ಮೂಡುಬಿದಿರೆ: 30ನೇ ವರ್ಷದ ಆಳ್ವಾಸ್‌ ವಿರಾಸತ್‌ಗೆ ವಿದ್ಯಾಗಿರಿ ಸಜ್ಜು

KannadaprabhaNewsNetwork | Published : Dec 10, 2024 12:31 AM

ಸಾರಾಂಶ

ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾದ ೩೦ನೇ ವರ್ಷದ ‘ಆಳ್ವಾಸ್ ವಿರಾಸತ್’ಗೆ ವಿದ್ಯಾಗಿರಿಯು ವಿದ್ಯುದ್ದೀಪಾಲಂಕಾರ, ಹೂ-ಹಣ್ಣಿನ ಸಿಂಗಾರ, ಗೂಡುದೀಪಗಳ ಬೆಳಕು, ಕಲಾಕೃತಿಗಳ ಮೆರುಗು ಸೇರಿದಂತೆ ಅನನ್ಯತೆ ಹಾಗೂ ಅಚ್ಚರಿಗಳ ಬೆರಗಿನ ಮೂಲಕ ಸಜ್ಜಾಗಿದೆ. ಮಂಗಳವಾರದಿಂದ (ಡಿ.10) ಭಾನುವಾರದ ವರೆಗೆ (ಡಿ.೧೫) ಕಾರ್ಯಕ್ರಮ ನಡೆಯಲಿವೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡಣದ ಬಿದಿರೆಯ ನಾಡಲ್ಲಿ ಮೂರು ದಶಕಗಳ ಹಿಂದೆ ಬೆಳಗಿದ ಸಾಂಸ್ಕೃತಿಕ ಬೆಳಕು ಜನಮಾನಸವ ಬೆಸೆದುಕೊಂಡಿದ್ದು, ಈಗ ಈ ಉತ್ಸವಕ್ಕೆ ಮೂವತ್ತರ ಹರುಷ. ಈ ಸಾಂಸ್ಕೃತಿಕ ಬೆಳಕಿನ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾದ ೩೦ನೇ ವರ್ಷದ ‘ಆಳ್ವಾಸ್ ವಿರಾಸತ್’ಗೆ ವಿದ್ಯಾಗಿರಿಯು ವಿದ್ಯುದ್ದೀಪಾಲಂಕಾರ, ಹೂ-ಹಣ್ಣಿನ ಸಿಂಗಾರ, ಗೂಡುದೀಪಗಳ ಬೆಳಕು, ಕಲಾಕೃತಿಗಳ ಮೆರುಗು ಸೇರಿದಂತೆ ಅನನ್ಯತೆ ಹಾಗೂ ಅಚ್ಚರಿಗಳ ಬೆರಗಿನ ಮೂಲಕ ಸಜ್ಜಾಗಿದೆ. ಮಂಗಳವಾರದಿಂದ (ಡಿ.10) ಭಾನುವಾರದ ವರೆಗೆ (ಡಿ.೧೫) ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ ಕಲಾಪ್ರೇಮಿಗಳಿಗಾಗಿ ಕಾದಿದೆ.

ಈ ಬಾರಿ ಡಿ.೧೦ ರಿಂದ ೧೪ರ ವರೆಗೆ ಮೇಳಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದರೆ, ಡಿ.೧೫ರ ಭಾನುವಾರ ತೆರೆ ಬೀಳಲಿದೆ.

ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೆ, ಸಮೀಪದ ಕೃಷಿಸಿರಿ, ನೀಟ್ ಕಟ್ಟಡ, ಅರಮನೆ ಮೈದಾನ ಸೇರಿದಂತೆ ಸುತ್ತಲ ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತವೆ.

