ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕಂದಾಯ, ತಾಲೂಕು ಪಂಚಾಯಿತಿ, ಅರಣ್ಯ, ಕೋಪರೇಟಿವ್ ಸೊಸೈಟಿ, ಸಮಾಜ ಕಲ್ಯಾಣ, ಸರ್ವೇ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗಳು ಸೇರಿ ಒಟ್ಟು ೨೮ ದೂರುಗಳು ಸಲ್ಲಿಕೆಯಾಗಿದ್ದು ಈ ಪೈಕಿ ಎರಡು ದೂರುಗಳನ್ನು ಫಾರ್ಮ್ ೧,೨ರಲ್ಲಿ ರಿಜಿಸ್ಟರ್ ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಇನ್ನು ಉಳಿದ ದೂರುಗಳಿಗೆ ಕಾಲಮಿತಿಯಲ್ಲಿ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಲೋಕಾಯುಕ್ತ ಪ್ರಭಾರ ಅಧೀಕ್ಷಕ ಕುಮಾರಚಂದ್ರ ಹೇಳಿದ್ದಾರೆ.ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಗ್ರಾಮ ಮಟ್ಟದಲ್ಲಿ ಭ್ರಷ್ಟಚಾರ ಕುರಿತು ಜಾಗೃತಿ ಮೂಡಿಸಲು ಗ್ರಾಮ ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಲು ಅವಕಾಶ ಕಲ್ಪಿಸಲು ಜಿ.ಪಂ.ಸಿಇಒ ಅವರಿಗೆ ಮನವಿ ಮಾಡಲಾಗಿದೆ. ಪೂರಕ ದಾಖಲೆಗಳವುಳ್ಳ ದೂರುಗಳನ್ನು ಲೋಕಾಯುಕ್ತ ಸಲ್ಲಿಸಬಹುದು ಸುಳ್ಳ ಕೇಸ್ ಸಲ್ಲಿಸಿದವರ ಮೇಲೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.ತಣ್ಣೀರುಪಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೇರಿ ಎಂಬಲ್ಲಿರುವ ಪೆಟ್ರೋಲ್ ಬಂಕಿಗೆ ನೀಡಿರುವ ಪರವಾನಗಿಯಲ್ಲಿ ಗ್ರಾಮ ಪಂಚಾಯತಿಗೆ ಆರ್ಥಿಕ ನಷ್ಟವುಂಟಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಕೆ.ಎಸ್.ಅಬ್ದುಲ್ಲ ದೂರು ಸಲ್ಲಿಸಿದರು. ಪಂಚಾಯತಿನಿಂದ ನೀಡಿರುವ ಪರವಾನಗಿಯಲ್ಲಿ ಹಲವಾರು ಲೋಪದೋಷಗಳಿದ್ದು, ಸರ್ಕಾರದ ನಿಯಮಾವಳಿಗಳನ್ನು ಮೀರಿ ಪರವಾನಗಿ ನೀಡಿರುವುದರಿಂದ ಗ್ರಾಮಪಂಚಾಯತಿಗೆ ಆರ್ಥಿಕ ನಷ್ಟವುಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದರು. ನಿಟ್ಟಡೆ ಗ್ರಾಮದ ಸತೀಶ್ ಪೂಜಾರಿ ಅವರು ಮನೆ ನಿವೇಶನದ ಹಕ್ಕುಪತ್ರಕ್ಕೆ ಪಹಣಿ ದಾಖಲಿಸುವಂತೆ ೨೦೨೩ ಮೇಯಲ್ಲಿ ಅರ್ಜಿ ಸಲ್ಲಿಸಲಾಗಿದೆ ಈ ಬಗ್ಗೆ ಹಲವಾರು ಬಾರಿ ವಿಚಾರಿಸಿದರೂ ಯಾವುದೇ ಪ್ರತ್ಯುತ್ತರ ಸಿಗದೆ ಬೇಸತ್ತು ಹೋಗಿರುವುದಾಗಿ ತಿಳಿಸಿದರು. ಪ್ಲಾಟಿಂಗ್ ಮಾಡಲು ೨೦೨೩ರಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಮಾಹಿತಿ ನಮಗೆ ನೀಡಿಲ್ಲ ಎಂದು ನಿಟ್ಟಡೆ ಗ್ರಾಮದ ಜನಾರ್ದನ ತಿಳಿಸಿದರು.
ತಾಲೂಕು ಕಚೇರಿಯ ೧೦, ತಾಲೂಕು ಪಂಚಾಯಿತಿ ೭, ಅರಣ್ಯ ಇಲಾಖೆ ೨, ಸರ್ವೇ, ಸಮಾಜ ಕಲ್ಯಾಣ, ಪೊಲೀಸ್, ಕೋಪರೇಟಿವ್ ಸೊಸೈಟಿ ಹಾಗೂ ಶಿಕ್ಷಣ ಇಲಾಖೆಗಳ ಮೇಲೆ ತಲಾ ಒಂದು ದೂರುಗಳು ಬಂದಿದ್ದವು.ಡಿವೈಎಸ್ಪಿ ಸುರೇಶ್ ಕುಮಾರ್ ಪಿ., ತಾ.ಪಂ. ಇಒ ಭವಾನಿಶಂಕರ್ ಎನ್, ತಹಸೀಲ್ದಾರ್ ಪೃಥ್ವಿ ಸಾನಿಕಂ, ಇನ್ಸ್ ಪೆಕ್ಟರ್ ಭಾರತಿ ಪಿ. ಮತ್ತು ಚಂದ್ರಶೇಖರ್ ಕೆ.ಎನ್. ಉಪಸ್ಥಿತರಿದ್ದರು. ಲೋಕಾಯುಕ್ತ ಸಿಬ್ಬಂದಿಗಳಾದ ಮಹೇಶ್, ನಾಗಪ್ಪ, ಯತೀಶ್, ರಾಜಶೇಖರ್, ದುಂಡಪ್ಪ, ಗಂಗಣ್ಣ, ವಿವೇಕ್, ತಾಲೂಕು ಮಟ್ಟದ ಅಧಿಕಾರಿಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.......................ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಭಾರ ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ಇರುವುದು. ಸಾರ್ವಜನಿಕರನ್ನು ಪದೇ ಪದೇ ಸತಾಯಿಸುವ ಕಾರ್ಯ ಮಾಡಬಾರದು. ಗುತ್ತಿಗೆದಾರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ವಿರುದ್ಧ ದೂರ ಬಂದರೂ ಕ್ರಮ ವಹಿಸಲಾಗುತ್ತದೆ ಎಂದರು.