ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಸಂಚಾರಿ ಆರೋಗ್ಯ ಘಟಕದ ವಾಹನಗಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾರ್ಮಿಕರಿಗೆ ಎಲ್ಲಾ ರೀತಿಯ ಚಿಕಿತ್ಸೆಗೆ ಒಳಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಧುನಿಕ ತಂತ್ರಜ್ಞಾನ ಹಾಗೂ ಪರಿಣಿತ ವೈದ್ಯರ ತಂಡದೊಂದಿಗೆ ಸಂಚಾರಿ ಆರೋಗ್ಯ ವಾಹನ ಪೂರೈಸಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.ನಗರದ ಕಾರ್ಮಿಕ ಕಚೇರಿಯಲ್ಲಿ ಮಂಗಳವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೂತನ ಎರಡು ಸಂಚಾರಿ ಆರೋಗ್ಯ ಘಟಕದ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.ಕಟ್ಟಡ ಕಾರ್ಮಿಕರಿಗೆ ತುರ್ತು ಆರೋಗ್ಯ ಪರಿಸ್ಥಿತಿ ಕಂಡುಬಂದ ಸಂದರ್ಭಗಳಲ್ಲಿ ಸಮೀಪದ ಆಸ್ಪತ್ರೆಗೆ ಅಂಬ್ಯೂಲೆನ್ಸ್ ಮಾದರಿ ಸೇವೆಯನ್ನು ಒದಗಿಸಿ, ತದನಂತರ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಮಿಕರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಜೊತೆಗೆ ಪ್ರತಿ ವಾಹನದಲ್ಲೂ ಎಂಬಿಬಿಎಸ್ ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ ಎಂದರು.ಸಂಚಾರಿ ವಾಹನ ಜಿಲ್ಲೆಯಾದ್ಯಂತ ಸಂಚರಿಸಿ ರಕ್ತದೊತ್ತಡ, ರಕ್ತಹೀನತೆ, ಅಪೌಷ್ಠಿಕತೆ, ತುರ್ತು ಔಷಧ, ಮೂರ್ಛೆ ರೋಗ, ಮಧುಮೇಹ, ಬಿಪಿ, ತಾಯಿಯ ಆರೋಗ್ಯ, ಮಗುವಿನ ಜನನ ಮತ್ತು ಶಿಶು ಆರೋಗ್ಯ, ದೀರ್ಘಕಾಲದ ಸಂವಹನ ರೋಗಗಳ ನಿರ್ವಹಣೆ, ಕ್ಷಯರೋಗ, ಹೆಚ್ಐವಿ, ಕುಷ್ಠ, ಮಲೇರಿಯಾ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಚಿಕಿತ್ಸೆಯನ್ನು ಉಚಿತವಾಗಿ ನೀಡಲಿದೆ ಎಂದು ಹೇಳಿದರು.ಪ್ರಸ್ತುತ ಜಿಲ್ಲೆಯಲ್ಲಿ 1.40 ಲಕ್ಷ ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿದ್ದು ಮದುವೆ, ವೈದ್ಯಕೀಯ ವೆಚ್ಚ, ಹೆರಿಗೆ ಸೌಲಭ್ಯ ನೀಡುತ್ತಿದೆ. ಪ್ರಸಕ್ತ ಸಾಲಿನ ಅಪಘಾತದಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ರಾಜ್ಯ ಸರ್ಕಾರ ₹5.13 ಕೋಟಿ ಹಣ ನೇರ ಖಾತೆಗೆ ಜಮಾಯಿಸಿ ನೊಂದವರಿಗೆ ಆಸರೆಯಾಗಿದೆ ಎಂದರು.