ಕೃಷಿ ಸಿರಿ ಮೇಳ:

ತುಳುನಾಡಿನ ಗುತ್ತಿನ ಮನೆಯ ಪರಿಕಲ್ಪನೆಯಲ್ಲಿ ಕೃಷಿಸಿರಿ ಮೇಳಗಳ ಆವರಣ ಸಜ್ಜುಗೊಳಿಸಲಾಗಿದ್ದು, ಈ ಬಾರಿ ೬೫೦ ಮಳಿಗೆಗಳಿವೆ. ವಿದ್ಯಾಗಿರಿಯ ಆವರಣದ ತುಂಬಾ ಸುಮಾರು ೨.೫ ಲಕ್ಷಕ್ಕೂ ಅಧಿಕ ಹೂವಿನಗಿಡಗಳು, ೫೦೦ಕ್ಕೂ ಹೆಚ್ಚು ಕಲಾಕೃತಿಗಳಿದ್ದು, ವಿರಾಸತ್ ರಾಜಮಾರ್ಗದ ಅಂದವನ್ನೂ ಹೆಚ್ಚಿಸಿವೆ. ಕಳೆದ ಆರು ತಿಂಗಳಿಂದ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ, ಸರಿ ಸುಮಾರು ೫೦೦ಕ್ಕೂ ಹೆಚ್ಚಿನ ಕಾರ್ಮಿಕರು ಡಾ.ಎಂ. ಮೋಹನ ಆಳ್ವ ಮಾರ್ಗದರ್ಶನದಲ್ಲಿ ವಿರಾಸತ್‌ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ರಥಾರತಿ:

ಕಳೆದ ಬಾರಿಯಂತೆ ಈ ಬಾರಿಯೂ ರಥ ಸಂಚಾರವು ವಿರಾಸತ್ ವಿಶೇಷ. ವೇದಘೋಷಗಳು, ಪುಷ್ಪಪಲ್ಲಕ್ಕಿ, ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥಸಂಚಲನ ಮತ್ತು ರಥಾರತಿ ಜರುಗಲಿದೆ. ಮುಖ್ಯ ವೇದಿಕೆಯ ಮುಂಭಾಗದಲ್ಲಿ ಉದ್ಘಾಟನೆ ಸಂದರ್ಭದಲ್ಲಿ ಸಾಂಸ್ಕೃತಿಕ ರಥ ಎಳೆಯಲಾಗುತ್ತದೆ. ಈ ರಥದಲ್ಲಿ ಲೋಕ ಮಾರ್ಗದರ್ಶಕ ಮರ್ಯಾದಾ ಪುರುಷೋತ್ತಮ ರಾಮ ಹಾಗೂ ಜೀವನೋಲ್ಲಾಸ ಕೃಷ್ಣರ ಮೂರ್ತಿ ಇರಲಿವೆ. ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮೀ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಇರಲಿದ್ದಾರೆ. ರಥದ ಜೊತೆ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಸಮಾರೋಪದ ದಿನ ರಥವು ಮತ್ತೆ ಸ್ವಸ್ಥಾನಕ್ಕೆ ರಥ ಸಂಚರಿಸಲಿದ್ದು, ಹರಿದ್ವಾರದಿಂದ ಬರುವ ಪ್ರಮುಖರು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಲಿದ್ದಾರೆ. ಮೆರವಣಿಗೆ:

೧೫೦ ಕ್ಕಿಂತಲೂ ಅಧಿಕ ದೇಶಿಯ ಜಾನಪದ ಕಲಾ ತಂಡಗಳ ೪೦೦೦ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಅಳಿವಿನಂಚಿನಲ್ಲಿರುವ ಜಾನಪದ ಕಲೆಯ ರಕ್ಷಣೆ ಹಾಗೂ ಜಾನಪದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದು ಈ ಮೆರವಣಿಗೆ ಉದ್ದೇಶ ಎನ್ನುತ್ತಾರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರು ಮಾತ್ರವಲ್ಲದೆ, ನಮ್ಮ ರಾಜ್ಯ- ಜಿಲ್ಲೆಯ ಕಲಾವಿದರ ಜೊತೆ ಸಂಸ್ಥೆಯ ೪೦೦ಕ್ಕೂ ಅಧಿಕ ಸಾಂಸ್ಕೃತಿಕ ಕಲಾವಿದ ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ. ಕೃಷಿ ಮೇಳ :

