ಸಿ.ಕೆ. ನಾಗರಾಜ
ಕಳೆದ ಕೆಲ ದಿನಗಳಿಂದ ಕೂಡ್ಲಿಗಿ, ಕೊಟ್ಟೂರು ತಾಲೂಕಿನಿಂದ ಜನ ಗುಳೆ ಹೋಗುತ್ತಿದ್ದಾರೆ. ಈಗ ಮತ್ತೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಮರಿಯಮ್ಮನಹಳ್ಳಿ ತಾಂಡ, ಗುಂಡಾ ತಾಂಡ, ತಾಳೆಬಸಾಪುರ ತಾಂಡ, ಜಿ.ನಾಗಲಾಪುರ ತಾಂಡ ಸೇರಿದಂತೆ ಅನೇಕ ತಾಂಡಗಳ ರೈತರು ಮಂಗಳವಾರ ಸೀತ್ಲಾ ಹಬ್ಬ ಮುಗಿಸಿಕೊಂಡು ಜಿಲ್ಲೆಯ ಅನೇಕ ತಾಂಡಗಳಿಂದ ಸಹಸ್ರ ಸಂಖ್ಯೆಯಲ್ಲಿ ದುಡಿಯಲು ಗುಳೆ ಹೋಗುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ನೇಮರಾಜ್ ನಾಯ್ಕ ಅವರ ಹುಟ್ಟೂರು ಮರಿಯಮ್ಮನಹಳ್ಳಿ ತಾಂಡವೊಂದರಲ್ಲಿಯೇ ಗುರುವಾರ ರಾತ್ರಿ 60-70ಕ್ಕೂ ಹೆಚ್ಚು ಕುಟುಂಬಗಳಿಂದ ಸಾವಿರಕ್ಕೂ ಅಧಿಕ ಜನರು 15 ಲಾರಿ ಹಾಗೂ 5 ಟಾಟಾ ಏಸ್, 20 ಟ್ರ್ಯಾಕ್ಟರ್ಗಳಲ್ಲಿ ಶಿವಮೊಗ್ಗ, ಮೈಸೂರು, ಮಂಡ್ಯ ಸೇರಿದಂತೆ ಹಲವು ಕಡೆಗೆ ಕೂಲಿ ಅರಸಿ ಗೂಳೆ ಹೋದರು.ಚಿಕ್ಕಮಕ್ಕಳನ್ನು ಊರಲ್ಲೇ ಬಿಟ್ಟು ಲಾರಿಗೆ ಸಾಮಾನು- ಸರಂಜಾಮು ತುಂಬಿಕೊಂಡು ಹೋಗುವಾಗ ಪುರುಷರು-ಮಹಿಳೆಯರು ಕಣ್ಣೀರು ಹಾಕುತ್ತಾ ಗೋಳಿಡುತ್ತಿದ್ದರು. ನೆರೆದವರ ಕಣ್ಣಾಲಿಗಳು ತುಂಬಿದ್ದವು. ಕೆಲವೊಬ್ಬರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಇಂತಹವರ ಶಿಕ್ಷಣ ಅರ್ಧಕ್ಕೆ ನಿಂತಂತಾಗುತ್ತದೆ.
ತಮಿಳುನಾಡು, ಗೋವಾ, ಮೈಸೂರು, ನಾಗಮಂಗಲ, ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಕೆ.ಆರ್. ಪೇಟೆ, ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಇತರೆ ಪ್ರದೇಶದಲ್ಲಿ ಕಬ್ಬು ಕಟಾವು ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕಬ್ಬು ಕಟಾವು ಕೆಲಸ ಮುಂದಿನ 5-6 ತಿಂಗಳು ಇರಲಿದೆ.
ಮರಿಯಮ್ಮನಹಳ್ಳಿ ತಾಂಡವೊಂದರಲ್ಲಿ ಸುಮಾರು 15 ಮೇಸ್ತ್ರಿಗಳ ಒಂದು ತಂಡದಲ್ಲಿ ಸುಮಾರು 300-400 ಜನರನ್ನು ಕಬ್ಬು ಕಟಾವಿಗಾಗಿ ತೆರಳಿದ್ದಾರೆ. ಇಲ್ಲಿ ಮಳೆ ಇಲ್ಲದೇ ಇರುವುದರಿಂದ ದುಡಿಯಲು ಗುಳೆ ಅನಿವಾರ್ಯವಾಗಿದೆ ಎನ್ನುತ್ತಾರೆ ಮರಿಯಮ್ಮನಹಳ್ಳಿ ತಾಂಡ ಕೂಲಿ ಕಾರ್ಮಿಕ ಉಮೇಶ್ ನಾಯ್ಕ.