ಡ್ರೋನ್‌ ಕ್ರಾಂತಿಕಾರಿ ತಂತಜ್ಞಾನ: ಮಿಶ್ರಾ

KannadaprabhaNewsNetwork |  
Published : Apr 15, 2026, 03:00 AM IST
ಆಳ್ವಾಸ್‌ನಲ್ಲಿ ಏರೋಡೈನಾಮಿಕ್ಸ್ನಿಂದ ಡಿಜಿಸಿಎ ಮಾನ್ಯತೆ ಪಡೆದ ಡ್ರೋನ್ ತರಬೇತಿ ಕೇಂದ್ರ ಉದ್ಘಾಟನೆ | Kannada Prabha

ಸಾರಾಂಶ

ಏರೋಡೈನಾಮಿಕ್ಸ್ ಸಂಸ್ಥೆಯು ಆಳ್ವಾಸ್ ಕಾಲೇಜಿನಲ್ಲಿ ಆರಂಭಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಡಿಜಿಸಿಎ ಮಾನ್ಯತೆ ಪಡೆದ ಡ್ರೋನ್ ತರಬೇತಿ ಕೇಂದ್ರವನ್ನು ಮಂಗಳವಾರ ಕಾಲೇಜಿನ ಆವರಣದಲ್ಲಿ ಉದ್ಘಾಟಿಸಲಾಯಿತು.

ಮೂಡುಬಿದಿರೆ: ಏರೋಡೈನಾಮಿಕ್ಸ್ ಸಂಸ್ಥೆಯು ಆಳ್ವಾಸ್ ಕಾಲೇಜಿನಲ್ಲಿ ಆರಂಭಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಡಿಜಿಸಿಎ ಮಾನ್ಯತೆ ಪಡೆದ ಡ್ರೋನ್ ತರಬೇತಿ ಕೇಂದ್ರವನ್ನು ಮಂಗಳವಾರ ಕಾಲೇಜಿನ ಆವರಣದಲ್ಲಿ ಉದ್ಘಾಟಿಸಲಾಯಿತು.

ಕರ್ನಾಟಕದ ಕೋಸ್ಟ್ ಗಾರ್ಡ್‌ ಉಪ ಮಹಾ ನಿರೀಕ್ಷಕ (ಡಿಐಜಿ) ಹಾಗೂ ಜಿಲ್ಲಾ ಕಮಾಂಡರ್ ಪಿ.ಕೆ. ಮಿಶ್ರಾ ಮಾತನಾಡಿ, ರಕ್ಷಣೆ ಹಾಗೂ ನಾಗರಿಕ ಕ್ಷೇತ್ರಗಳಲ್ಲಿ ಡ್ರೋನ್ ತಂತ್ರಜ್ಞಾನವು ವ್ಯಾಪಕವಾಗಿ ಬಳಸಲ್ಪಡುತ್ತಿರುವುದರಿಂದ ಇದರ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಡಿಮೆ ವೆಚ್ಚ, ನಿಖರತೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಬಳಸಬಹುದಾದ ಸಾಮರ್ಥ್ಯದಿಂದ ಡ್ರೋನ್‌ಗಳು ಕ್ರಾಂತಿಕಾರಿ ತಂತ್ರಜ್ಞಾನವಾಗಿ ಹೊರಹೊಮ್ಮುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಜಾಗತಿಕ ಬೆಳವಣಿಗೆಗಳನ್ನು ಉಲ್ಲೇಖಿಸಿ, ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷಗಳಲ್ಲಿ, ಡ್ರೋನ್‌ಗಳು ಆಧುನಿಕ ಯುದ್ಧ ತಂತ್ರಗಳನ್ನು ಮಹತ್ತರವಾಗಿ ಬದಲಾಯಿಸುತ್ತಿವೆ. ಡ್ರೋನ್ ತಂತ್ರಜ್ಞಾನವು ಸಣ್ಣ ರಾಷ್ಟ್ರಗಳಿಗೂ ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತಿವೆ. ದುಬಾರಿ ಸಾಂಪ್ರದಾಯಿಕ ಯುದ್ಧೋಪಕರಣಗಳಿಗಿಂತ ಕಡಿಮೆ ವೆಚ್ಚದ ಮಾನವರಹಿತ ಡ್ರೋನ್‌ಗಳ ಅಭಿವೃದ್ಧಿಗೆ ದೇಶಗಳು ಹೆಚ್ಚು ಒತ್ತು ನೀಡುತ್ತಿವೆ. ವಿದ್ಯಾರ್ಥಿಗಳು ಇಂತಹ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇಬ್ಬರು ಭಾರತೀಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿದ ಡ್ರೋನ್ ಸುಮಾರು 50,000 ರೈತರಿಗೆ ಬೆಳೆ ಸಮಸ್ಯೆಗಳನ್ನು ಗುರುತಿಸಲು ಹಾಗೂ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ವಿದ್ಯಾರ್ಥಿಗಳಿಂದ ನಿರ್ಮಿಸಲಾದ ಕಡಿಮೆ ವೆಚ್ಚದ ರಾಕೆಟ್ ಯೋಜನೆಗೆ ಇಸ್ರೋ ಗಮನ ಸೆಳೆದಿರುವುದನ್ನು ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಡ್ರೋನ್ ತಂತ್ರಜ್ಞಾನವನ್ನು ಸಿದ್ಧಿಸಿಕೊಳ್ಳುವುದು ಕಾಲದ ಅಗತ್ಯ. ವಿದ್ಯಾರ್ಥಿಗಳು ಭವಿಷ್ಯಕ್ಕೆ ಸಿದ್ಧರಾಗಿ ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಮೌಲ್ಯಪೂರ್ಣವಾಗಿ ಬಳಸಿಕೊಳ್ಳಬೇಕು. ಡ್ರೋನ್ ತಂತ್ರಜ್ಞಾನದಿಂದ ಆಧುನಿಕ ಯುದ್ಧದ ಸ್ವರೂಪವೇ ಬದಲಾಗುತ್ತಿದ್ದು, ಪರಂಪರಾಗತ ಸಶಸ್ತ್ರ ಪಡೆಗಳ ಅಗತ್ಯತೆಯನ್ನೇ ಪ್ರಶ್ನಿಸುವಂತಾಗಿದೆ ಎಂದರು.

ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಈ ಕೇಂದ್ರದ ಆರಂಭದಿಂದ ಆಳ್ವಾಸ್ ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಮತ್ತಷ್ಟು ಸಮೃದ್ಧಗೊಳಿಸುವುದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಡಿಜಿಸಿಎ ಮಾನ್ಯತೆ ಪಡೆದ ಡ್ರೋನ್ ತರಬೇತಿಯ ಪ್ರಮುಖ ಕೇಂದ್ರವಾಗಿ ಸ್ಥಾಪಿಸಲು ಸಹಕಾರಿಯಾಗಲಿದೆ ಎಂದರು.

ಕೃಷಿ, ರಕ್ಷಣಾ ಕ್ಷೇತ್ರ ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರಗಳಲ್ಲಿ ಡ್ರೋನ್ ತಂತ್ರಜ್ಞಾನವು ಮಹತ್ವದ ಬದಲಾವಣೆಗಳನ್ನು ತರುತ್ತಿದ್ದು, ಬೆಳೆಗಳ ಮೇಲ್ವಿಚಾರಣೆ, ನಿಖರ ಸಿಂಪಡಣೆ, ನೀರಾವರಿ ಪರಿಶೀಲನೆ ಹಾಗೂ ಬೆಳೆ ಆರೋಗ್ಯ ವಿಶ್ಲೇಷಣೆಗೆ ಡ್ರೋನ್‌ಗಳು ಸಹಕಾರಿಯಾಗಿವೆ. ಪರಿಸರ ಸಂರಕ್ಷಣೆಯಲ್ಲಿಯೂ, ವನ್ಯಜೀವಿ ಮೇಲ್ವಿಚಾರಣೆ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯಲು ಡ್ರೋನ್‌ಗಳು ಉಪಯುಕ್ತವಾಗಿವೆ. ವಿದ್ಯಾರ್ಥಿಗಳು ಇಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಮಾಜಮುಖಿ ನವೀನತೆಗಳನ್ನು ರೂಪಿಸಬೇಕು ಎಂದರು.

ಏರೋಡೈನಾಮಿಕ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಈ ಕೇಂದ್ರದ ಮೂಲಕ ಡ್ರೋನ್ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಡ್ರೋನ್ ಕಾರ್ಯಾಚರಣೆ, ನಿರ್ವಹಣೆ, ಸುರಕ್ಷತಾ ನಿಯಮಗಳು ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಸಮಗ್ರ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗೋನ್ಮುಖವಾಗಿ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

ನ್ಯಾಯವಾದಿ ಜಗದೀಶ ಕೆ. ಶೇಣವ ಇದ್ದರು. ಕಾರ‍್ಯಕ್ರಮವನ್ನು ಡಾ. ಪ್ರಣಮ್ಯ ಭಟ್ ನಿರೂಪಿಸಿ, ಗ್ರೂಪ್ ಕ್ಯಾಪ್ಟನ್ ಸುಧೀರ್ ಅಮೀನ್ ಸ್ವಾಗತಿಸಿ, ಅನುಷಾ ಶೆಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ನಿಭಾಯಿಸಲಾಗದೇ ಕಾಂಗ್ರೆಸ್ ಹೆಣಗಾಟ
ಎಲ್ಲರೂ ಮಹಾತ್ಮರ ಜಯಂತಿ ಆಚರಣೆ ಉದ್ದೇಶ ತಿಳಿಯಿರಿ