ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ದೆಹಲಿ ದರ್ಬಾರ್‌ ಸಂಸ್ಕೃತಿ ಬದಲಿಸಿದ ಮೋದಿ: ಎಂಎಲ್‌ಸಿ ಸಿ.ಟಿ.ರವಿ

KannadaprabhaNewsNetwork | Updated : Jun 13 2025, 01:07 AM IST

ದೆಹಲಿ ದರ್ಬಾರ್ ಕಾಯಕ ಸಂಸ್ಕೃತಿಯನ್ನೇ ಪ್ರಧಾನಿ ನರೇಂದ್ರ ಮೋದಿ ಕಳೆದ 11 ವರ್ಷದಲ್ಲಿ ಬದಲಾಯಿಸಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಆದ್ಯತೆಯಾಗಿದ್ದ ರೋಟಿ, ಕಪಡಾ, ಮಖಾನ್‌ಗಿಂತಲೂ ಮುಂದೆ ಹೋಗಿ, ಬದಲಾವಣೆಯನ್ನು ತಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು

ದೇಶದಲ್ಲಿ ಬದಲಾವಣೆ ತಂದ ಪ್ರಧಾನಿ । ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ದೆಹಲಿ ದರ್ಬಾರ್ ಕಾಯಕ ಸಂಸ್ಕೃತಿಯನ್ನೇ ಪ್ರಧಾನಿ ನರೇಂದ್ರ ಮೋದಿ ಕಳೆದ 11 ವರ್ಷದಲ್ಲಿ ಬದಲಾಯಿಸಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಆದ್ಯತೆಯಾಗಿದ್ದ ರೋಟಿ, ಕಪಡಾ, ಮಖಾನ್‌ಗಿಂತಲೂ ಮುಂದೆ ಹೋಗಿ, ಬದಲಾವಣೆಯನ್ನು ತಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಣ, ಕೃಷಿ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ಶಸ್ತ್ರಾಸ್ತ್ರ, ಕೈಗಾರಿಕೆ, ವ್ಯಾಪಾರ, ವಾಣಿಜ್ಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಜಾಗತಿಕ ಶಕ್ತಿಯಾಗಿ ರೂಪಿಸುವಲ್ಲಿ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸುತ್ತಿದ್ದಾರೆ ಎಂದರು.

ವಿಕಸಿತ ಭಾರತ, ವಿಶ್ವ ಮಿತ್ರ ಭಾರತ, ವಿಶ್ವ ಗುರು ಭಾರತವಾಗುವುದು ನಮ್ಮ ಮುಂದಿನ ಸಂಕಲ್ಪವಾಗಿದೆ. ಜಿಎಸ್‌ಟಿ ಪರಿಚಯಿಸುವ ಮೂಲಕ ವಾರ್ಷಿಕ 10 ಲಕ್ಷ ಕೋಟಿಗೂ ಅದಿಕ ತೆರಿಗೆ ಸಂಗ್ರಹಿಸಲಾಗುತ್ತಿದೆ. ತೆರಿಗೆ ವಂಚನೆ ಮಾಡಿ ಮಹಾರಾಜರಂತೆ ಮೆರೆಯುತ್ತಿದ್ದಂತಹವರು ಈಗ ತೆರಿಗೆ ಹಣವನ್ನು ಕಟ್ಟುವಂತಹ ಅನಿವಾರ್ಯತೆ ತಂದಿದ್ದೇವೆ ಎಂದು ಹೇಳಿದರು.

ಡಿಬಿಟಿ ಮೂಲಕವೇ ಈಗ ನೇರವಾಗಿ ಫಲಾನುಭವಿಗಳ ಖಾತೆಗೆ ಪೈಸೆ ಪೈಸೆ ಸಮೇತ ನೇರವಾಗಿ ವರ್ಗಾವಣೆಯಾಗುತ್ತಿದೆ. 1500ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ನರೇಂದ್ರ ಮೋದಿ ಸರ್ಕಾರ ರದ್ಧುಪಡಿಸಿದೆ. ಇಂದು ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರ ಹೊಮ್ಮಿದೆ ಎಂದರು.

