ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಕೆ.ಎಸ್ ನವೀನ್ ಮತದಾರರ ಬಳಿ ಹೋಗಲು ಹಿಂಜರಿಕೆ ಇಲ್ಲ
ಕನ್ನಡಪ್ರಭಾರ್ತೆ ಚಿತ್ರದುರ್ಗಪ್ರಧಾನಿ ನರೇಂದ್ರ ಮೋದಿಯವರ ಕಳೆದ ಹತ್ತು ವರ್ಷಗಳಲ್ಲಿನ ನೂರಾರು ಯೋಜನೆಗಳೇ ಮತಯಾಚನೆಗೆ ಶ್ರೀರಕ್ಷೆಯಾಗಿವೆ. ಅವುಗಳನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಮತದಾರರ ಬಳಿ ಹೋಗುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್ ನವೀನ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಯಾರು ಹಸಿವಿನಿಂದ ನರಳಬಾರದೆಂದು ಜಿಲ್ಲೆಯಲ್ಲಿ 16,37,685 ಜನರಿಗೆ ಪಡಿತರ ಧಾನ್ಯ ನೀಡಿದ್ದಾರೆ. ಆರು ಲಕ್ಷದ ಐವತ್ತು ಸಾವಿರ ಜನರಿಗೆ ಐದು ಲಕ್ಷದವರೆಗೆ ಅತಿ ದೊಡ್ಡ ವಿಮೆ ಯೋಜನೆ ಸಿಕ್ಕಿದೆ. ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಒಂದು ಲಕ್ಷ ತೊಂಬತ್ತು ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 9908 ನೂತನ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 3,24,500 ಜನರು ಈ ಶ್ರಮ್ ಕಾರ್ಡ್ ಪಡೆದುಕೊಂಡಿದ್ದಾರೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 27,05,945 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ಆರು ಸಾವಿರ ರು. ಹಾಗೂ ರಾಜ್ಯದಿಂದ ನಾಲ್ಕು ಸಾವಿರ ರು. 3,37,527 ರೈತರ ಖಾತೆಗಳಿಗೆ ಹಣ ಜಮಾ ಆಗುತ್ತಿದೆ. 18,120 ರೈತರ ಹೊಲಗಳಿಗೆ ಸಾಯಿ ಹೆಲ್ತ್ ಕಾರ್ಡ್ ಸಿಕ್ಕಿದೆ. ಜನ್ಧನ್ ಯೋಜನೆ ಶೇ.ನೂರರಷ್ಟು ಅನುಷ್ಠಾನಗೊಂಡಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2014 ರಿಂದ ಇಲ್ಲಿಯವರೆಗೆ ಒಂದು ಸಾವಿರ ಕಿಮೀ ರಸ್ತೆಯಾಗಿದೆ. ವೃದ್ದಾಪ್ಯ ವೇತನ ಯೋಜನೆಯಡಿ ಮೂರು ಲಕ್ಷ ಎಂಟು ಸಾವಿರ ಜನರಿಗೆ ಪಿಂಚಣಿ ಸಿಕ್ಕಿದೆ. ಕೌಶಲ್ಯಾಭಿವೃದ್ದಿ ಯೋಜನೆಯಡಿ 31,477 ಯುವಕರಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಜಿಲ್ಲೆಯಲ್ಲಿ 20 ಜನೌಷಧಿ ಕೇಂದ್ರಗಳು ಆರಂಭಗೊಂಡಿವೆ. 16,722 ಮಹಿಳೆಯರಿಗೆ ವಿಶೇಷ ತರಬೇತಿ ನೀಡಲಾಗಿದೆ. ಸ್ವನಿಧಿ ಯೋಜನೆಯಡಿ 6777 ಬೀದಿ ಬದಿ ವ್ಯಾಪಾರಿಗಳಿಗೆ ತಲಾ ಹತ್ತು ಸಾವಿರ ರು.ಗಳನ್ನು ನೀಡಲಾಗಿದೆ. ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಡಿ 4,36,949 ಫಲಾನುಭವಿಗಳಿಗೆ ಎಲ್ಇಡಿ ಬಲ್ಬ್ ವಿತರಿಸಲಾಗಿದೆ. ಉಜ್ವಲ ಯೋಜನೆಯಡಿ 2,05,331 ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಶ್ರಮಯೋಗಿ ಮಾನಧನ್ ಅಡಿ 7238 ಕಾರ್ಮಿಕರು ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆಂದು ತಿಳಿಸಿದರು.ಮುದ್ರಾ ಯೋಜನೆಯಡಿ ಎರಡು ಲಕ್ಷಕ್ಕೂ ಹೆಚ್ಚು ಮಂದಿಗೆ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಲಕ್ಷಾಂತರ ರೈತರ ಖಾತೆಗಳಿಗೆ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯಡಿ ಹಣ ವರ್ಗಾವಣೆಯಾಗಿದೆ. ಹೈವೆ ನಿರ್ಮಾಣಕ್ಕೆ ಆರು ಸಾವಿರ ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರದ ಇಷ್ಟೆಲ್ಲಾ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಿಳಿಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೋವಿಂದ ಕಾರಂಜೋಳರನ್ನು ಗೆಲ್ಲಿಸಿಕೊಳ್ಳುವುದಾಗಿ ಕೆ.ಎಸ್.ನವೀನ್ ಹೇಳಿದರು.ಕೇಂದ್ರ ಸರ್ಕಾರ ದೇಶದ ಜನರ ಹಿತಕಾಯುವ ಕೆಲಸ ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಃ ಕಾರಣ ಕೇಂದ್ರ ಮೇಲೆ ತಪ್ಪು ಹೊರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಸುರೇಶ್ ಸಿದ್ದಾಪುರ, ಸಂಪತ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ವಕ್ತಾರ ನಾಗರಾಜ್ ಬೇಂದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ ಛಲವಾದಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.ಗೋ ಬ್ಯಾಕ್ ಹೇಳಿಕೆಗೆ ಖಂಡನೆ:
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಗೋಬ್ಯಾಕ್ ಎಂದಿದ್ದ ಹೇಳಿಕೆಗೆ ನವೀನ್ ಖಂಡಿಸಿದರು. ಜನರನ್ನು ಪ್ರಚೋದಿಸುತ್ತಿರುವುದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆಯಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಇದೆ ಸಿದ್ದರಾಮಯ್ಯನವರು ತಮ್ಮ ಸ್ವಂತ ಕ್ಷೇತ್ರ ಬಿಟ್ಟು ಬದಾಮಿಯಲ್ಲಿ ಸ್ಪರ್ಧಿಸಿದ್ದನ್ನು ಮರೆತು ಬಿಟ್ಟಿದ್ದಾರೆ. ಸಿದ್ದರಾಮಯ್ಯನವರು ಒಮ್ಮೆ ಬದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಅಲ್ಲಿನ ಮತದಾರರು ಗೋಬ್ಯಾಕ್ ಸಿದ್ದರಾಮಯ್ಯ ಎಂದು ಹೇಳಿದ್ದರೆ ಅವರ ಪರಿಸ್ಥಿತಿ ಏನಾಗಿರುತ್ತಿತ್ತು. ಮತ್ತೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವ ಬದಲು ಯೋಚಿಸಿದರೆ ಒಳ್ಳೆಯದು ಎಂದರು.