ಯಲಬುರ್ಗಾ: ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಕ್ಷೇತ್ರಕ್ಕೆ ಅತಿ ಹೆಚ್ಚು ಯೋಜನೆ ಮಂಜೂರಾತಿ ಮಾಡಿಸಿ ಹೆಚ್ಚಿನ ಅನುದಾನ ನೀಡಿರುವುದಕ್ಕೆ ಅವರಿಗೆ ಚಿರಋಣಿಯಾಗಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ನಾನು ರಾಜಕಾರಣಕ್ಕೆ ಬಂದಿರುವುದು ಯಾವುದೇ ಸ್ವಾರ್ಥಕ್ಕಲ್ಲ, ಜನಪರ ಅಭಿವೃದ್ಧಿ ಕಾಳಜಿ ದೂರದೃಷ್ಟಿ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ಅವರ ಸಂಪುಟದಲ್ಲಿ ನಾನು ಮಂತ್ರಿಯಾಗಿರಬೇಕೆಂದು ಆಸೆಯಾಗಿತ್ತು. ಆದರೆ ಕೆಲ ರಾಜಕೀಯ ಬೆಳವಣಿಗೆಯಲ್ಲಿ ನಾನು ವಂಚಿತನಾದೆ. ಆಗ ಸ್ವತ ಸಿದ್ದರಾಮಯ್ಯ ಅವರೆ ನನ್ನನ್ನು ತಮ್ಮ ಆಪ್ತ ಆರ್ಥಿಕ ಸಲಹೆಗಾರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಹೀಗಾಗಿ ತಮ್ಮ ೧೬ನೇ ರಾಜ್ಯದ ಅಭಿವೃದ್ಧಿಯ ದೂರದೃಷ್ಟಿಯುಳ್ಳ ಅತಿ ದೊಡ್ಡಗಾತ್ರದ ದಾಖಲೆಯ ಬಜೆಟ್ನಲ್ಲಿ ನನ್ನ ಕ್ಷೇತ್ರಕ್ಕೆ ಹೆಚ್ಚು ಯೋಜನೆ ಘೋಷಣೆ ಮಾಡಿರುವುದಕ್ಕೆ ಅವರಿಗೆ ಸದಾ ಚಿರಾಋಣಿಯಾಗಿದ್ದೇನೆ ಎಂದರು.
ಬಜೆಟ್ನಲ್ಲಿ ಮುಸ್ಲಿಮರಿಗೆ ಹೆಚ್ಚು ಯೋಜನೆ ನೀಡಿದ್ದಾರೆಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿರುವುದು ಸರಿಯಲ್ಲ. ಕ್ರಿಶ್ಚಿಯನ್, ಬೌದ್ದರು, ಮುಸ್ಲಿಮರು ಸೇರಿದಂತೆ ಅನೇಕರಿಗೆ ಇದರ ಅನುಕೂಲವಾಗಲಿದೆ ಎಂದರು.ಸಿಎಂ ಸಿದ್ದರಾಮಯ್ಯ ಅವರ ಐದು ಗ್ಯಾರಂಟಿ ಯೋಜನೆ ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಇವುಗಳು ರಾಜ್ಯದ ಬಡ ಜನರ ಪಾಲಿಗೆ ವರದಾನವಾಗಿವೆ. ಆದರೆ ಬಿಜೆಪಿ ಇವುಗಳ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಿದೆ. ಅಂಥವರಿಗೆ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಮನೆಯಲ್ಲಿ ಕೂಡಿಸಿದ್ದಾರೆ, ಇನ್ನೂ ಮೂರು ವರ್ಷ ನಮ್ಮ ಸರ್ಕಾರವೇ ಅಧಿಕಾರದಲ್ಲಿರುತ್ತದೆ ಎಂದು ಹೇಳಿದರು.
ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಗೌರವಿಸಲಾಯಿತು. ಕಾಂಗ್ರೆಸ್ ಮುಖಂಡ ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ನಾರಾಯಣಪ್ಪ ಹರಪನಹಳ್ಳಿ, ಬಿ.ಎಂ. ಶಿರೂರ, ಹನುಮಂತಗೌಡ ಪಾಟೀಲ, ಮಹೇಶ ಹಳ್ಳಿ, ಸಂಗಣ್ಣ ಟೆಂಗಿನಕಾಯಿ, ಡಾ. ನಂದಿತಾ ದಾನರಡ್ಡಿ, ಶೇಖರಗೌಡ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಮಲ್ಲು ಜಕ್ಕಲಿ, ಯಲ್ಲಪ್ಪ ಹಂದ್ರಾಳ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಇಒ ಸಂತೋಷ ಪಾಟೀಲ ಬಿರಾದಾರ ಮುಖ್ಯಾಧಿಕಾರಿ ನಾಗೇಶ ಇದ್ದರು.