
ಮಡಿಕೇರಿ: ನಗರದ ಜಿಲ್ಲಾ ಸಹಕಾರ ತರಬೇತಿ ಸಂಸ್ಥೆಯ ವಸತಿ ನಿಲಯದಲ್ಲಿ ವ್ಯಾಸ್ತವ್ಯ ಹೂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (ಎನ್ಡಿಆರ್ಎಫ್) ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಂಗಳವಾರ ಭೇಟಿ ಮಾಡಿ ಮಾಹಿತಿ ಪಡೆದರು. ಜಿಲ್ಲೆಯ ಸೂಕ್ಷ್ಮ ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಿ, ತುರ್ತು ಸಂದರ್ಭದಲ್ಲಿ ಜನ-ಜಾನುವಾರು ರಕ್ಷಣೆ ಮಾಡುವಲ್ಲಿ ಎನ್ಡಿಆರ್ಎಫ್ ತಂಡ ಕರ್ತವ್ಯ ನಿರ್ವಹಿಸಲಿದೆ. ಬೆಂಗಳೂರಿನ ರೀಜನಲ್ ರೆಸ್ಪಾನ್ಸ್ ಸೆಂಟರ್ (ಆರ್ಆರ್ಸಿ) 10ನೇ ಬೆಟಾಲಿಯನ್ನ ಇನ್ಸ್ಪೆಕ್ಟರ್ ರಾಮ್ ಭಜ್ ಅವರ ನೇತೃತ್ವದಲ್ಲಿ ಎನ್ಡಿಆರ್ಎಫ್ ತಂಡ ಆಗಮಿಸಿದ್ದು, ಬೋಟ್ಗಳು, ಮರ ಕತ್ತರಿಸುವ ಯಂತ್ರ, ಹಗ್ಗ, ಟೆಂಟ್, ಜೀವ ರಕ್ಷಕ ಜಾಕೆಟ್, ಸರ್ಚ್ ಲೈಟ್, ಆಕ್ಸಿಜನ್ ಜನರೇಟರ್, ಜೀವರಕ್ಷಕ ಔಷಧಗಳ ಸಿಗ್ನಲ್ ಯೂನಿಟ್ಗಳು ಹೀಗೆ ಪರಿಕರಗಳ ಜೊತೆ ಎನ್ಡಿಆರ್ಎಫ್ ತಂಡ ಸಿದ್ಧವಾಗಿದೆ.
ತಂಡದಲ್ಲಿ 30 ಮಂದಿ ಸಿಬ್ಬಂದಿಗಳಿದ್ದು, ವಿವಿಧ ರಾಜ್ಯಗಳಿಂದ ಆಗಮಿಸಿದ್ದಾರೆ. ಪ್ರವಾಹ ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ, ಪ್ರಾಕೃತಿಕ ವಿಕೋಪ ಉಂಟಾದರೆ ರಕ್ಷಣಾ ಕಾರ್ಯ ಕೈಗೊಳ್ಳುವ ಸಂಬಂಧ ತಂಡ ಸಿದ್ದವಾಗಿದೆ.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಸಹಕಾರ ತರಬೇತಿ ಸಂಸ್ಥೆಯ ವಸತಿ ನಿಲಯದಲ್ಲಿ ಎನ್ಡಿಆರ್ಎಫ್ ತಂಡ ವಾಸ್ತವ್ಯ ಹೂಡಿದ್ದು, ಹೆಚ್ಚಿನ ಮಳೆಯಿಂದ ಅವಘಡಗಳು ಸಂಭವಿಸಿದರೆ ಈ ತಂಡ ತುರ್ತಾಗಿ ಧಾವಿಸಿ ರಕ್ಷಣಾ ಕಾರ್ಯಚರಣೆ ಕೈಗೊಳ್ಳಲಿದೆ ಎಂದರು. ಸೂಕ್ಷ್ಮ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ. ಹಾಗೆಯೇ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮಳೆಗಾಲದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.