ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿ, ಗುಡೇಕೋಟೆ ಹೋಬಳಿಯಾದ್ಯಂತ ಸೋಮವಾರ ತಡರಾತ್ರಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದ್ದು, 45ಕ್ಕೂ ಅಧಿಕ ವೀಳ್ಯದೆಲೆ ತೋಟಗಳಿಗೆ ಹಾನಿಯಾಗಿದೆ. ಈ ಭಾಗದ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮತ್ತು ರಸ್ತೆ ಬದಿ ಮರಗಳು ಮುರಿದು ಬಿದ್ದಿವೆ. ಅಲ್ಲದೆ, ರಸ್ತೆ ಕೊಚ್ಚಿ ಹೋಗಿ ಸಂಚಾರಕ್ಕೆ ಅಡಚಣೆಯಾಗಿದ್ದು, ಮಾತ್ರವಲ್ಲ ಎರಡು ಹೋಬಳಿ ವ್ಯಾಪ್ತಿಯ 6 ಮನೆಗಳು ಜಖಂ ಆಗಿರುವ ಘಟನೆ ನಡೆದಿದೆ.
ಸಂಚಾರ ವ್ಯತ್ಯಯ: ಬಿರುಗಾಳಿ ಮಳೆಗೆ ಯಂಬಳಿ ವಡ್ಡರಹಟ್ಟಿ ಮತ್ತು ಕೆಂಚಮಲ್ಲನಹಳ್ಳಿ ಗ್ರಾಮದ ಸಂರ್ಪಕ ರಸ್ತೆ ಹಾಗೂ ಯಂಬಳಿ, ಅಲೂರು ನಡುವೆ ಸಂಪರ್ಕಿಸುವ ಡಾಂಬರು ರಸ್ತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಎರಡು ಗ್ರಾಮಗಳ ನಡುವೆ ಸಂಚಾರ ಬಂದ್ ಆಗಿದೆ. ಅಲ್ಲದೆ, ಚಿಕ್ಕಜೋಗಿಹಳ್ಳಿಯಿಂದ ಹುರುಳಿಹಾಳ್ಗೆ ಹೋಗುವ ರಸ್ತೆ ಬದಿಯಲ್ಲಿ ಇದ್ದ ಮರಗಳು ಗುಂಡುಮುಣುಗು ಮತ್ತು ಹುರುಳಿಹಾಳ್ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಮದ್ಯಾಹ್ನದವರಿಗೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
ಗೋಶಾಲೆ ನೀರು: ಗಂಡಬೊಮ್ಮನಹಳ್ಳಿ ಗೋಶಾಲೆಗೆ ಮಳೆ ನೀರು ನುಗ್ಗಿ ಕೆಸರುಗದ್ದೆಯಂತೆ ಆದ ಪರಿಣಾಮ ಜಾನುವಾರುಗಳನ್ನು ಬಯಲಲ್ಲಿ ಕಟ್ಟಿ ಮೇವು ಹಾಕಲಾಯಿತು. ಅಲ್ಲದೆ ಮೇವು ಸಂಗ್ರಹದ ಸ್ಥಳಕ್ಕೆ ನೀರು ನುಗ್ಗಿದೆ.ಗುಡೇಕೋಟೆ, ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸೋಮವಾರ ರಾತ್ರಿ ಕಾನಹೊಸಹಳ್ಳಿಯಲ್ಲಿ ೫೬.೨ ಮಿಮೀ, ಗುಡೇಕೋಟೆ ೪೮.೩ ಮಿಮೀ, ಚಿಕ್ಕಜೋಗಿಹಳ್ಳಿ ೨೬.೨ ಮಿಮೀ, ಬಣವಿಕಲ್ಲು ೩೨.೪ ಮಿಮೀ ಮಳೆಯಾಗಿರುವ ಬಗ್ಗೆ ದಾಖಲಾಗಿದೆ.