ಶಿಕ್ಷಣ ಕ್ಷೇತ್ರಕ್ಕೆ ದಾನಿಗಳಿಂದ ₹10 ಕೋಟಿಗೂ ಅಧಿಕ ನೆರವು: ಡಾ.ಪ್ರಭಾ

KannadaprabhaNewsNetwork |  
Published : May 19, 2026, 01:30 AM IST
18 ಜೆಎಲ್ಆರ್ 01: ಜಗಳೂರು ತಾಲೂಕಿನ ಕಲೆದೇವರಪುರ ಗ್ರಾಮದಲ್ಲಿ ದಾನಿ ಹರ್ಷ ಹಿರೇಕುಂಬಳಗುಂಟೆ ಮಠ ಅವರ ₹1.65 ಕೋಟಿ ಧನಸಹಾಯದೊಂದಿಗೆ ನಿರ್ಮಾಣವಾಗಲಿರುವ 12 ಶಾಲಾ ಕೊಠಡಿಗಳ ಭೂಮಿಪೂಜೆಯನ್ನು ಶಾಸಕ ಬಿ. ದೇವೆಂದ್ರಪ್ಪ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸಿದರು. | Kannada Prabha

ಸಾರಾಂಶ

ಉದ್ಯಮಿ ಹರ್ಷ ಹಿರೇಕುಂಬಳಗುಂಟೆ ಮಠ ಅವರು ಸ್ವಂತ ಖರ್ಚಿನಲ್ಲಿ ಕಲ್ಲೇದೇವಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ₹1.65 ಕೋಟಿ ವೆಚ್ಚದಲ್ಲಿ 12 ಶಾಲಾ ಕೊಠಡಿ ನಿರ್ಮಿಸುತ್ತಿದ್ದಾರೆ. ಅವರ ಮಾದರಿಯಾದ ಶಿಕ್ಷಣ ಕಾಳಜಿಗಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ದಾನಿಗಳಿಂದ ₹10 ಕೋಟಿಗೂ ಅಧಿಕ ನೆರವು ಹರಿದುಬಂದಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

