ಮೂಡುಬಿದಿರೆ: 77ನೇ ದಸರಾ ಸಾಹಿತ್ಯ, ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

KannadaprabhaNewsNetwork | Published : Oct 5, 2024 1:32 AM

ಸಾರಾಂಶ

ಮಾಜ ಮಂದಿರ ಸಭಾದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಡಿ. ಸಾಮ್ರಾಜ್ಯ ಅಧ್ಯಕ್ಷತೆಯಲ್ಲಿ ಎಂ.ಸಿ.ಎಸ್. ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ, ಸಹಕಾರಿ ಸಾಧಕ ಚಂದ್ರಶೇಖರ ಎಂ. ಅವರಿಗೆ ‘ಸಮಾಜ ಮಂದಿರ ಪುರಸ್ಕಾರ 2024’ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ನಮ್ಮೊಳಗಿನ ಆಸೆ, ಸಮಾಜದಲ್ಲಿನ ಕ್ರೌರ್ಯ, ಸಾಮಾಜಿಕ ಸವಾಲುಗಳೇ ಆಧುನಿಕ ಮಹಿಷಾಸುರರ ಪ್ರತೀಕಗಳಾಗಿವೆ. ಮಹಿಳಾ ಶೋಷಣೆ, ದೌರ್ಜನ್ಯ ಹೆಚ್ಚುತ್ತಿರುವ ಈ ದಿನಗಳಲ್ಲಿ ನಮ್ಮಲ್ಲಿನ ಸುಮಾರು ಶೇ. 69ರಷ್ಟು ಹೆಣ್ಣು ಮಕ್ಕಳು ಈ ಸವಾಲುಗಳನ್ನು ದಿಟ್ಟವಾಗಿ ಪ್ರತಿಭಟಿಸುವ, ಮೆಟ್ಟಿನಿಲ್ಲುವ ನವದುರ್ದುಗೆಯರಾಗಬೇಕು. ದುರ್ಗಾಪೂಜೆಗಳು ಕೇವಲ ಪೂಜೆಗೆ, ಪ್ರದರ್ಶನಕ್ಕೆ ಮೀಸಲಾಗಿರದೆ ಹೆಣ್ಣುಮಕ್ಕಳ ರಕ್ಷಣೆಗಾಗಿ, ಅವರ ಹಕ್ಕುಗಳ ಸ್ಥಾಪನೆಗಾಗಿ, ಶಾಂತಿಯುತ ಬದುಕಿನ ಹಕ್ಕುಗಳ ಸ್ಥಾಪನೆಗಾಗಿ ಆಗಬೇಕೆಂಬುದೇ ಸಾಮಾನ್ಯಜನರ ಆಶಯ ಎಂದು ಮಂಗಳೂರು ವಿವಿಯ ಕುಲಪತಿ ಡಾ. ಪಿ.ಎಲ್. ಧರ್ಮ ಹೇಳಿದರು.

ಅವರು ಸಮಾಜ ಮಂದಿರ ಸಭಾ ವತಿಯಿಂದ 5 ದಿನಗಳ ಕಾಲ ನಡೆಯುವ 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಬುಧವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬಗಳು ನಮ್ಮಲ್ಲಿನ ಅಸುರ ಪ್ರವೃತ್ತಿಯನ್ನು ಹೋಗಲಾಗಿಡಿಸಿ ಸುಸಂಸ್ಕೃತ ಸಮಾಜಕ್ಕೆ ತಳಹದಿಯಾಗುವ ದಸರಾ ಉತ್ಸವವಾಗಲಿ ಎಂದವರು ಹಾರೈಸಿದರು.

ಪುರಸ್ಕಾರ: ಸಮಾಜ ಮಂದಿರ ಸಭಾದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಡಿ. ಸಾಮ್ರಾಜ್ಯ ಅಧ್ಯಕ್ಷತೆಯಲ್ಲಿ ಎಂ.ಸಿ.ಎಸ್. ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ, ಸಹಕಾರಿ ಸಾಧಕ ಚಂದ್ರಶೇಖರ ಎಂ. ಅವರಿಗೆ ‘ಸಮಾಜ ಮಂದಿರ ಪುರಸ್ಕಾರ 2024’ ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿಗಳ ಪದಕಕ್ಕೆ ಪಡೆದಿರುವ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಅವರನ್ನು ಸಮಾಜ ಮಂದಿರದ ವತಿಯಿಂದ ಗೌರವಿಸಲಾಯಿತು.

ದಸರಾ ಉತ್ಸವದ ಸಂಚಾಲಕ ಡಾ. ಪುಂಡಿಕಾ ಗಣಪಯ್ಯ ಭಟ್ ಸ್ವಾಗತಿಸಿ ಅಭಿನಂದನಾ ಮಾತುಗಳನ್ನಾಡಿದರು. ಸಂಚಾಲಕ ಎಂ. ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.ಟ್ರಸ್ಟಿ ಜಯರಾಜ್ ಕಂಬ್ಳಿ ವಂದಿಸಿದರು. ಸಮಾಜ ಮಂದಿರ ಸಭಾದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.ಬಳಿಕ ದಿಗಿಣ ದಿವಿಜ ಮಕ್ಕಳ ಯಕ್ಷಗಾನ ಮೇಳದಿಂದ ಲೀಲಾಮಾನುಷ ವಿಗ್ರಹ ಯಕ್ಷಗಾನ ಪ್ರದರ್ಶನ ನಡೆಯಿತು.

Share this article