2 ಸಾವಿರ ಕೋಟಿ ಅನುದಾನ ತಂದಿದ್ದೇನೆ ಎಂದ ಪುಟ್ಟರಂಗಶೆಟ್ಟಿ ಶ್ವೇತ ಪತ್ರ ಹೊರಡಿಸಲಿ
ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ 2 ಸಾವಿರ ಕೋಟಿ ಅನುದಾನ ತಂದಿರುವುದಾಗಿ ಹೇಳಿಕೆ ನೀಡಿರುವ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು 2 ಸಾವಿರ ಕೋಟಿ ಅನುದಾನ ಸಂಬಂಧ ಶ್ವೇತ್ರ ಪತ್ರ ಹೊರಡಿಸಬೇಕು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡ ಎಂ. ರಾಮಚಂದ್ರ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2 ಸಾವಿರ ಕೋಟಿ ಅನುದಾನದಲ್ಲಿ ಕ್ಷೇತ್ರದ ಯಾವ ಕಡೆ ಕೆಲಸ ಮಾಡಲಾಗಿದೆ ಎಂಬುದನ್ನು ತೋರಿಸಲಿ. ಅಲ್ಲದೇ ಶಾಸಕರು ತಂದಿರುವ ಅನುದಾನ ಕುರಿತು ಸೂಕ್ತ ದಾಖಲೆ ಕೊಡಬೇಕು ಎಂದು ಆಗ್ರಹಿಸಿದರು.ಸಿ.ಪುಟ್ಟರಂಗಶೆಟ್ಟಿ ಅವರು 4 ಬಾರಿ ಶಾಸಕರಾಗಿದ್ದು, ಕಳೆದ 18 ವರ್ಷಗಳ ಅವಧಿಯಲ್ಲಿ 2 ಸಾವಿರ ಕೋಟಿ ಅನುದಾನ ತಂದಿರಬಹುದು ಎಂದು ವ್ಯಂಗ್ಯವಾಡಿದ ಅವರು ಶಾಸಕರು ಹೇಳಿರುವುದು ಶುದ್ಧ ಸುಳ್ಳು. ಅಷ್ಟು ಅನುದಾನದ ಕಾಮಗಾರಿ ಕ್ಷೇತ್ರದಲ್ಲಿ ನಡೆದಿಲ್ಲ. ಶಾಸಕರ ಮೂರು ವರ್ಷದ ಸಾಧನೆ ಶೂನ್ಯ ಎಂದರು.
ಚಾಮರಾಜನಗರ ಸೇರಿದಂತೆ ಕ್ಷೇತ್ರದ ಹಲವು ಕಡೆಗಳಲ್ಲಿ ಅನೇಕ ಕಾಮಗಾರಿಗಳು ಅಪೂರ್ಣಗೊಂಡಿವೆ. ಇನ್ನೂ ಹಲವು ಕಡೆಗಳಲ್ಲಿ ಕಾಮಗಾರಿಗಳನ್ನು ಅರ್ಧ ಮಾಡಿ ಗುತ್ತಿಗೆದಾರನಿಗೆ ಪೂರ್ತಿ ಬಿಲ್ ಮಾಡಿಕೊಡಲಾಗಿದೆ. ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೆರೆಹಳ್ಳಿ ಮಹದೇವಸ್ವಾಮಿ, ಆರ್. ಪುಟ್ಟಮಲ್ಲಪ್ಪ, ಮಹೇಶ್ ಪಟೇಲ್, ವೇಣುಗೋಪಾಲ್ ಹಾಜರಿದ್ದರು.