ವಾಡಿಕೆಗಿಂತ ಅಧಿಕ ಮಳೆ, ಕೃಷಿ ಚಟುವಟಿಕೆ ಚುರುಕು

KannadaprabhaNewsNetwork | Published : May 30, 2025 1:17 AM
ತಾಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮುಂಗಾರು ಪೂರ್ವ ಮಳೆಯಿಂದ ರೈತರು ಸಂತಸಗೊಂಡು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.
Follow Us

ಸಕಾಲದಲ್ಲಿ ಬೀಜ ಗೊಬ್ಬರ ವಿತರಣೆಗೆ ಸಿದ್ಧತೆ । ಮುಂಗಾರು ಮಳೆಯ ಆಶಾಭಾವ

ಬಿ.ರಾಮಪ್ರಸಾದ್‌ ಗಾಂಧಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ತಾಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮುಂಗಾರು ಪೂರ್ವ ಮಳೆಯಿಂದ ರೈತರು ಸಂತಸಗೊಂಡು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.

ರೈತರು ತಮ್ಮ ಕೃಷಿ ಭೂಮಿ ಹದಗೊಳಿಸಿಕೊಳ್ಳುವಲ್ಲಿ ನಿರತರಾಗಿದ್ದು, ಕೆಲವೊಬ್ಬರು ಬಿತ್ತನೆ ಕೈಗೊಂಡಿದ್ದಾರೆ.

ಕಳೆದ ಬಾರಿ ವಾಡಿಕೆಗಿಂತ ಶೇ.50 ರಷ್ಟು ಮಳೆ ಕೊರತೆಯಾಗಿತ್ತು, ಆದರೆ ಈ ಬಾರಿ ಮಾ.1ರಿಂದ ಇಲ್ಲಿಯವರೆಗೂ ಸರಾಸರಿ 133.4 ಮಿಮೀ ರಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ. 10 ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ, ತೆಲಿಗಿ ಹೋಬಳಿಯಲ್ಲಿ 153.85 ಮಿಮೀ ಅರಸಿಕೇರಿಯಲ್ಲಿ ಶೇ.150.8 ಚಿಗಟೇರಿ ಹೋಬಳಿಯಲ್ಲಿ 170.2 ಮಿಮೀ ಮಳೆ ಆಗಿದೆ.

87396 ಹೆಕ್ಟೇರ್ ಬಿತ್ತನೆ ಗುರಿ:

ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ 87396 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ ನೀರಾವರಿ 6692 ಹೆಕ್ಟೇರ್ ಮತ್ತು ಖುಷ್ಕಿ 80609 ಹೆಕ್ಟೇರ್ ಪ್ರದೇಶವಿದ್ದು, ಈ ಪೈಕಿ ಮೆಕ್ಕೆಜೋಳ 75089 ಹೆ, ರಾಗಿ 3500 ಹೆ, ತೊಗರಿ 2690 ಹೆ, ಶೇಂಗಾ 1840 ಹೆಕ್ಟೇರ್ ತಾಲೂಕಿನ ಮುಖ್ಯ ಬೆಳೆಯಾಗಿರುತ್ತವೆ. ಹೆಚ್ಚಾಗಿ ಮೆಕ್ಕೆಜೋಳ ಬೆಳೆ ಶೇ. 80ರಷ್ಟು ಬೆಳೆಯಲಾಗುತ್ತದೆ ಎಂದು ಕೃಷಿ ಅಧಿಕಾರಿ ಉಮೇಶ ತಿಳಿಸಿದ್ದಾರೆ.

20059 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ:

ತಾಲೂಕಿನಲ್ಲಿ ಒಟ್ಟು 20059 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಅರಸೀಕೆರೆ ಹೋಬಳಿಗೆ 5705 ಕ್ವಿಂಟಲ್, ಚಿಗಟೇರಿಗೆ 5015 ಕ್ವಿಂಟಲ್, ಕಸಬಾಗೆ 4093 ಕ್ವಿಂಟಲ್ ಮತ್ತು ತೆಲಗಿ ಹೋಬಳಿಗೆ 5242 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ.

29765 ಮೆಟ್ರಿಕ್ ಟನ್ ರಸಗೊಬ್ಬರ:

ಮುಂಗಾರು ಹಂಗಾಮಿಗೆ 29765 ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದು, ಇದರಲ್ಲಿ ಡಿಎಪಿ 4976 ಮೆ.ಟನ್, ಯೂರಿಯಾ 10935 ಮೆ.ಟನ್, ಎಂಓಪಿ 4687 ಮೆ.ಟನ್, ಕಾಂಪ್ಲೆಕ್ಸ್ 1394 ಮೆ.ಟನ್, ರಸಗೊಬ್ಬರದ ಬೇಡಿಕೆ ಇದೆ. ತಾಲೂಕಿನಲ್ಲಿ ಒಟ್ಟು 159 ಕೃಷಿ ಪರಿಕರ, ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರು ಇದ್ದಾರೆ.

6 ಕೇಂದ್ರಗಳಲ್ಲಿ ಬೀಜ ವಿತರಣೆ:

ತಾಲೂಕಿನಲ್ಲಿ ಒಟ್ಟು ಆರು ರೈತ ಸಂಪರ್ಕ ಕೇಂದ್ರಗಳಿದ್ದು, ಹರಪನಹಳ್ಳಿ, ಚಿಗಟೇರಿ, ಸಾಸ್ವಿಹಳ್ಳಿ, ತೆಲಿಗಿ, ಹಲುವಾಗಲು, ಅರಸಿಕೇರಿ ಹೀಗೆ ಆರು ಕಡೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು, ರೈತರಿಗೆ ತೊಂದರೆ ಆಗದಂತೆ ಸಕಾಲದಲ್ಲಿ ಗೊಬ್ಬರ ಬೀಜ ವಿತರಿಸಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಒಟ್ಟಿನಲ್ಲಿ ರೈತರು ಮುಂಗಾರು ಪೂರ್ವ ಮಳೆಯಿಂದ ಸಂತಸದಲ್ಲಿದ್ದು, ಮುಂಗಾರು ಮಳೆ ಸಹ ಉತ್ತಮ ರೀತಿಯಲ್ಲಿ ಬರುತ್ತದೆ ಎಂಬ ಆಶಾಭಾವನೆಯಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.