- ಸ್ವಂತ ಖರ್ಚಿನಲ್ಲಿ 12 ಶಾಲಾ ಕೊಠಡಿಗಳ ನಿರ್ಮಿಸುತ್ತಿರುವ ಉದ್ಯಮಿ ಹರ್ಷ

- - -

ಕನ್ನಡಪ್ರಭ ವಾರ್ತೆ ಜಗಳೂರು

ಉದ್ಯಮಿ ಹರ್ಷ ಹಿರೇಕುಂಬಳಗುಂಟೆ ಮಠ ಅವರು ಸ್ವಂತ ಖರ್ಚಿನಲ್ಲಿ ಕಲ್ಲೇದೇವಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ₹1.65 ಕೋಟಿ ವೆಚ್ಚದಲ್ಲಿ 12 ಶಾಲಾ ಕೊಠಡಿ ನಿರ್ಮಿಸುತ್ತಿದ್ದಾರೆ. ಅವರ ಮಾದರಿಯಾದ ಶಿಕ್ಷಣ ಕಾಳಜಿಗಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ದಾನಿಗಳಿಂದ ₹10 ಕೋಟಿಗೂ ಅಧಿಕ ನೆರವು ಹರಿದುಬಂದಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣದ ಭೂಮಿ ಪೂಜೆ ಹಾಗೂ ಶಾಲಾ ದಾಖಲಾತಿ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಎಸ್‌.ಎಸ್. ಕೇರ್ ಟ್ರಸ್ಟ್ ವತಿಯಿಂದಲೂ ಆರೋಗ್ಯದ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಡೆಂಟಲ್ ಕಾಲೇಜು ವತಿಯಿಂದ ಮಕ್ಕಳಿಗೆ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ವಾರದಲ್ಲಿ 3 ದಿನ ಸಾರ್ವಜನಿಕರ ಬಳಿಗೇ ''''ಆರೋಗ್ಯ ಸಂಚಾರಿ ವಾಹನ'''' ಬರಲಿದೆ. ವಿಶೇಷವಾಗಿ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಿಗೇ ಬಂದು ಆರೋಗ್ಯ ತಪಾಸಣೆ ನಡೆಸಲಾಗುವುದು. ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ಗರ್ಭಕೋಶದ ವ್ಯಾಕ್ಸಿನೇಷನ್ (ಲಸಿಕೆ) ಸದುಪಯೋಗ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಕಲ್ಲೇದೇವರಪುರ ಗ್ರಾಮಕ್ಕೆ ದೇವರ ರೂಪದಲ್ಲಿ ದಾನ ನೀಡಿರುವ ಹರ್ಷ ಅವರ ತಂದೆಯವರು ಈ ಹಿಂದೆ ಟ್ರಸ್ಟ್ ನಡೆಸುತ್ತಿದ್ದರು. ಈ ಹಿಂದೆ ಶಾಲೆಗೆ ಒಂದು ಕೊಠಡಿ ಬೇಕೆಂದರೂ ಉನ್ನತ ಅಧಿಕಾರಿಗಳನ್ನು ಕೇಳಬೇಕಾಗಿತ್ತು. ಆದರೆ ಇಂದು ಹರ್ಷ ಅವರು ಮುಂಚೂಣಿಯಲ್ಲಿ ನಿಂತು, ಜನ್ಮ ನೀಡಿದ ತಾಯಿಗೆ ಹಾಗೂ ಹುಟ್ಟಿದ ಭೂಮಿಗೆ ನಾವು ಏನಾದರೂ ಕೊಡುಗೆ ನೀಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ದಾನಿ ಹರ್ಷ ಹಿರೇಕುಂಬಳಗುಂಟೆ ಮಠ ಮಾತನಾಡಿ, ಈ ಶಾಲೆ ಇನ್ನೂ ಉನ್ನತಮಟ್ಟಕ್ಕೆ ಬೆಳೆಯಬೇಕು. 2027-28ನೇ ಶೈಕ್ಷಣಿಕ ವರ್ಷದ ವೇಳೆಗೆ ಈ ಹೊಸ ಕಟ್ಟಡ ಸಿದ್ಧಗೊಂಡು ತರಗತಿಗಳು ಆರಂಭವಾಗಲಿವೆ. ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳು ಶಾಲೆಯ ಸದುಪಯೋಗ ಪಡೆದು ಉನ್ನತ ಹುದ್ದೆಗೇರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ದಾವಣಗೆರೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಮುಖಂಡರಾದ ಕೆ.ಪಿ. ಪಾಲಯ್ಯ, ಕೆ.ಪಿ.ಸಿ.ಸಿ. ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಎಂ.ಡಿ. ಕೀರ್ತಿಕುಮಾರ್, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶೀರ್, ಕೆಬಿಇಒ ಹಾಲಮೂರ್ತಿ, ತಿಪ್ಪೇಸ್ವಾಮಿ, ಸಣ್ಣಸೂರಜ್ಜ, ಬಡಯ್ಯ, ಡಿಡಿ ಹಾಲಪ್ಪ ಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

- - -

(ಟಾಪ್‌ ಕೋಟ್‌)

ಹಿರಿಯ ಚೇತನ, ತಂದೆ ಸಮಾನರಾದ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಅವರ 96ನೇ ವರ್ಷದ ಜನ್ಮದಿನೋತ್ಸವ ಪ್ರಯುಕ್ತ ಜೂನ್‌ 17ರಂದು ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ''''ಉಚಿತ ಬೃಹತ್ ಸಾಮೂಹಿಕ ವಿವಾಹ ಮಹೋತ್ಸವ'''' ಹಮ್ಮಿಕೊಳ್ಳಲಾಗಿದೆ. ಎಲ್ಲ ಸಮಾಜಗಳ ವಧು-ವರರು ಈ ಅವಕಾಶದ ಪ್ರಯೋಜನ ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳಬಹುದು.

- ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದೆ, ದಾವಣಗೆರೆ ಕ್ಷೇತ್ರ.

- - -

-18ಜೆಎಲ್ಆರ್01:

ಶಾಲಾ ಕೊಠಡಿಗಳ ಕಾಮಗಾರಿಗೆ ಶಾಸಕ ಬಿ. ದೇವೇಂದ್ರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್‌ಡಿಡಿ ಹೆಸರಲ್ಲಿ ಬೇಲೂರು ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ
ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬ ಸಂಭ್ರಮ