ಶಿಗ್ಗಾಂವಿ: ಅಧಿಕಾರ ಮತ್ತು ದುಡ್ಡು ಶಾಶ್ವತವಲ್ಲ. ನಾವು ಏನು ಜನ ಸೇವೆ ಮಾಡುತ್ತೇವೆಯೋ ಅದೇ ಶಾಶ್ವತ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ತಿಳಿಸಿದರು.ಪಟ್ಟಣದ ವಿರಕ್ತಮಠದಲ್ಲಿ ೩೨ನೇ ಶರಣ ಸಂಸ್ಕೃತಿ ಉತ್ಸವ- ೨೦೨೫ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಮಾತನಾಡಿ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬುದು ಅನುಭವ ಮಂಟಪದ ಧ್ಯೇಯವಾಗಿತ್ತು. ಬಸವಣ್ಣ ಮತ್ತು ಅಂಬೇಡ್ಕರ್ ಅವರ ವ್ಯಕ್ತಿತ್ವ, ಆದರ್ಶ ಒಂದಾಗಿದ್ದವು ಎಂದರು. ಸಾನ್ನಿಧ್ಯ ವಹಿಸಿ ಗದುಗಿನ ಸದಾಶಿವಾನಂದ ಭಾರತೀ ಸ್ವಾಮಿಗಳು ಮಾತನಾಡಿ, ದೇಶಾದ್ಯಂತ ಶಿವಶರಣ ವಚನಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸದೃಢ ನಾಡು ನಿರ್ಮಾಣ ಮಾಡುತ್ತಿವೆ ಎಂದರು.ಸೀತಾಗಿರಿ ಡಾ. ಎ.ಸಿ. ವಾಲಿ ಮಹಾರಾಜರು ಹಾಗೂ ವೇದಮೂರ್ತಿ ಮಹಾಂತೇಶ ಶಾಸ್ತ್ರಿಗಳು ಚನ್ನಗೇರಿ ಪ್ರವಚನ ನೀಡಿದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಸಂಗೀತ ಸೇವೆ ಗದಿಗೆಯ್ಯ ಹಿರೇಮಠ, ತಬಲಾ ಬಸವರಾಜ ಹೂಗಾರ, ಸಿದ್ದಲಿಂಗಪ್ಪ ನರೇಗಲ್ಲ, ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.ಗ್ಯಾರಂಟಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಗುಡ್ಡಪ್ಪ ಜಲದಿ, ಡಾ. ಸಿ.ಎಸ್. ನಿಡಗುಂದಿ, ನಂದೀಶ ಯಲಿಗಾರ, ಉಮೇಶ ಗೌಳಿ, ಮುತ್ತುರಾಜ ಕ್ಷೌರದ, ದಿ. ನಾರಾಯಣ ಬ್ರಹ್ಮಾವರ ಹಾಗೂ ಕುಟುಂಬ, ಮಂಜುನಾಥ ವೇರ್ಣೇಕರ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಇದ್ದರು. ನೃತ್ಯ ಶಿಕ್ಷಕಿ ಜಾನ್ಹವಿ ಸಾಯಿಬಾಬಾ ಶಿವನ ರೂಪಕ ನೆರವೇರಿಸಿದರು. ಪ್ರೊ. ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.ಆಯುರ್ವೇದ ಮಹಾವಿದ್ಯಾಲಯಕ್ಕೆ ಆಸ್ಪತ್ರೆ ಸ್ಥಳಾಂತರಕ್ಕೆ ಬೊಮ್ಮಾಯಿ ವಿರೋಧ
ಹಾವೇರಿ: ಸವಣೂರು ಪಟ್ಟಣದಲ್ಲಿ ಸರ್ಕಾರಿ ಆಯುರ್ವೇದಿಕ್ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಈಗಾಗಲೇ ಮಂಜೂರಾಗಿದ್ದು, ಈ ಕಟ್ಟಡದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಳಾಂತರಿಸಬೇಕೆಂದು ಇಲಾಖೆ ತೀರ್ಮಾನಿಸುತ್ತಿರುವುದನ್ನು ಕೈಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿರುವ ಅವರು, ಸವಣೂರು ಪಟ್ಟಣದಲ್ಲಿ ಸರ್ಕಾರಿ ಆಯುರ್ವೇದಿಕ್ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಈಗಾಗಲೇ ಮಂಜೂರಾಗಿದ್ದು, ₹44 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಈ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ರದ್ದುಪಡಿಸಿ, ಈ ಕಟ್ಟಡದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಳಾಂತರಿಸಬೇಕೆಂದು ಇಲಾಖೆ ತೀರ್ಮಾನಿಸುತ್ತಿರುವುದು ತಿಳಿದುಬಂದಿದೆ. ಈ ಕಟ್ಟಡವು ಸವಣೂರು ಪಟ್ಟಣದಿಂದ ದೂರದಲ್ಲಿದ್ದು, ಈ ಸ್ಥಳಾಂತರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ಸ್ಥಳಾಂತರ ನಿರ್ಧಾರವನ್ನು ಕೈಬಿಟ್ಟು ಆಯುರ್ವೇದಿಕ್ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ಇದೇ ಕಟ್ಟಡದಲ್ಲಿಯೇ ಪ್ರಾರಂಭಿಸುವುದಲ್ಲದೇ ಈ ಕಟ್ಟಡಕ್ಕೆ ಇನ್ನೂ ಅವಶ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಕೋರಿದ್ದಾರೆ.ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸದ್ಯ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರಿಸುವುದಲ್ಲದೇ ಈ ಕಟ್ಟಡಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಅನುದಾನ ಮಂಜೂರಾತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.