ಸಿದ್ಧಾರೂಢ ಮಠಕ್ಕೆ 4 ಲಕ್ಷಕ್ಕೂ ಅಧಿಕ ಭಕ್ತರು

KannadaprabhaNewsNetwork |  
Published : Mar 09, 2024, 01:32 AM IST
ಅಜ್ಜನ ಮಠ | Kannada Prabha

ಸಾರಾಂಶ

ಮಾ. 9ರಂದು ಸಂಜೆ ಸಿದ್ಧಾರೂಢ ಅಜ್ಜನ ಮಹಾರಥೋತ್ಸವ ನಡೆಯಲಿದೆ. ಶಕ್ತಿ ಯೋಜನೆಯಿಂದ ಈ ಸಲ ಮಠಕ್ಕೆ ಬಂದಿರುವ ಭಕ್ತಗಣದ ಸಂಖ್ಯೆ ಜಾಸ್ತಿಯಾಗಿದೆ. ಜಾತ್ರೆಯಲ್ಲಿ ಸರಿಸುಮಾರು 5 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀಸಿದ್ಧಾರೂಢ ಮಠಕ್ಕೆ ಶಿವರಾತ್ರಿ ದಿನವಾದ ಶುಕ್ರವಾರ 4 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದರು. ಬೆಳಗಿನ ಜಾವ 4ರಿಂದ ಪ್ರಾರಂಭವಾದ ಉಭಯ ಶ್ರೀಗಳ ದರ್ಶನಾಶೀರ್ವಾದ ಶನಿವಾರ ಬೆಳಗ್ಗೆ ವರೆಗೂ ಮುಂದುವರಿದಿತ್ತು. ತಾಸುಗಟ್ಟಲೇ ನಿಂತು ದರ್ಶನ ಪಡೆದರು. ಈ ನಡುವೆ ಶನಿವಾರ ಶಿವರಾತ್ರಿ ಮಹೋತ್ಸವದ ಜಾತ್ರೆ ಕೂಡ ಅದ್ಧೂರಿಯಾಗಿ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಗಣ ಆಗಮಿಸಿದೆ.

ಶಿವನರೂಪವೆಂದು ಪೂಜಿಸುವ ಸಿದ್ಧಾರೂಢರ ಗದ್ದುಗೆಯ ಸುತ್ತಲು ಶಿವಲಿಂಗವನ್ನು ಇಟ್ಟು ಪೂಜೆ ಮಾಡಿದ್ದು ವಿಶೇಷ. ಅನ್ನ ದಾಸೋಹದಲ್ಲೂ ತಾಸು ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸುತ್ತಿದ್ದ ದೃಶ್ಯ ಕಂಡು ಬಂತು. ಬೆಳಗಿನ ಜಾವದಿಂದ 4ಲಕ್ಷಕ್ಕೂ ಅಧಿಕ ಭಕ್ತರ ದಂಡು ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಸಾಮೂಹಿಕ ಶಿವ ನಮಸ್ಕಾರ:ಮಠದ ಆವರಣದಲ್ಲಿ ಯೋಗಸ್ಪರ್ಶ ಪ್ರತಿಷ್ಠಾನ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಸಾಮೂಹಿಕ ಶಿವ ನಮಸ್ಕಾರ ಕಾರ್ಯಕ್ರಮ ನೆರವೇರಿತು. ಯೋಗ ಸಮಿತಿಯ ಸದಸ್ಯರು, ಯೋಗ ಶಿಕ್ಷಕರು, ಯೋಗಾಸಕ್ತರು, ಮಕ್ಕಳು ಹಾಗೂ ಸಾರ್ವಜನಿಕರು ಸಾಮೂಹಿಕ ಶಿವ ನಮಸ್ಕಾರದಲ್ಲಿ ಭಾಗವಹಿಸಿದ್ದರು.

ಸುಡುಬಿಸಿಲನ್ನು ಲೆಕ್ಕಿಸದೆ ಜಿಲ್ಲೆ, ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಮಠಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಅಜ್ಜನ ದರ್ಶನ ಪಡೆದರು.

ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಸಾದ

ಈ ನಡುವೆ ಶಿವರಾತ್ರಿ ಹಿನ್ನೆಲೆಯಲ್ಲಿ ಹಳೇಹುಬ್ಬಳ್ಳಿಯ ವೀರಭದ್ರೇಶ್ವರ ದೇವಸ್ಥಾನದ ಭಕ್ತ ಮಂಡಳಿ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ದಾಸೋಹ ಭವನದಲ್ಲೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲೂ ಲಕ್ಷಾಂತರ ಜನ ಪ್ರಸಾದ ಸ್ವೀಕರಿಸಿದರು. ಇದಲ್ಲದೇ, ಮಠದ ಆವರಣ, ರಥಬೀದಿ ಸೇರಿದಂತೆ ವಿವಿಧೆಡೆ ಭಕ್ತರಿಗೆ ಸಂಘ-ಸಂಸ್ಥೆಗಳು ನೀರು, ಜ್ಯೂ ಸ್‌, ಕಲ್ಲಂಗಡಿ, ಪಾನಕ, ದ್ರಾಕ್ಷಿ ವಿತರಿಸಿದರು.

ಇಂದು ಜಾತ್ರೆ: ಮಾ. 9ರಂದು ಸಂಜೆ ಸಿದ್ಧಾರೂಢ ಅಜ್ಜನ ಮಹಾರಥೋತ್ಸವ ನಡೆಯಲಿದೆ. ಶಕ್ತಿ ಯೋಜನೆಯಿಂದ ಈ ಸಲ ಮಠಕ್ಕೆ ಬಂದಿರುವ ಭಕ್ತಗಣದ ಸಂಖ್ಯೆ ಜಾಸ್ತಿಯಾಗಿದೆ. ಜಾತ್ರೆಯಲ್ಲಿ ಸರಿಸುಮಾರು 5 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ. ಇದಕ್ಕಾಗಿ ಬೇಕಾದ ತಯಾರಿಯನ್ನು ಮಠದ ವತಿಯಿಂದ ಮಾಡಿಕೊಳ್ಳಲಾಗಿದೆ. ಸ್ವಯಂ ಸೇವಕರಿಗೆ ಇದೇ ಮೊದಲ ಬಾರಿಗೆ ಸೇವಾ ಕಾರ್ಡ್‌ ಕೂಡ ವಿತರಿಸಲಾಗಿದ್ದು, ಜಾತ್ರೆಯ ನಿರ್ವಹಣೆ ಅಚ್ಚುಕಟ್ಟಾಗಿ ನಡೆಯುತ್ತಿದೆ.

ಉಚಿತ ಆಟೋ ಸೇವೆ: ಮಹಾಶಿವರಾತ್ರಿ ಹಾಗೂ ಜಾತ್ರೆಯ ಹಿನ್ನೆಲೆಯಲ್ಲಿ ನಗರದಲ್ಲಿ ನೂರಾರು ಆಟೋಗಳು ಉಚಿತ ಸೇವೆ ನೀಡುತ್ತಿವೆ. ಶುಕ್ರವಾರ ಬೆಳಗ್ಗೆಯಿಂದಲೇ ರೈಲ್ವೆ ನಿಲ್ದಾಣ ಹಾಗೂ ಹಳೇಬಸ್ ನಿಲ್ದಾಣ, ಹೊಸ ಬಸ್‌ ನಿಲ್ದಾಣದಿಂದ ಸಿದ್ಧಾರೂಢ ಮಠದವರೆಗೆ ಭಕ್ತರನ್ನು ಕೊಂಡೊಯ್ಯುವ ಮೂಲಕ ಆಟೋ ಚಾಲಕರು ಭಕ್ತಿ ಮೆರೆದರು. ಈ ಸೇವೆಯೂ ಜಾತ್ರೆ ದಿನ ಕೂಡ ಮುಂದುವರಿಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