ವಿರಾಸತ್‌ನಲ್ಲಿ ಕೃಷಿಯ ಅದ್ಭುತ ಲೋಕವೇ ನಿರ್ಮಾಣವಾಗಿದೆ. ಹಸಿರುಟ್ಟ ಬೆಡಗಿಯಂತೆ ‘ಗಿರಿ’ ಸಿಂಗರಿಸಿದೆ. ದೇಶ ವಿದೇಶಗಳಿಂದ ತಂದ ತಳಿಗಳು ಹಾಗೂ ಕಸಿ ಮಾಡಿದ ವೈವಿಧ್ಯ ಫಲಗಳ ಜೊತೆಗೆ ಹಲವು ಬಗೆಯ ಫಲ ಪುಷ್ಪ ಮತ್ತು ತರಕಾರಿಗಳು ಇಲ್ಲಿವೆ. ಇಸ್ರೇಲ್ ತಂತ್ರಜ್ಞಾನ ಬಳಸಿ ಹಾಗಲಕಾಯಿ, ಕುಂಬಳಕಾಯಿ, ಹರಿವೆ, ಬೆಂಡೆಕಾಯಿ, ಬದನೆ, ಪಡುವಲಕಾಯಿ ಹಾಗೂ ಇನ್ನಿತರ ತರಕಾರಿಗಳು ಬೆಳೆಯಲಾಗಿದೆ.

ಆಹಾರ ಮೇಳ:

ಆಹಾರ ಮೇಳದಲ್ಲಿ ಸುಮಾರು ೧೫೦ಕ್ಕೂ ಅಧಿಕ ಮಳಿಗೆಗಳಲ್ಲಿ ಪಾರಂಪರಿಕದಿಂದ ಹಿಡಿದು ಫಾಸ್ಟ್‌ಫುಡ್‌ ತನಕದ ಸಸ್ಯಾಹಾರ ಹಾಗೂ ಮಾಂಸಾಹಾರ ಇತ್ಯಾದಿಗಳ ವೈವಿಧ್ಯ ಇವೆ. ಫಲ-ಪುಷ್ಪ ಮೇಳ :

ನಮ್ಮ ನೆಲದ ಚೆಂಡು, ಮಲ್ಲಿಗೆ ಮತ್ತಿತರ ಹೂಗಳ ಜೊತೆ ಹೂ ಗಿಡಗಳಾದ ಪಾಯಿಂಸೆಟ್ಟಿ, ಪೆಟುನಿಯಾ, ಸಾಲ್ವಿಯಾ, ಆಗ್ಲೋನಿನ, ಫಿಲಿಡೊಡ್ರನ್, ಟೊರ್ನಿಯ, ಕಲೆನಚೋ ವಿವಿಧ ಬಗೆಯ ಸಮಗ್ರ ಫಲ ಪುಷ್ಪ ಪ್ರದರ್ಶನ ಮೇಳೈಸಲಿವೆ.

ಸದಾಪುಷ್ಪ, ಸೇವಂತಿಗೆ, ಜೀನ್ಯ, ಗೌರಿ, ಡಾಲಿ, ಲಿಲ್ಲಿ, ಕೆಪುಳ, ಸಿಲ್ವರ್ ಡಸ್ಟ್ ಲವೆಂಡಾರ್, ಅನೆಸೊಪ್ಪು, ಅಂತೋರಿಯಮ್, ಮಲ್ಲಿಗೆ, ಸಲ್ವಿಯ ಸ್ಪ್ಲೆಂಡನ್ಸ್, ಸೆಲೋಶಿಯ, ಚೈನೀಸ್ ಫ್ರಿಂಜ್, ವೀಪಿಂಗ್ ಫಿಗ್, ವಿಶ್ಬೋನ್ ಸೇರಿದಂತೆ ನಂದನವನವೇ ಧರೆಗಿಳಿದಂತೆ ಭಾಸವಾಗುತ್ತಿವೆ.