ಈಗಾಗಲೇ ರಾಜ್ಯದಲ್ಲಿ ₹46 ಕೋಟಿ ವೆಚ್ಚದಲ್ಲಿ ಒಟ್ಟು 100 ವಾಹನಗಳನ್ನು ರಾಜ್ಯಾದ್ಯಂತ ಸಂಚರಿಸುತ್ತಿದ್ದು ಎಲ್ಲಾ ಕಾರ್ಮಿಕರು ಮತ್ತು ಅವಲಂಬಿತರಿಗೆ ಅಗತ್ಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಕಾರ್ಮಿಕರಿರುವ ಸ್ಥಳಕ್ಕೆ ತೆರಳಿ ನೀಡುತ್ತಿದೆ. ಅದರಂತೆ ಜಿಲ್ಲಾ ಕೇಂದ್ರಕ್ಕೂ ಎರಡು ವಾಹನಗಳನ್ನು ನೀಡಿ ಕಾರ್ಮಿಕರಿಗೆ ಸ್ಪಂದಿಸಿದೆ ಎಂದು ಹೇಳಿದರು.ಕಾರ್ಮಿಕರ ಬದುಕಿನ ಶ್ರೇಯೋಭಿವೃದ್ಧಿಗೆ ಕಟ್ಟಡ ನಿರ್ಮಿಸುವ ಮಾಲೀಕರಿಂದ ಶೇ. 1ರ ಸುಂಕವನ್ನು ಕಾರ್ಮಿಕ ಇಲಾಖೆಗೆ ಕಡ್ಡಾಯಗೊಳಿಸಿದ್ದು ಇದರಿಂದ ಬಡ ಕಾರ್ಮಿಕ ವರ್ಗಕ್ಕೆ ಸಕಲ ಸವಲತ್ತನ್ನು ಪೂರೈಸಿ ತುರ್ತು ವೇಳೆ ಸಹಕರಿಸುತ್ತಿದೆ. ಜೊತೆಗೆ ವಾಹನದಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಶುಶ್ರೂಷಕರು ಸೇವಾ ಮನೋಭಾವನದಿಂದ ಕರ್ತವ್ಯ ನಿರ್ವಹಿಸ ಬೇಕು ಎಂದು ಕಿವಿಮಾತು ಹೇಳಿದರು.ಕಾರ್ಮಿಕ ಅಧಿಕಾರಿ ಸುರೇಶ್ ಮಾತನಾಡಿ, ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ವಾಹನ ಕಾರ್ಮಿಕರಿಗೆ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ರಾಜ್ಯ ಸರ್ಕಾರ 2 ವಾಹಗಳನ್ನು ಒದಗಿಸಿಕೊಟ್ಟಿದ್ದು 20ಕ್ಕೂ ಹೆಚ್ಚು ವಿವಿಧ ಸೌಲಭ್ಯ ಈ ವಾಹನದಿಂದ ಅಡಕವಾಗಿದೆ ಎಂದು ತಿಳಿಸಿದರು.ಇದೇ ವೇಳೆ 20 ಬಡಗಾರೆ ಕೆಲಸಗಾರರಿಗೆ ಟೂಲ್ಕಿಟ್ ಹಾಗೂ ಅಪಘಾತದಲ್ಲಿ ಮೃತಪಟ್ಟ ವಾಣಿಜ್ಯ ಚಾಲಕರ ಈರ್ವರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳ ಆದೇಶ ಪ್ರತಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಎಂ.ಸುಭಾಷ್, ಕಾರ್ಮಿಕ ನಿರೀಕ್ಷಕರಾದ ಪ್ರಭಾಕರ್, ಪ್ರವೀಣ್ಕುಮಾರ್, ತರೀಕೆರೆ ಕಾರ್ಮಿಕ ನಿರೀಕ್ಷಕ ಮಹಾದೇವಪ್ಪ, ಕಾರ್ಮಿಕ ಕಲ್ಯಾಣ ಮಂಡಳಿ ಅಭಿಯಂತರ ಹ್ಯಾರಿಸ್ ಉಪಸ್ಥಿತರಿದ್ದರು.
17 ಕೆಸಿಕೆಎಂ 4ಚಿಕ್ಕಮಗಳೂರಿನ ಕಾರ್ಮಿಕ ಕಚೇರಿಯಲ್ಲಿ ಮಂಗಳವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾ ಣ ಮಂಡಳಿಯಿಂದ ನೂತನ ಎರಡು ಸಂಚಾರಿ ಆರೋಗ್ಯ ಘಟಕದ ವಾಹನಗಳಿಗೆ ಶಾಸಕ ಎಚ್.ಡಿ. ತಮ್ಮಯ್ಯ ಚಾಲನೆ ನೀಡಿದರು.