ಸೇಫಥಾನ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗಿ : ರಸ್ತೆ ಅಪಘಾತ ಕಡಿಮೆ ಮಾಡುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ

KannadaprabhaNewsNetwork | Updated : Mar 02 2025, 10:19 AM IST

ಸಾರಾಂಶ

ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗ ಸಾರಿಗೆ ಇಲಾಖೆ ಶನಿವಾರ ಏರ್ಪಡಿಸಿದ್ದ ಸೇಫಥಾನ್‌ 2025ರಲ್ಲಿ 10 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು.

 ಬೆಂಗಳೂರು : ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗ ಸಾರಿಗೆ ಇಲಾಖೆ ಶನಿವಾರ ಏರ್ಪಡಿಸಿದ್ದ ಸೇಫಥಾನ್‌ 2025ರಲ್ಲಿ 10 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು.

ರಸ್ತೆ ಅಪಘಾತ ವಿಚಾರದಲ್ಲಿ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ. 2030ರ ವೇಳೆಗೆ ಹಾಲಿ ಸಂಭವಿಸುತ್ತಿರುವ ರಸ್ತೆ ಅಪಘಾತ ಸಂಖ್ಯೆಯನ್ನು ಶೇ.50ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಅದರ ಭಾಗವಾಗಿ ನಗರದಲ್ಲಿ ಶನಿವಾರ ನಡಿಗೆ, ಸೈಕಲ್‌ ಜಾಥಾ, ಮೋಟಾರು ಸೈಕಲ್‌ ಚಾಲನೆಯೊಂದಿಗೆ ಸೇಫಥಾನ್‌ ಆಯೋಜಿಸಲಾಯಿತು. ಮೋಟಾರು ಸೈಕಲ್‌ ಜಾಥಾ ಹಾಗೂ ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಯಿತು.

ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾದ ಸೇಫಥಾನ್‌, ವಿಧಾನಸೌಧ ಮುಂಭಾಗದ ರಸ್ತೆ, ಕಬ್ಬನ್‌ ಉದ್ಯಾನದ ಮೂಲಕ ಸಾಗಿ ವಾಪಾಸು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿತು. ಸೇಫಥಾನ್‌ನಲ್ಲಿ ಪಾಲ್ಗೊಂಡವರಿಗೆ ಇಲಾಖೆಯಿಂದ ಪದಕ ಮತ್ತು ಸ್ಮರಣಿಕೆಯನ್ನು ನೀಡಲಾಯಿತು. ಅಲ್ಲದೆ, ಸೇಫಥಾನ್‌ ಉದ್ದಕ್ಕೂ ರಸ್ತೆ ಸುರಕ್ಷತೆ ಕುರಿತಂತೆ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇಫಥಾನ್‌ಗೆ ಚಾಲನೆ ನೀಡಿ ಮಾತನಾಡಿ, ರಸ್ತೆ ಅಪಘಾತ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ. ಅದರ ಜತೆಗೆ ತಂತ್ರಜ್ಞಾನ ಅಳವಡಿಕೆ, ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಅದಕ್ಕಾಗಿ ವಾಹನ ಚಾಲನಾ ಪ್ರಮಾಣ ಪತ್ರ ವಿತರಿಸುವುದಕ್ಕೆ ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ಅದರ ಮೂಲಕ ನಿಖರ ಮತ್ತು ಪಾರದರ್ಶಕವಾಗಿ ಡಿಎಲ್‌ಗಳ ವಿತರಣೆ ಮಾಡಲಾಗುವುದು. ಈ ರೀತಿ ಹಲವು ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಎಂದರು.

ನಗರ ಪೊಲೀಸ್‌ ಆಯುಕ್ತ ದಯಾನಂದ್‌, ಹಿರಿಯ ಅಥ್ಲಿಟ್‌ ಅರ್ಜುನ್‌ ದೇವಯ್ಯ, ಸಾರಿಗೆ ಆಯುಕ್ತ ಎ.ಎಂ. ಯೋಗೀಶ್‌, ಚಲನಚಿತ್ರ ನಟ ವಿಜಯ್‌ ರಾಘವೇಂದ್ರ, ಪ್ರಣಿತಾ, ಸಂಪದಾ ಇತರರಿದ್ದರು.

Share this article