ಕನ್ನಡಪ್ರಭ ವಾರ್ತೆ ರಾಮನಗರ/ ಮಂಡ್ಯಮಂಡ್ಯ ತಾಲೂಕಿನ ಹನಕೆರೆ- ಗೌಡಗೆರೆ ಗೇಟ್ ಬಳಿ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳ ಸೇತುವೆ (ಅಂಡರ್ ಪಾಸ್ )ನಿರ್ಮಾಣ ಮಾಡುವಂತೆ ಆಗ್ರಹಿಸಿ ಮಂಡ್ಯ ಕ್ಷೇತ್ರ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಹನಕೆರೆ ಗ್ರಾಮಸ್ಥರು ರಾಮನಗರದ ಬಸವನಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರ ಕಚೇರಿ ಎದುರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಂಸದ ಡಿ.ಕೆ.ಸುರೇಶ್, ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ.ರಾಜು ಸೇರಿದಂತೆ ಅನೇಕರು ಹೋರಾಟಕ್ಕೆ ಬೆಂಬಲ ಸೂಚಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೃಷಿ ಸಚಿವರು ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಮನವಿ ಆಲಿಸಿ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ ತರುವಾಯ ಶಾಸಕ ಗಣಿಕ ರವಿಕುಮಾರ್ ಹಾಗೂ ಗ್ರಾಮಸ್ಥರು ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಇದಕ್ಕೂ ಮುನ್ನ ಮಾತನಾಡಿದ ಗಣಿಗ ರವಿ, ನಮಗೆ ಯಾವ ಕಾರಣಕ್ಕೂ ಮೇಲ್ಸೇತುವೆ ಬೇಡ, ರೈತರು, ಮಹಿಳೆಯರು, ಜನಸಾಮಾನ್ಯರಿಗೆ ಅನುಕೂಲವಾಗಲು ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಡರ್ ಪಾಸ್ಗೆ ಅನುಮತಿ ನೀಡುವವರೆಗೂ ನಾವು ಇಲ್ಲೇ ಇರುತ್ತೇವೆ ಎಂದು ಎಚ್ಚರಿಕೆ ನೀಡಿದರು.ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ವಿಧಾನಸಭಾ ಚುನಾವಣೆಗೂ ಮುನ್ನ ಸಾವಿರಾರು ರೈತರು, ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಆಗ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿ ರೈತರು ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದರು. ಈಗ ಮೇಲ್ಲೇತುವೆಗಾಗಿ ಪರಿಶೋಧನೆ ಮಾಡುತ್ತಿದ್ದಾರೆ. ಇದರಿಂದ ಬೈಕ್ ಸವಾರರು, ಕಬ್ಬಿನ ಗಾಡಿ, ಟ್ರ್ಯಾಕ್ಟರ್ ಗಳಿಗೆ ತೊಂದರೆಯಾಗಲಿದೆ. ಎಲ್ಲ ಬಗೆಯ ಹೋರಾಟ ಮಾಡಿ ಕೊನೆಗೆ ಗಾಂಧೀಜಿ ಹಾದಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಹಿಂದೆ 8 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಿಸುವುದಾಗಿ ಹೇಳಿದ್ದರು. ಆದರೀಗ ಗುತ್ತಿಗೆದಾರರು ಸಿಗುತ್ತಿಲ್ಲ ಎಂದು ಕಾರಣ ಹೇಳುತ್ತಿದ್ದಾರೆ. 10 ಸಾವಿರ ಕೋಟಿ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಸಿಗುತ್ತಾರೆ, 8 ಕೋಟಿ ಕಾಮಗಾರಿಗೆ ಸಿಗುವುದಿಲ್ಲವೇ?, ಈ ರೀತಿ ಸುಳ್ಳುಗಳನ್ನು ಹೇಳುವುದನ್ನು ಅಧಿಕಾರಿಗಳು ಬಿಡಬೇಕು. ಇಂದಿನ ಉಪವಾಸ ಸತ್ಯಾಗ್ರಹದಲ್ಲಿ ನಾಲ್ಕೈದು ಮಂದಿ ಗುತ್ತಿಗೆದಾರರು ಭಾಗವಹಿಸಿದ್ದಾರೆ. ನೀವು ಅವರಿಗೆ ಟೆಂಡರ್ ಕೊಡಿ ಗುಣಮಟ್ಟದ ಕಾಮಗಾರಿಯನ್ನು ನಿಂತು ಮಾಡಿಸೋಣ ಎಂದು ಸವಾಲು ಹಾಕಿದರು.