ನೆಹರು ಶಿಲಾನ್ಯಾಸ ಮಾಡಿದ್ದನ್ನು ರಾಜೀವ್ ಗಾಂಧಿ ಉದ್ಘಾಟನೆ ಮಾಡುತ್ತಿದ್ದಂತಹ ಕಾಲವೂ ಹಿಂದೆ ಇತ್ತು. ಒಂದು ಕಾಮಗಾರಿ ಮುಗಿಯಲು ಮೂರು ತಲೆಮಾರುವರೆಗೂ ಕಾಯಬೇಕಾಗಿತ್ತು. ಈಗ ಕಾಲ ಮಿತಿಯಲ್ಲೇ ಯೋಜನೆಗಳು ಪೂರ್ಣಗೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರೇ ಶಂಕು ಸ್ಥಾಪನೆ ನೆರವೇರಿಸಿ, ಉದ್ಘಾಟನೆ ಮಾಡುವಷ್ಟರ ಮಟ್ಟಿಗೆ ದೇಶವು ತೀವ್ರತೆ ಪಡೆದಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳು, ಅನಿಲಕುಮಾರ ನಾಯ್ಕ, ಐರಣಿ ಅಣ್ಣೇಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಡಾಳ ಮಲ್ಲಿಕಾರ್ಜುನ, ಚಂದ್ರಶೇಖರ ಪೂಜಾರಿ, ಆಲೂರು ನಿಂಗರಾಜ, ಡಿ.ಎಲ್.ಶಿವಪ್ರಕಾಶ, ಎಚ್.ಪಿ.ವಿಶ್ವಾಸ ಇತರರು ಇದ್ದರು.

ಸ್ವಜನಪಕ್ಷಪಾತಿ ಸಿದ್ದರಾಮಯ್ಯ ಮಾರ್ಕ್ಸ್ ಕೊಡ್ತಾರಂತೆ!

ಪ್ರಧಾನಿ ನರೇಂದ್ರ ಮೋದಿಯವರ 11 ವರ್ಷದ ಆಡಳಿತವನ್ನು ಮೆಚ್ಚಿ ದೇಶದ ಜನತೆಗೆ ಹಂಡ್ರೆಡ್ ಔಟ್ ಆಫ್ ಹಂಡ್ರೆಡ್ ಮಾರ್ಕ್ಸ್ ನೀಡಿದ್ದು, ಪ್ರಜಾಪ್ರಭುತ್ವದಲ್ಲಿ ಮಾರ್ಕ್ಸ್ ನೀಡಬೇಕಾಗಿದ್ದು ಜನರೆ ಹೊರತು ನೀವಲ್ಲ ಎಂದು ಸಿ.ಟಿ.ರವಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಶೂನ್ಯ ಅಂಕ ಎಂದು ಹೇಳಿದ್ದಾರೆ. ಆದರೆ, ದೇಶದ ಜನತೆ ಮೋದಿ ಸರ್ಕಾರಕ್ಕೆ ಔಟ್ ಆಫ್‌ ಹಂಡ್ರೆಡ್ ಮಾರ್ಕ್ಸ್ ಗಳನ್ನು ಕೊಟ್ಟಿದ್ದಾರೆ ಎಂದರು.

ಮೋದಿಯವರು ಭ್ರಷ್ಟಾಚಾರದಲ್ಲಿ ಶೂನ್ಯ ಮಾರ್ಕ್ಸ್‌. ಸ್ವಜನ ಪಕ್ಷಪಾತದ ದೂರು ಇಲ್ಲ. ಇದರಲ್ಲೂ ಶೂನ್ಯ ಅಂಕ. ಕಳೆದ 11 ವರ್ಷದಲ್ಲಿ ವ್ಯಕ್ತಿಗತ ಕಾರಣಕ್ಕಾಗಿ ಒಂದೇ ಒಂದು ದಿನವೂ ರಜೆಯನ್ನು ಮೋದಿಯವರು ಪಡೆದಿಲ್ಲ ಎಂದರು.