ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಏ.೬ ರ ಕನ್ನಡಪ್ರಭ ಪತ್ರಿಕೆಯಲ್ಲಿ ತಾಲೂಕು ಕಚೇರಿ ಮುಂದೆ ಶೌಚಾಲಯಕ್ಕೆ ಆಕ್ರೋಶ, ಶೌಚಾಲಯ ಸ್ಥಳಾಂತರಿಸಿ, ಕಚೇರಿಯ ಅಂದ ಹೆಚ್ಚಿಸಲಿ ಎಂಬ ವರದಿಗೆ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಎಚ್ಚೆತ್ತು ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ ಗಮನಕ್ಕೆ ತಂದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಪಟ್ಟಣದ ಮೈಸೂರು-ಊಟಿ ಹೆದ್ದಾರಿಯ ಬಳಿ ತಾಲೂಕು ಕಚೇರಿ ಇದೆ ಜೊತೆಗೆ ತಹಸೀಲ್ದಾರ್ ನಿವಾಸ ಕೂಡ ಇದೆ. ಶೌಚಾಲಯ ನಿರ್ಮಾಣವಾದರೆ ತಾಲೂಕು ಕಚೇರಿ ಅಂದ ಕೆಡುತ್ತದೆ ಹಾಗು ಕಚೇರಿಗೆ ಬರುವ ಸಾರ್ವಜನಿಕರಿಗೆ ವಾಸನೆ ಬರಲಿದೆ ಎಂದು ಕನ್ನಡಪ್ರಭ ವರದಿ ಪ್ರಕಟಿಸಿ ತಾಲೂಕು ಆಡಳಿತದ ಗಮನ ಸೆಳೆದಿತ್ತು.ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕನ್ನಡಪ್ರಭದೊಂದಿಗೆ ಮಾತನಾಡಿ, ಕನ್ನಡಪ್ರಭ ವರದಿ ಹಿನ್ನಲೆ ಮಾದರಿ ಶೌಚಾಲಯ ನಿರ್ಮಿಸುತ್ತಿದ್ದ ಕೆಲಸಕ್ಕೆ ಬ್ರೇಕ್ ಹಾಕಲಾಗಿದೆ ಎಂದರು.
ಕನ್ನಡಪ್ರಭಕ್ಕೆ ಮೆಚ್ಚುಗೆ: ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಮಾದರಿ ಶೌಚಾಲಯ ನಿರ್ಮಿಸುತ್ತಿದ್ದ ಬಗ್ಗೆ ಮೊದಲ ಬಾರಿಗ ಸೊಲ್ಲೆತ್ತಿ ತಾಲೂಕು ಆಡಳಿತದ ಗಮನ ಸೆಳೆದು ಕಾಮಗಾರಿ ಸ್ಥಗಿತಗೊಳಿಸಲು ಮುಂದಾದ ಕನ್ನಡಪ್ರಭ ಪತ್ರಿಕೆಗೆ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್,ಪುರಸಭೆ ಎಸ್ಡಿಪಿಐ ಸದಸ್ಯ ಎಚ್.ಆರ್.ರಾಜಗೋಪಾಲ್, ಗುಂಡ್ಲುಪೇಟೆ ವೆಂಕಟೇಶ್ ಸೇರಿದಂತೆ ಹಲವರು ಮಂದಿ ಕನ್ನಡಪ್ರಭ ವರದಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಮಾದರಿ ಶೌಚಾಲಯ ಗುಂಡ್ಲುಪೇಟೆ ತಾಲೂಕು ಕಚೇರಿ ಮುಂದೆ ಬೇಡ,ಬದಲು ಬೇರೆ ಸ್ಥಳದಲ್ಲಿ ಜಾಗ ಹುಡುಕುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ.ನಾನು ಕೂಡ ಸ್ಥಳ ಪರಿಶೀಲನೆ ನಡೆಸಿ ಮಾದರಿ ಶೌಚಾಲಯ ನಿರ್ಮಿಸಲಾಗುವುದು.