
ಸೋಮರಡ್ಡಿ ಅಳವಂಡಿ
ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ನಾಮನಿರ್ದೇಶನ ಸದಸ್ಯರಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಬಕೊ ಅಧ್ಯಕ್ಷರಾಗಲು ಇನ್ನೊಂದೆ ಮೆಟ್ಟಿಲು ಬಾಕಿ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸರ್ಕಾರದ ಅಧೀನ ಕಾರ್ಯದರ್ಶಿ ರಂಗನಾಥ ಜಿ., ಮಂಗಳವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಮೊದಲು ನೇಮಕವಾಗಿದ್ದ ಹಂಪಯ್ಯಸ್ವಾಮಿ ಹಿರೇಮಠ ಅವರ ನಾಮನಿರ್ದೇಶನ ರದ್ದು ಮಾಡಿ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ನೇಮಕ ಮಾಡಲಾಗಿದೆ.ಕಳೆದ ನಾಲ್ಕು ದಿನಗಳಿಂದ ನಡೆದ ಹೈಡ್ರಾಮಾದಲ್ಲಿ ಶಾಸಕ ಹಿಟ್ನಾಳ ಮುಖ್ಯಮಂತ್ರಿ ಮನವೊಲಿಸಿ, ಈ ಮೊದಲ ನೇಮಕವಾಗಿದ್ದ ನಾಮನಿರ್ದೇಶನ ರದ್ದುಗೊಳಿಸಿ ತಮ್ಮನ್ನು ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಬಕೋ ಹಾಲು ಒಕ್ಕೂಟ ಪ್ರವೇಶಿಸಲು ರಾಘವೇಂದ್ರ ಹಿಟ್ನಾಳ ಯತ್ನಿಸುತ್ತಿದ್ದರೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪುರ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಸೇರಿದಂತೆ ಅನೇಕರು ವಿರೋಧಿಸಿದ್ದಾರೆ. ಆದರೂ ಪಟ್ಟುಬಿಡದ ಶಾಸಕ ನಾಮನಿರ್ದೇಶನವಾಗುವಲ್ಲಿ ಯಶಸ್ವಿಯಾಗಿದ್ದಾರೆ.
ರಾಬಕೊ ಹಾಲು ಒಕ್ಕೂಟದಲ್ಲಿ ಚುನಾಯಿತ 12 ನಿರ್ದೇಶಕರು ಸೇರಿದಂತೆ ನಾಮನಿರ್ದೇಶನ ಸದಸ್ಯರನ್ನು ಒಳಗೊಂಡು 16 ಸದಸ್ಯ ಬಲವಿದೆ. ಇದರಲ್ಲಿ ರಾಘವೇಂದ್ರ ಹಿಟ್ನಾಳ ಪರವಾಗಿ 10 ಸದಸ್ಯ ಬಲ ಇರುವುದರಿಂದ ಅಧ್ಯಕ್ಷರಾಗಿ ಆಯ್ಕೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ. ಮಾಜಿ ಶಾಸಕ ಭೀಮಾನಾಯ್ಕ ಸಹ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ. ಹಿಟ್ನಾಳ್ ನಾಮನಿರ್ದೇಶನ ಆಗದಂತೆ ನೋಡಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದೆ. ಆದರೆ, ಸಿದ್ದರಾಮಯ್ಯ ಅವರೇ ಹಿಟ್ನಾಳ್ ಬೆನ್ನಿಗಿರುವುದರಿಂದ ಅಧ್ಯಕ್ಷ ಸ್ಥಾನ ಪಕ್ಕಾ ಎಂದು ಹೇಳಲಾಗುತ್ತಿದೆ.
ರಾಘವೇಂದ್ರ ಹಿಟ್ನಾಳ ಬೆಂಬಲಿಸಿರುವ 7 ಸದಸ್ಯರು ಪ್ರವಾಸದಲ್ಲಿದ್ದಾರೆ. ಪದನಿಮಿತ್ತ ಮೂವರು ನಿರ್ದೇಶಕರು ಹಾಗೂ ತಮ್ಮದೊಂದು ಮತ ಸೇರಿ ನನಗೆ 11 ಮತ ಬರುತ್ತವೆ ಎನ್ನುವ ವಿಶ್ವಾಸದಲ್ಲಿ ಶಾಸಕರಿದ್ದಾರೆ. ಇದರ ನಡುವೆ ಕುದುರೆ ವ್ಯಾಪಾರ ಜೋರಾಗಿದ್ದು, ಮಾಜಿ ಶಾಸಕ ಭೀಮಾನಾಯ್ಕ ಅವರ ಪ್ರಯತ್ನವನ್ನು ತಳ್ಳಿ ಹಾಕುವಂತೆ ಇಲ್ಲ ಎಂದೇ ಹೇಳಲಾಗುತ್ತಿದೆ.ಕೆಎಂಫ್ನತ್ತ ಒಲವು