ಜಾನಪದ ಸಾಹಿತ್ಯ ವಿಶ್ವವಿದ್ಯಾಲಯಕ್ಕಿಂತಲೂ ಮಿಗಿಲು

KannadaprabhaNewsNetwork | Published : Apr 19, 2025 12:39 AM

ಸಾರಾಂಶ

ಜಾನಪದ ಸಾಹಿತ್ಯ ವಿಶ್ವವಿದ್ಯಾಲಯಕ್ಕಿಂತ ಮೇಲು. ಮಾನವೀಯ ಹಾಗೂ ನೈತಿಕ ಮೌಲ್ಯ ಒಳಗೊಂಡಿರುವ ಜಾನಪದ ಸಾಹಿತ್ಯ ರಚಿಸಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದೆ

ಕನ್ನಡಪ್ರಭ ವಾರ್ತೆ ವಿಜಯಪುರ

ಗ್ರಾಮೀಣರು ಕನ್ನಡ ಜಾನಪದ ಸಾಹಿತ್ಯದ ಮಾಲೀಕರು. ಜಾನಪದ ಸಾಹಿತ್ಯ ವಿಶ್ವವಿದ್ಯಾಲಯಕ್ಕಿಂತ ಮೇಲು. ಮಾನವೀಯ ಹಾಗೂ ನೈತಿಕ ಮೌಲ್ಯ ಒಳಗೊಂಡಿರುವ ಜಾನಪದ ಸಾಹಿತ್ಯ ರಚಿಸಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನಲ್ಲಿ ಸಾಂಸ್ಕೃತಿಕ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಜರುಗಿದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ. ಇಂದಿನ ಯುವಕರು ಜಾನಪದ ಸಾಹಿತ್ಯದ ಮಹತ್ವ ಅರಿತು ಬದುಕು ಕಟ್ಟಿಕೊಳ್ಳಬೇಕೆಂದು ಎಂದರು.

ಮುಖ್ಯ ಅತಿಥಿ ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಜಾನಪದ ಸಾಹಿತ್ಯ ಮರೆತರೆ ನಮ್ಮ ಸಂಸ್ಕೃತಿ ಮರೆತಂತೆ. ಜಾನಪದ ಆಹಾರ ಪದ್ಧತಿ ಮರೆತಿರುವುದರಿಂದ ಇಂದು ಯುವಜನತೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿ ನಗರಗಳಲ್ಲಿ ಪ್ರಭಾವ ಬೀರಿದೆ. ಜಾನಪದ ಸಾಹಿತ್ಯ ನಮ್ಮೆಲ್ಲರ ಪಾಲಕರು ರಚಿಸಿದ ಸಾಹಿತ್ಯವಾಗಿದೆ. ಸರಕಾರ ಜಾನಪದ ಸಾಹಿತ್ಯದ ಅರಿವು ಯುವ ಜನತೆಗೆ ಪರಿಚಯಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಆರ್‌.ಎಸ್.ಕಲ್ಲೂರಮಠ ಮಾತನಾಡಿ, ಜಾನಪದ ನೃತ್ಯ, ಗೀಗಿ ಪದ, ಲಾವಣಿ, ಹಂತಿಪದ, ಚೌಡಕಿ ಪದ, ಶೋಭಾನ ಹಾಡು, ಮೊಹರಂ ಗೀತೆಗಳು, ಡೊಳ್ಳು ಕುಣಿತ, ನವಿಲು ಕುಣಿತ, ಕರಡಿ ಮಜಲು, ಗೊಂಬೆ ಕುಣಿತ, ಲಂಬಾಣಿ ನೃತ್ಯ, ಮುಂತಾದ ಕಲಾ ತಂಡಗಳ ಪ್ರದರ್ಶನ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ ಎಂದರು.

ವೇದಿಕೆಯ ಮೇಲೆ ಡಾ.ಭಾರತಿ ಹೊಸಟ್ಟಿ, ಪ್ರೊ.ಸಿದ್ದಣ್ಣ ಬೀಡಗೊಂಡ, ಡಾ.ಚಿದಾನಂದ ಅನೂರ. ಪ್ರೊ.ಎಂ.ಆರ್‌.ಜೋಶಿ ವೇದಿಕೆಯ ಮೇಲಿದ್ದರು.

ಲಕ್ಷ್ಮಿ ಅಪಾರಿಜಿತೆ ಪ್ರಾರ್ಥಿಸಿದರು. ಡಾ.ಲಕ್ಷ್ಮಿ ಮೋರೆ ನಿರೂಪಿಸಿದರು. ಡಾ.ರಾಜಶೇಖರ ಬೆನಕನಹಳ್ಳಿ ಸ್ವಾಗತಿಸಿ, ಪರಿಚಯಿಸಿದರು. ಡಾ.ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ನಾತೂರಾಮ ಜಾಧವ ವಂದಿಸಿದರು. ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಅನೇಕ ನೃತ್ಯ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜಾನಪದ ಆಹಾರ ಮೇಳ ಎರ್ಪಡಿಸಿದ್ದು ಎಲ್ಲರ ಗಮನ ಸೆಳೆಯಿತು. ಕಲಾವಿದರಾದ ಬಸವರಾಜ ಹಾರಿವಾಳ, ರಾಮಚಂದ್ರ ಗೊಂದಳಿ, ಪ್ರಾಧ್ಯಾಪಕರಾದ ಡಾ.ಎಂ.ಆರ್‌.ಕೆಂಬಾವಿ, ಡಾ.ಅನಂತ ಪದ್ಮನಾಭ, ಆರ್‌.ಟಿ.ಬಳ್ಳೊಳಿ, ಡಾ.ರಾಮಪ್ಪ ಕಳ್ಳಿ, ಪ್ರೊ.ನೀಲಕಂಠ ಹಳ್ಳಿ, ಪ್ರೊ.ಸುಪ್ರಿತಾ ಪಾಟೀಲ, ಡಾ.ಶಕೀರಾಬಾನು ಕಿತ್ತೂರ, ಡಾ.ಭುವನೇಶ್ವರಿ ಪುರಾಣಿಕ, ಪ್ರೊ.ಶುಭಾ ರುದ್ರಗೌಡರ, ಪ್ರೊ.ಸುಜಾತಾ ಬಿರಾದಾರ, ಪ್ರೊ.ಆಸಿಫ್ ರೊಜಿಂದಾರ, ಮಂಜುನಾಥ ಗಾಣಿಗೇರ, ರಮೇಶ ಬ್ಯಾಳಿ, ಪ್ರೊ.ಭಾರತಿತಾಯಿ ಮುಂತಾದವರು ಉಪಸ್ಥಿತರಿದ್ದರು.

Share this article