ಇನ್ನು ಪುಷ್ಪಗಳಿಂದ ರಚಿಸಿದ ಆನೆ, ಕುದುರೆ, ಜಿರಾಫೆ, ನವಿಲು ಇತ್ಯಾದಿ ಕಲಾಕೃತಿಗಳಿವೆ.

ಕಲಾಕೃತಿ :ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದ ತುಂಬಾ ಸುಮಾರು ಸಾವಿರಕ್ಕೂ ಅಧಿಕ ಕಲಾಕೃತಿಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿವೆ. ಸಿಮೆಂಟ್‌ನಿಂದ ತಯಾರಿಸಲಾದ ಒಂಟೆ, ಅಳಿಲು, ಟಗರು, ಯಕ್ಷಗಾನ ಕಲಾಕೃತಿಗಳು ಹಾಗೂ ೨೪ ಜೈನ ತೀರ್ಥಂಕರರು, ವಿವಿಧ ಸಂಪ್ರದಾಯ ಶೈಲಿಯ ಮದುವೆಯ ವೇಷಧಾರಿಗಳ ಆಕೃತಿಗಳು, ಜ್ಞಾನಪೀಠ ಪುರಸ್ಕೃತರ ಪ್ರತಿಮೆ, ವಿವೇಕಾನಂದ, ರಾಧಾಕೃಷ್ಣ, ಗಣಪತಿ, ಬಸವಣ್ಣ, ಮೀರಾಬಾಯಿ, ಕತಕ್ಕಳಿಯಂತಹ ಅನೇಕ ಆಕರ್ಷಣೀಯ ವೇಷಧಾರಿ ಆಕೃತಿಗಳ ಜೊತೆಗೆ ಮೋಲ್ಡ್ ಮಾಡಿದ ಕಲಾಕೃತಿಗಳು ಕಂಗೊಳಿಸಲಿವೆ. ಛಾಯಾಚಿತ್ರ, ಲಲಿತಕಲಾ ಮೇಳ: ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರ ಸಾವಿರಕ್ಕೂ ಅಧಿಕ ಛಾಯಾಚಿತ್ರಗಳು, ಈ ಬಾರಿಯ ವಿರಾಸತ್‌ಗೆ ಆಹ್ವಾನಿಸಿದ ೧೦೦ಕ್ಕೂ ಅಧಿಕ ಕಲಾಕೃತಿಗಳು ಲಲಿತಕಲಾ ಮೇಳದ ಸೊಬಗನ್ನು ಹೆಚ್ಚಿಸಲಿವೆ. ಸೀರೆ- ಆಭರಣ: ಮಹಿಳೆಯರಿಗೆ ಕಣ್ಮನ ಸೆಳೆಯುವ ಕೈಮಗ್ಗಗಳ ಸೀರೆಯ ಪ್ರದರ್ಶನವು ಈ ಬಾರಿಯ ವಿಶೇಷ. ಸುಮಾರು ೩೦ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, ಆಭರಣಗಳ ಮಳಿಗೆಗಳು ಸೌಂದರ್ಯವನ್ನೂ ಹೆಚ್ಚಿಸಲಿವೆ. ಕಾರ್ಯಕ್ರಮಗಳು: ಡಿ.೧೦ ಉದ್ಘಾಟನೆ: ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಡಿ.೧೦ರ ಮಂಗಳವಾರ ಸಂಜೆ ೫.೩೦ರಿಂದ ೬.೩೦ರ ವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ, ಸೇರಿದಂತೆ ಗಣ್ಯರು ಉಪಸ್ಥಿತರಿರುವರು. ಸಂಜೆ ೬.೩೫ರಿಂದ ರಾತ್ರಿ ೮.೩೦ರ ವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಜೊತೆಗೆ ರಥಾರತಿ ನಡೆಯಲಿದೆ. ಡಿ.೧೧ ರಂದು ಸಂಜೆ ೫.೪೫ರಿಂದ ೬.೩೦ರ ವರೆಗೆ ಆಳ್ವಾಸ್ ವಿರಾಸತ್ ೨೦೨೪ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಬಾರಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದು. ೬.೩೫ರಿಂದ ೭.೩೦ರ ವರೆಗೆ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡವರು. ಬಳಿಕ ರಾತ್ರಿ ೭.೪೫ರಿಂದ ೯ರ ವರೆಗೆ ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ ೯ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಡಿ.