ಜಿಟಿಟಿಸಿಗೆ ಶಾಸಕ ಮಾನೆ ಭೇಟಿ, ಮೂಲಸೌಕರ್ಯ ಪರಿಶೀಲನೆ

KannadaprabhaNewsNetwork |  
Published : Feb 06, 2024, 01:34 AM IST
ಫೋಟೊ: ೪ಎಚ್‌ಎನ್‌ಎಲ್೩ | Kannada Prabha

ಸಾರಾಂಶ

ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಶಾಸಕರ ಎದುರು ಅಳಲು ತೋಡಿಕೊಂಡರು.

ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡ ವಿದ್ಯಾರ್ಥಿಗಳು

ಕನ್ನಡಪ್ರಭ ವಾರ್ತೆ ಹಾನಗಲ್ಲ

ಅಗತ್ಯ ಮೂಲಸೌಕರ್ಯಗಳ ಕೊರತೆಯ ದೂರಿನ ಹಿನ್ನೆಲೆ ಇಲ್ಲಿನ ಪಾಳಾ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ (ಜಿಟಿಟಿಸಿ) ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಅಗತ್ಯ ಮಾಹಿತಿ ಪಡೆದರು.

ಕಟ್ಟಡದಲ್ಲಿ ಉತ್ತಮ ಸೌಲಭ್ಯಗಳಿಲ್ಲ. ಮಳೆ ಬಂದರೆ ನೀರೆಲ್ಲ ಒಳ ಪ್ರವೇಶಿಸಿ ತೊಂದರೆ ಉಂಟಾಗುತ್ತದೆ. ವರ್ಗ ಕೊಠಡಿಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಕಲಿಕೆ ಪರಿಣಾಮಕಾರಿಯಾಗುತ್ತಿಲ್ಲ. ವರ್ಕ್ ಶಾಪ್‌ನಲ್ಲಿಯೂ ಸಹ ಸ್ಥಳಾವಕಾಶದ ಕೊರತೆ ಇದೆ. ಹಲವು ಯಂತ್ರಗಳು ದುರಸ್ತಿಗೀಡಾಗಿರುವುದರಿಂದ ಪ್ರಾಕ್ಟಿಕಲ್ ಕ್ಲಾಸ್‌ಗೆ ತೊಂದರೆ ಉಂಟಾಗಿದೆ. ಕೇಂದ್ರದಲ್ಲಿ ಒಟ್ಟು ೧೫೦ ವಿದ್ಯಾರ್ಥಿಗಳಿದ್ದೇವೆ. ಮುಖ್ಯಮಂತ್ರಿಗಳ ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯೂ ಅಲ್ಪಾವಧಿ ತರಬೇತಿಗೆ ಸಾಕಷ್ಟು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಶಾಸಕರ ಎದುರು ಅಳಲು ತೋಡಿಕೊಂಡರು.

ಕೇಂದ್ರದ ವರ್ಗ ಕೊಠಡಿಗಳು, ವರ್ಕ್‌ಶಾಪ್ ಸೇರಿದಂತೆ ಇತರ ವಿಭಾಗಗಳಿಗೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿದ ಶ್ರೀನಿವಾಸ ಮಾನೆ, ಶಾಶ್ವತ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕನಿಷ್ಟ ಎರಡು, ಮೂರು ವರ್ಷಗಳು ಹಿಡಿಯಲಿವೆ. ಅದುವರೆಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸಬಾರದು. ಕೇಂದ್ರದಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಮಗ್ರ ವರದಿ ನೀಡಿದರೆ ಇಲಾಖೆಯ ನಿರ್ದೇಶಕರನ್ನು ಭೇಟಿ ಮಾಡಿ ಗಮನ ಸೆಳೆಯುವುದಾಗಿ ಶಾಸಕ ಮಾನೆ ಭರವಸೆ ನೀಡಿದರು. ತಾತ್ಕಾಲಿಕವಾಗಿ ಕಟ್ಟಡದ ಮೇಲ್ಛಾವಣಿ ಹಾಗೂ ನೆಲಹಾಸು ದುರಸ್ತಿ, ಇತರ ಸಣ್ಣಪುಟ್ಟ ದುರಸ್ತಿ ಕಾರ್ಯ ಕೈಗೊಳ್ಳಲು ಹಾಗೂ ತುರ್ತು ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