ಕನ್ನಡಪ್ರಭ ವಾರ್ತೆ ಅಫಜಲ್ಪುರ
ಉಳುಮೆಗೆ ಸಿದ್ಧತೆ: ತಾಲೂಕಿನಲ್ಲಿ ವಾಡಿಕೆಯಂತೆ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ. ಈ ವರ್ಷ ಉತ್ತಮ ಮಳೆ, ಬೆಳೆ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭಾರೀ ಉತ್ಸಾಹದಿಂದ ಜಮೀನುಗಳನ್ನು ಎತ್ತು, ಟ್ರ್ಯಾಕ್ಟರ್ ನೇಗಿಲು, ಕುಂಟೆಗಳ ಉಳುಮೆ ಮೂಲಕ ಹದಗೊಳಿಸುವುದು, ಕಸಕಡ್ಡಿ ಆರಿಸಿ ಹೊಲ ಸ್ವಚ್ಛಗೊಳಿಸಿ. ತಿಪ್ಪೆಗೊಬ್ಬರ, ಜಮೀನಿಗೆ ಹರಡುವ ಮೂಲಕ ಬಿತ್ತನೆಗೆ ಅನುಕೂಲವಾಗುವಂತೆ ಉಳುಮೆ ಮಾಡಿ ಭೂಮಿ ಹದಗೊಳಿಸುತ್ತಿದ್ದಾರೆ.
ಬಾಡುತ್ತಿದ್ದ ಬೆಳೆಗೆ ಜೀವಾಮೃತ: ರೈತರು ಕಬ್ಬು ಬಾಳೆ, ತರಕಾರಿ ಸೇರಿ ಇನ್ನಿತರ ಹಲವು ರೀತಿಯ ವಾಣಿಜ್ಯ ಬೆಳೆಗಳ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ನಿರೀಕ್ಷೆಯಂತೆ ವರುಣ ಕೃಪೆ ತೋರಿದ್ದು, ಬಾಡುತ್ತಿದ್ದ ಬೆಳೆಗೆ ಜೀವಾಮೃತ ಸಿಕ್ಕಿದಂತಾಗಿದೆ ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ.ಸದ್ಯ ಮಳೆ ಸುರಿಯುತ್ತಿರುವ ಪರಿಣಾಮ ಬರಗಾಲದಿಂದ ತತ್ತರಿಸಿ ಹೋಗಿದ್ದ ತಾಲೂಕಿನ ಜನರಿಗೆ ಒಂದಿಷ್ಟು ಸಂತಸ ತಂದಿದೆ. ನೀರಿಲ್ಲದೆ ಒಣಗಿದ್ದ ಕೆರೆ, ಕಟ್ಟೆ ಹಳ್ಳಕೊಳ್ಳಗಳಲ್ಲಿ ಮಳೆಯ ನೀರು ಶೇಖರಣೆಯಾಗುತ್ತಿದೆ. ಪರಿಸರದಲ್ಲಿ ಹಸಿರು ಕಾಣುವಂತಾಗಿದ್ದು, ಪ್ರಾಣಿ ಪಕ್ಷಿಗಳು ಸೇರಿ ಜಾನುವಾರುಗಳಿಗೆ ಕುಡಿಯವ ನೀರು ಹಾಗೂ ಮೇವಿನ ಬರ ನೀಗಿಸಿದೆ.