೧೨ ರಂದು ಸಂಜೆ ೫.೪೫ಕ್ಕೆ ದೀಪ ಪ್ರಜ್ವಲನ ಹಾಗೂ ೫.೫೫ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ ೬ರಿಂದ ೮ರ ವೆರೆಗೆ ಗುಜರಾತ್ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ ೮.೧೫ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಉಡುಪಿ ಕೊಡವೂರು ನೃತ್ಯ ನಿಕೇತನ, ಬೆಂಗಳೂರು ಚಿಗುರು ನೃತ್ಯಾಲಯ, ಮಂಗಳೂರು ಸನಾತನ ನಾಟ್ಯಾಲಯ, ಕುಂದಾಪುರ ನೃತ್ಯ ವಸಂತ ನಾಟ್ಯಾಲಯ, ಮಂಗಳೂರು ಗಾನ ನೃತ್ಯ ಅಕಾಡೆಮಿ. ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಕಲಾವಿದರು ನೃತ್ಯ ವೈವಿಧ್ಯ ನಡೆಸಿಕೊಡುವರು. ರಾತ್ರಿ ೯.೧೫ರಿಂದ ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಡಿ.೧೩ ರಂದು ಸಂಜೆ ೫.೪೫ಕ್ಕೆ ದೀಪ ಪ್ರಜ್ವಲನ ಹಾಗೂ ೫.೫೫ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ ೬ರಿಂದ ೮ ಗಂಟೆಯವರೆಗೆ ನೀಲಾದ್ರಿ ಕುಮಾರ್ ಮತ್ತು ತಂಡದಿಂದ ‘ಸೌಂಡ್ ಆಫ್ ಇಂಡಿಯಾ’ ಹಾಗೂ ೮.೧೫ರಿಂದ ೯ರ ವರೆಗೆ ಕೋಲ್ಕೊತ್ತಾದ ಆಶೀಮ್ ಬಂಧು ಚಟರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. ರಾತ್ರಿ ೯ರಿಂದ ಬೆಂಗಳೂರು ಕಾರ್ತೀಸ್ ಪರ್‌ಫಾರ್ಮಿಂಗ್ ಆರ್ಟ್ಸ್ ‘ನೃತ್ಯೋಲ್ಲಾಸ’ ಹಾಗೂ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ ೯.೧೫ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ. ಡಿ.೧೪ ರ ಸಂಜೆ ೫.೪೫ಕ್ಕೆ ದೀಪ ಪ್ರಜ್ವಲನ ಹಾಗೂ ೫.೫೫ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ ೬ರಿಂದ ೯ರ ವರೆಗೆ ಚೆನ್ನೈ ಸ್ಟೆಕೇಟೋದ ಖ್ಯಾತ ೨೫ ಕಲಾವಿದರಿಂದ ಭರ್ಜರಿ ‘ಸಂಗೀತ ರಸದೌತಣ’ ಹಾಗೂ ರಾತ್ರಿ ೯ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನ ನಡೆಯಲಿದೆ. ಡಿ.೧೫ ರಂದು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತದೆ.

‘ಆಳ್ವಾಸ್ ವಿರಾಸತ್‌ಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಸುಮಾರು ೪೦ ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಆರಂಭಗೊಳ್ಳುವ ೧೫ ನಿಮಿಷ ಮೊದಲೇ ಆಸೀನರಾಗಬೇಕು. ವಾಹನ ಪಾರ್ಕಿಂಗ್‌ಗೆ ವಿಶಾಲ ವ್ಯವಸ್ಥೆ ಇರುತ್ತದೆ. ಕಣ್ಮನ ಸೆಳೆಯುವ ಸೊಬಗನ್ನು ಸವಿಯಬಹುದು’ ಎಂದು ಡಾ. ಮೋಹನ್ ಆಳ್ವ ತಿಳಿಸಿದ್ದಾರೆ.

Share this article