ಅಂಡರ್ ಪಾಸ್ ವಿಚಾರವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಬಗ್ಗೆ ಸಂಸದೆ ಸುಮಲತಾ ಅಂಬರೀಶ್, ಕ್ರೆಡಿಟ್ ಪಡೆಯಲು ಶಾಸಕರು ಈ ರೀತಿ ಗಿಮಿಕ್ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ, ಸುಮಲತಾ ಅವರಿಗೆ ಮಾಹಿತಿಯ ಕೊರತೆ ಇದೆ. ಅವರು ಈಗಲೂ ನಾನೇ ಅಂಡರ್ ಪಾಸ್ ನಿರ್ಮಾಣಕ್ಕೆ ಕಾರಣ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಮೇಲ್ಸೇತುವೆ ಆದೇಶವಾಗಿರುವುದು ಗೊತ್ತಾಗಿಲ್ಲ ಅನಿಸುತ್ತಿದೆ. ನಮಗೆ ಉಪವಾಸ ಸತ್ಯಾಗ್ರಹ ಮಾಡಿ ಕ್ರೆಡಿಟ್ ಪಡೆಯುವುದೂ ಬೇಡ. ನೀವೇ ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ, ಮೇಲ್ಸೇತುವೆ ಕಾಮಗಾರಿ ರದ್ದು ಪಡಿಸಿ ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮತಿ ಕೊಡಿಸಿ ನೀವೇ ಇದರ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳಿ.ನಮಗೆ ಅಂಡರ್ ಪಾಸ್ ನಿರ್ಮಾಣವಾದರೆ ಸಾಕು ಎಂದು ತಿರುಗೇಟು ನೀಡಿದರು.
ಪ್ರತಾಪ್ ಸಿಂಹ ಮೈಸೂರು - ಕೊಡಗು ಕ್ಷೇತ್ರ ಸಂಸದರು. ಈ ವಿಚಾರವಾಗಿ ಅವರ ಬಳಿ ಯಾವತ್ತೂ ಮಾತನಾಡಿಲ್ಲ. ಅವರು ಪ್ರಚಾರಕ್ಕಾಗಿ ಎಕ್ಸ್ ಪ್ರೆಸ್ ವೇ ಬಗ್ಗೆ ಮಾತನಾಡುತ್ತಾರೆ ಅಷ್ಟೇ. ಸಂಸದೆ ಸುಮಲತಾರವರು ಕೇಂದ್ರ ಸಚಿವರೊಂದಿಗೆ ಮಾತನಾಡಿ, ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು.ಆದರೆ, ಅವರು ಆ ರೀತಿ ಮಾಡದೆ ನನ್ನ ವಿರುದ್ಧ ಮಾತನಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಗಣಿಗ ರವಿ ಕಿಡಿಕಾರಿದರು.ಹೆದ್ದಾರಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ:
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ದಶಪಥ ಹೆದ್ದಾರಿಗೆ ಸಂಬಂಧಿಸಿದಂತೆ ಅನೇಕ ಒತ್ತಾಯಗಳನ್ನು ಧೃಡ ಮಾಡಿದ್ದೇನೆ.ಅವೈಜ್ಞಾನಿಕವಾಗಿ ರಸ್ತೆ ಮಾಡಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ನೂರಾರು ಸಾವುಗಳಾಗಿವೆ. ಈ ಬಗ್ಗೆ ಕೇಂದ್ರ ಸಚಿವರು ಸೇರಿದಂತೆ ಅನೇಕ ಸಭೆಗಳನ್ನು ಮಾಡಿದ್ದೇವೆ. ಆದರೂ ಈ ಸಮಸ್ಯೆಗಳ ಬಗ್ಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಹನಕೆರೆ ಭಾಗದ ಜನರಿಗೆ ಒಳ್ಳೆಯದಾಗಲೆಂದು ಶಾಸಕ ಗಣಿಕ ರವಿಕುಮಾರ್ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಮನವಿ ಮಾಡಿದ್ದರು. ಭರವಸೆ ಕೊಟ್ಟಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈಗ ವರಸೆ ಬದಲಾಯಿಸಿದ್ದಾರೆ. ಹೆದ್ದಾರಿಯಲ್ಲಿ ಎಕ್ಸಿಟ್ - ಎಂಟ್ರಿ ಸೇರಿದಂತೆ ಹಲವು ಕೆಲಸಗಳಿಗೆ 600 ಕೋಟಿ ಹಣವನ್ನು ಮೀಸಲಿಡಲಾಗಿದೆ. ಆದರೆ, ಯಾವುದೇ ಕೆಲಸ ಇನ್ನೂ ಕಾರ್ಯಗತವಾಗಿಲ್ಲ.
