ಕನಕಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ಹೇಳಿಕೆ
ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗುವ ಮೂಲಕ ದೇಶದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2047ರೊಳಗೆ ನವ ಭಾರತ ಸಂಕಲ್ಪ ಬಿಜೆಪಿಯದ್ದಾಗಿದ್ದು, ಈ ದಿಶೆಯಲ್ಲಿ ಮೋದಿ ಅವರು 10 ವರ್ಷದಲ್ಲಿ ಭಾರತದ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಸಫಲರಾಗಿದ್ದಾರೆ ಎಂದರು.ಕನಕಗಿರಿ, ಅಂಜನಾದ್ರಿ ಹಾಗೂ ಇಟಗಿ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹1500 ಕೋಟಿ ವೆಚ್ಚದ ಯೋಜನೆ ರೂಪಿಸಿದೆ. ಜಿಲ್ಲೆಯಲ್ಲಿ ರೈಲ್ವೆ ಸೇತುವೆಗಳ ನಿರ್ಮಾಣ, ಕೇಂದ್ರ ಸರ್ಕಾರದ ಶಾಲೆ ತೆರೆಯುವುದು, ರೈತರ, ಕಾರ್ಮಿಕ ಹಾಗೂ ಮಹಿಳೆಯರ ಸ್ವಾವಲಂಬನೆ ಬದುಕಿಗೆ ಹೊಸ ಕಾರ್ಯಕ್ರಮಗಳ ರೂಪಿಸುವ ಚಿಂತನೆ ಹೊಂದಿದ್ದೇನೆ ಎಂದರು.
ಅಸಮಾಧಾನಿತರ ಭೇಟಿ:
ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಸಿಗದೆ ಇರುವ ಕಾರಣಕ್ಕೆ ಸ್ಥಳೀಯ ಮುಖಂಡರು ಅಸಮಾಧಾನಗೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಮಾಹಿತಿ ತಿಳಿದ ಡಾ. ಬಸವರಾಜ ಶನಿವಾರ ಅವರ ಮನೆಗಳಿಗೆ ತೆರಳಿ ಕುಶಲೋಪರಿ ವಿಚಾರಿಸಿ, ಕುಟುಂಬಸ್ಥರ ಜತೆ ಚರ್ಚಿಸಿ, ಮತಯಾಚಿಸಿದರು.ಬಳಿಕ ಕನಕಾಚಲ ದೇವಸ್ಥಾನ, ಸುವರ್ಣಗಿರಿ ಸಂಸ್ಥಾನ ಮಠಕ್ಕೆ ನಂತರ ನಗರದ ಉತ್ತರ ದಿಕ್ಕಿನಲ್ಲಿರುವ ಶ್ರೀ ತೊಂಡಿತೇವರಪ್ಪ (ಆಂಜನೇಯ್ಯ) ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು.
ಜಡಿಯಪ್ಪ ಮುಕ್ಕುಂದಿ, ಮೌನೇಶ ದಡೇಸೂಗುರು, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ರಂಗಪ್ಪ ಕೊರಗಟಗಿ, ಸುಭಾಷ ಕೆ., ಶಿವಯ್ಯಸ್ವಾಮಿ ನವಲಿ, ಹರೀಶ ಪೂಜಾರ, ಅಶ್ವಿನಿ ದೇಸಾಯಿ, ಹುಲಿಗೆಮ್ಮ ನಾಯಕ, ನಿಂಗಪ್ಪ ನಾಯಕ, ಪ್ರಕಾಶ ಹಾದಿಮನಿ ಸೇರಿದಂತೆ ಇತರರು ಇದ್ದರು.