ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನಾಚರಣೆಯಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಡು ಬೀದಿಯಲ್ಲಿ ಪಕೋಡಾ ಮಾಡಿ ಮಾರಿದರು.ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದ ರಸ್ತೆಯಲ್ಲಿ ಬಾಂಡ್ಲಿ ಇಟ್ಟು ಪಕೋಡ ಕರಿದ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಮಾತನಾಡಿ, ಇಂದು ಇಡೀ ದೇಶಕ್ಕೆ ಕರಾಳ ದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಈ ದೇಶದ ಯುವಕರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದರು. ಇದುವರೆಗೂ ಒಂದೂ ಉದ್ಯೋಗ ಸೃಷ್ಟಿ ಮಾಡಿಲ್ಲ. ಹಾಗಾಗಿ ಯುವ ಕಾಂಗ್ರೆಸ್ ಈ ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿವಸವನ್ನಾಗಿ ಆಚರಿಸುತ್ತಿದೆ ಎಂದರು.
ಮೋದಿ ಹೇಳಿದಂತೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯಾಗಿದ್ದರೆ ಇಷ್ಟೊತ್ತಿಗೆ 11 ವರ್ಷಕ್ಕೆ 22 ಕೋಟಿ ನಿರುದ್ಯೋಗ ನಿವಾರಣೆ ಆಗುತ್ತಿತ್ತು. ಚೈನಾ, ಅಮೆರಿಕಾ ದೇಶಗಳನ್ನು ಮೀರಿಸುವ ವೇಗದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿತ್ತು. ಆದರೆ ಇದುವರೆಗೂ ಅದು ಆಗಿಲ್ಲ. ಹಾಗಾಗಿ ಈ ವಿಷಯವನ್ನು ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಗಂಭೀರವಾಗಿ ಪರಿಗಣಿಸಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ನಿರುದ್ಯೋಗಿಗಳ ದಿನಾಚರಣೆಯನ್ನಾಗಿ ಮಾಡಿದೆ ಎಂದರು.ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಗಾಢ ನಿದ್ದೆಯಿಂದ ಎದ್ದು ವಿದ್ಯಾವಂತ ಪದವೀದರ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ. ಇಲ್ಲವಾದರೇ ಮುಂಬರುವ 2029ರ ಲೋಕಸಭಾ ಚುನಾವಣೆಯಲ್ಲಿ ಸೋತು ಸ್ವತಃ ಪಕೋಡ ಮಾಡುವ ಪರಿಸ್ಥಿತಿ ಅವರಿಗೇ ನಿರ್ಮಾಣವಾಗಲಿದೆ ಎಂದು ಕಾರೆಹಳ್ಳಿ ಉಲ್ಲಾಸ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ಪೀರ್, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಪದವೀಧರ ಘಟಕದ ಮುದಸಿರ್, ಯುವ ಘಟಕದ ದಾದಪೀರ್, ವಿನಯ ಪ್ರಸಾದ್, ಪ್ರದೀಪ್ ಗೌಡ, ಪವನ ನಾಯ್ಕ್, ಮಹಾಂತೇಶ್, ವೈಶಾಖ, ನಿಜಾಮ್, ಮಧು ಶ್ರೀನಿವಾಸ್, ಯಸೀನ, ಡಿ.ಎನ್.ಮಾಲಾರಪ್ಪ ಸೇರಿದಂತೆ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.