಂಡು ತುರುವೇಕೆರೆ ಕ್ಷೇತ್ರದ ಜನತೆ ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ತುರುವೇಕೆರೆ ತಾಲೂಕಿನಲ್ಲೇ ಇದು ಮೈಲಿಗಲ್ಲಾಗಿದೆ. ಇದುವರೆಗೂ ಯಾರೊಬ್ಬರೂ ನಾಲ್ಕು ಬಾರಿ ಶಾಸಕರಾಗಿರುವ ಉದಾಹರಣೆಯೇ ಇಲ್ಲ ಎಂದರು.
ಇಂತಹ ಹೋರಾಟ ಮನೋಭಾವದ ಶಾಸಕ ಎಂ.ಟಿ.ಕೃಷ್ಣಪ್ಪನವರು ೭೫ನೇ ವರ್ಷಕ್ಕೆ ಕಾಲಿಡುತ್ತಿರುವುದು ಹೆಮ್ಮೆಯ ಸಂಗತಿ. ಅವರ ಅಮೃತ ಮಹೋತ್ಸವವನ್ನು ಆಚರಿಸಲು ಅವರ ಸಾವಿರಾರು ಅಭಿಮಾನಿಗಳು ನಿರ್ಧರಿಸಿದ್ದಾರೆ. ಹಾಗಾಗಿ ಜೂನ್ ೧೦ ರಂದು ಅವರ ೭೫ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ, ಶಾಸಕ ಎಂ.ಟಿ.ಕೃಷ್ಣಪ್ಪನವರ ಹುಟ್ಟುಹಬ್ಬದ ಸಂಭ್ರಮವನ್ನು ತುರುವೇಕೆರೆ ಕ್ಷೇತ್ರದ ಎಲ್ಲಾ ಅವರ ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದಾರೆ. ಆ ಸಲುವಾಗಿ ಜೂ. ೧೦ ರಂದು ಉಚಿತ ಆರೋಗ್ಯ ಶಿಬಿರವನ್ನು ಚೌದ್ರಿ ಕನ್ವೆಂಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದಾನ ಶಿಬಿರ, ದಂತ ಚಿಕಿತ್ಸೆ, ಹೃದಯ ರೋಗ, ನರರೋಗ, ಮೂತ್ರಪಿಂಡ ರೋಗ, ಮಧುಮೇಹ, ಪಿತ್ತಜನಕಾಂಗ ರೋಗ, ಗರ್ಭಿಣಿ ಮತ್ತು ಸ್ತ್ರೀ ರೋಗ, ಕ್ಯಾನ್ಸರ್, ಕಿವಿ, ಮೂಗು, ಗಂಟಲು, ಮಕ್ಕಳು, ಕಣ್ಣು ತಪಾಸಣೆ, ಚರ್ಮರೋಗ, ಮಾನಸಿಕ ರೋಗ ಸೇರಿ ವಿವಿಧ ಕಾಯಿಲೆಗಳನ್ನು ತಪಾಸಣೆ ಮಾಡಲು ವೈದ್ಯರು ಆಗಮಿಸಲಿದ್ದಾರೆಂದು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕುಶಾಲ್ ಕುಮಾರ್ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆದಿಚುಂಚನಗಿರಿ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ, ಚೌದ್ರಿ ಆಸ್ಪತ್ರೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಆಫ್ ಸಂಕಲ್ಪ, ರಾಜ್ಯ ಸರ್ಕಾರಿ ನೌಕರರ ಸಂಘ, ಎಂ.ಟಿ.ಕೃಷ್ಣಪ್ಪ ಅಭಿಮಾನಿಗಳ ಸಂಘ ಸೇರಿ ನಡೆಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ರಾಮೇಗೌಡ ಮಾತನಾಡಿ, ಈ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕರಾದ ಮಸಾಲ ಜಯರಾಮ್, ಎಂ.ಡಿ.ಲಕ್ಷ್ಮೀನಾರಾಯಣ್, ಎಚ್.ಬಿ.ನಂಜೇಗೌಡ, ಎಸ್.ರುದ್ರಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಎ.ಬಿ.ಜಗದೀಶ್, ಗುತ್ತಿಗೆದಾರರಾದ ತ್ಯಾಗರಾಜು, ಬೂವನಹಳ್ಳಿ ದೇವರಾಜು, ಲೋಕೇಶ್ ಬಾಬು, ಪಟ್ಟಣ ಪಂಚಾಯಿತಿ ಸದಸ್ಯ ಎನ್. ಆರ್. ಸುರೇಶ್, ಮಧು, ಪುನೀತ್, ಕಾಂತರಾಜು, ಮಂಜು, ಯೋಗೀಶ್, ಮಧು, ಶ್ರೀನಿವಾಸ್ ಸೇರಿ ಮುಖಂಡರು ಇದ್ದರು.