ರೋಣ: ಪ್ರತಿ ವರ್ಷ ಶಾಸಕರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾಗುವ ₹ 2 ಕೋಟಿ ಅನುದಾನದಲ್ಲಿ 6 ತಿಂಗಳಲ್ಲಿ ₹ 50 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ ಎಂದು ಶಾಸಕ ಸಿ.ಸಿ. ಪಾಟೀಲ ಬೇಸರ ವ್ಯಕ್ತಪಡಿಸಿದರು.
ಸಮುದಾಯ ಭವನ ನಿರ್ಮಾಣ, ಸಣ್ಣ-ಪುಟ್ಟ ರಸ್ತೆ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಶಾಸಕರಿಗೆ ಕೊಡುವ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ದ ₹2 ಕೋಟಿ 6 ತಿಂಗಳಾಗುತ್ತಾ ಬಂದರೂ ಪೂರ್ಣ ಮಂಜೂರಾಗಿಲ್ಲ. ಹೀಗಾದರೇ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕು ಎಂದಿರುವ ಅವರು, ಇದರಿಂದ ಜನರ ಬೇಡಿಕೆಗಳಿಗ ತಕ್ಷಣವೇ ಸ್ಪಂದಿಸಲು ಸಮಸ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೌಜಗೇರಿ ಗ್ರಾಮದಲ್ಲಿ ಜಿಪಂನಿಂದ ₹ 60 ಲಕ್ಷ ವೆಚ್ಚದಲ್ಲಿ 1007 ಮೀಟರ್ ಉದ್ದ, 3.5 ಮೀಟರ್ ಅಗಲ, 6 ಇಂಚು ಕಾಂಕ್ರೀಟ್ , ರಸ್ತೆ ಒಂದು ಬದಿ ಚರಂಡಿ ನಿರ್ಮಾಣ, ಎರಡು ಕಡೆ ಸಿಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದ ಅವರು, ಜನತೆ ಮುಂದೆ ನಿಂತು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ತೆಗೆದುಕೊಳ್ಳಬೇಕು ಎಂದರು.ಯಾ.ಸ. ಹಡಗಲಿ-ಕೌಜಗೇರಿ ಮಧ್ಯೆ ಹಳ್ಳಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹1.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು. ಕೌಜಗೇರಿ ಗ್ರಾಮದೇವತೆ ಸಮುದಾಯ ಭವನ ನಿರ್ಮಣಕ್ಕೆ ಶೀಘ್ರ ಅನುದಾನ ನೀಡಲಾಗುವುದು ಎಂದು ತಿಳಿಸಿದರು.