ಕುಕನೂರು: ಶಾಸಕ ಬಸವರಾಜ ರಾಯರಡ್ಡಿ ಅವರು ಕಾಂಗ್ರೆಸ್ ಪಕ್ಷದಿಂದ ಯಲಬುರ್ಗಾ ಕ್ಷೇತ್ರದ ಚುನಾವಣೆಗೆ ಹೊಸಬರಿಗೆ ಅವಕಾಶ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಹೇಳಿದರು.
ಮೇ ೩,೨೦೨೩ರಲ್ಲಿ ಬಿಜೆಪಿ ತೊರೆದು, ಇಂದಿನ ಸಿಎಂ ಡಿ.ಕೆ.ಶಿವಕುಮಾರ ಸಮ್ಮುಖದಲ್ಲಿಯೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ಅಂದಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿ.ಬಸವರಾಜ ಉಳ್ಳಾಗಡ್ಡಿ, ಶಾಸಕ ಬಸವರಾಜ ರಾಯರಡ್ಡಿ ಸಮ್ಮುಖದಲ್ಲಿ ಸುಮಾರು ೨ ಸಾವಿರಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ಕ್ಷೇತ್ರದಲ್ಲಿ ಸೇರ್ಪಡೆಗೊಂಡಿದ್ದು, ರಾಯರಡ್ಡಿ ಅವರನ್ನು ಶಾಸಕರನ್ನಾಗಿ ಮಾಡಲು ಸುಮಾರು ೧೪೦ಕ್ಕೂ ಅಧಿಕ ಹಳ್ಳಿಗಳಿಗೆ ತೆರಳಿ ಪಕ್ಷ ಸಂಘಟನೆ ಮಾಡುವ ಮೂಲಕ ಗೆಲ್ಲಿಸುವ ಕೆಲಸ ಮಾಡಲಾಗಿದೆ.
ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಪಾಟೀಲ್, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂಡಿ ಪ್ರಕಟಣೆ ಮೂಲಕ ಹೇಳಿಕೆ ನೀಡಿ,ಮುಜಗರ ಉಂಟು ಮಾಡಿದ್ದಾರೆ. ವೈಯಕ್ತಿಕ ಲಾಭಕ್ಕೆ ನಾವು ಮುಂದಾಗುವುದಿಲ್ಲ. ಯಾರ ಬಳಿಯು ವೈಯಕ್ತಕ ಲಾಭ ಪಡೆಯುವ ಉದ್ದೇಶವಿಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದರು.ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಪಾಟೀಲ್, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂಡಿ ಅವರು ಶಾಸಕ ಬಸವರಾಜ ರಾಯರಡ್ಡಿ ಕಾರ್ ಹತ್ತಿ ಬರೀ ಪೋಸ್ ಕೊಡ್ತಾರೆ. ಯಾರಿಗಾದರೂ ಅಪಘಾತ ಆದವರಿಗೆ ಇಲ್ಲವೇ ಕಷ್ಟದಲ್ಲಿದ್ದವರಿಗೆ ಒಂದು ಸಹಾಯ ಮಾಡಿದ್ದಾರೆಯೇ, ಇವರಿಂದ ಜನರ ಕಷ್ಟಕ್ಕೆ ಸ್ಪಂದನೆ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದರು.
ಮಾಜಿ ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಕೆಲಸ ಮಾಡಲಾಗುವುದು. ಅವರ ಪರ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತೇವೆ. ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ವಯಸ್ಸು ಆಗಿದ್ದು, ಅವರು ಯುವಕರಿಗೆ ಅವಕಾಶ ನೀಡಿ, ಹಿರಿಯರಾಗಿ ಮಾರ್ಗದರ್ಶನ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಫಕೀರಪ್ಪ ತಳವಾರ, ನಿಲ್ಲನಗೌಡ ಪೊಲೀಸ್ ಪಾಟೀಲ್, ಷಣ್ಮುಖಪ್ಪ ರಾಂಪೂರ, ಪ್ರಕಾಶ ಚಿನ್ನೂರ ಇದ್ದರು.