ಮಂಡ್ಯಕ್ಕೆ ಇನ್ನೂ ಅಂಡರ್ ಪಾಸ್ಗಳ ಅವಶ್ಯಕತೆ ಇದೆ. ಕೆಲವು ಕಡೆ ಸರ್ವಿಸ್ ರಸ್ತೆಯಾಗಿಲ್ಲ, ಬಸ್ ಶಲ್ಟರ್ ಇಲ್ಲ.ಅಧಿಕಾರಿಗಳಿಗೆ ಟೋಲ್ ಕಲೆಕ್ಷನ್ ಬಿಟ್ಟು ಬೇರೆ ಏನೂ ಗೊತ್ತಿಲ್ಲ.ನಮಗೆ ರಸ್ತೆ ಸಂಪೂರ್ಣವಾಗಿ ಆಗಬೇಕು ಎಂಬುದು ಒತ್ತಾಯ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ಉಪವಾಸ ಸತ್ಯಾಗ್ರಹದಲ್ಲಿ ಮನ್ ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್, ಮೈಷುಗರ್ ಮಾಜಿ ಅಧ್ಯಕ್ಷ ಬಿ. ಸಿ. ಶಿವಾನಂದ, ಮುಖಂಡರಾದ ಎಚ್. ಎನ್. ಯೋಗೇಶ್ ಶಿವಲಿಂಗೇಗೌಡ, ಶೇಖರ್, ಜೆ.ಕೆ.ಲಕ್ಷ್ಮಿನಾರಾಯಣ್ , ರಾಮನಗರ ಮುಖಂಡರಾದ ಎ.ಬಿ.ಚೇತನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.ಕ್ರೆಡಿಟ್ ಏಕೆ ?. ನಮ್ಮ ತೆರಿಗೆ ಹಣ ಅಲ್ವಾ?
ಕರ್ನಾಟಕದಿಂದ 4 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ, ಅವರು 40 ಸಾವಿರ ಕೋಟಿ ಕೊಡುತ್ತಾರೆ. ಕಳೆದ 10 ವರ್ಷಗಳಿಂದ 5 ಸಾವಿರ ಕಿ.ಮೀ. ರಸ್ತೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.ಉತ್ತರ ಪ್ರದೇಶಕ್ಕೆ 13 ಸಾವಿರ, ಮಹಾರಾಷ್ಟ್ರಕ್ಕೆ 26 ಸಾವಿರ ಕಿ.ಮೀ ಕೊಟ್ಟಿದ್ದಾರೆ. ನಮ್ಮ ತೆರಿಗೆ ಹಣ ನಮಗೆ ಕೊಡುತ್ತಿಲ್ಲ. ಕೊಡುವುದಾದರೆ 25 ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಿಕೊಡಬೇಕು.ಇದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ. ಉತ್ತರ ಭಾರತದವರಿಗೆ ಬೆಣ್ಣೆ, ದಕ್ಷಿಣ ಭಾರತದವರಿಗೆ ಸುಣ್ಣ. ಕೇಂದ್ರ ಸರ್ಕಾರ ನಮಗೆ ಏನು ಕೊಟ್ಟಿಲ್ಲ. ನಮ್ಮ ಜೀವ ಉಳಿಸೋಕೆ ಮೀನಾಮೇಷ ಎಣಿಸುತ್ತಿದ್ದಾರೆ.- ಡಿ.ಕೆ.ಸುರೇಶ್ , ಸಂಸದರು