ಬಹುತೇಕ ಶಾಸಕರು ಭೂಮಿ ಮಾರುವ ಬ್ರೋಕರ್‌ಗಳು

KannadaprabhaNewsNetwork |  
Published : Jul 22, 2026, 01:15 AM IST
21ಕೆಆರ್ ಎಂಎನ್ 3,4.ಜೆಪಿಜಿಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆಯುತ್ತಿರುವ ಚಳವಳಿಯಲ್ಲಿ ನರಗುಂದ ಮತ್ತು ನವಲಗುಂದ ರೈತ ಬಂಡಾಯದ ಹುತಾತ್ಮ ರೈತರ ಸ್ಮರಣಾರ್ಥ ದಿನದ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ಬಿಡದಿ ಭೂ ಸ್ವಾಧೀನ ವಿರೋಧಿ ದಿನಾಚರಣೆ ಕಾರ್ಯಕ್ರಮದ ಚಿತ್ರಗಳು | Kannada Prabha

ಸಾರಾಂಶ

ರಾಮನಗರ: ಇದು ಭೂಗಳ್ಳರ ಸರ್ಕಾರ. ಬೆಂಗಳೂರಿನಲ್ಲಿ ನೂರಾರು ಎಕರೆ ಭೂಮಿ ಕೊಳ್ಳೆ ಹೊಡೆದಿರುವ ಮುಖ್ಯಮಂತ್ರಿ ಶಿವಕುಮಾರ್ ಸ್ವತಃ ಭೂಗಳ್ಳ. ಬಹುತೇಕ ಶಾಸಕರು ಭೂಮಿ ಮಾರುವ ಬ್ರೋಕರ್‌ಗಳಾಗಿದ್ದಾರೆ ಎಂದು ಕರ್ನಾಟಕ ಕೃಷಿ ಕೂಲಿಕಾರರ ಹಾಗೂ ಗ್ರಾಮೀಣ ಕಾರ್ಮಿಕರ ಸಂಘ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜ್ ವಾಗ್ದಾಳಿ ನಡೆಸಿದರು

ರಾಮನಗರ: ಇದು ಭೂಗಳ್ಳರ ಸರ್ಕಾರ. ಬೆಂಗಳೂರಿನಲ್ಲಿ ನೂರಾರು ಎಕರೆ ಭೂಮಿ ಕೊಳ್ಳೆ ಹೊಡೆದಿರುವ ಮುಖ್ಯಮಂತ್ರಿ ಶಿವಕುಮಾರ್ ಸ್ವತಃ ಭೂಗಳ್ಳ. ಬಹುತೇಕ ಶಾಸಕರು ಭೂಮಿ ಮಾರುವ ಬ್ರೋಕರ್‌ಗಳಾಗಿದ್ದಾರೆ ಎಂದು ಕರ್ನಾಟಕ ಕೃಷಿ ಕೂಲಿಕಾರರ ಹಾಗೂ ಗ್ರಾಮೀಣ ಕಾರ್ಮಿಕರ ಸಂಘ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜ್ ವಾಗ್ದಾಳಿ ನಡೆಸಿದರು.

ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್‌ಶಿಪ್ ವಿರೋಧಿಸಿ ನಡೆಯುತ್ತಿರುವ ಚಳವಳಿಯಲ್ಲಿ

ನರಗುಂದ ಮತ್ತು ನವಲಗುಂದ ರೈತ ಬಂಡಾಯದ ಹುತಾತ್ಮ ರೈತರ ಸ್ಮರಣಾರ್ಥ ದಿನದ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ಬಿಡದಿ ಭೂ ಸ್ವಾಧೀನ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ಸುತ್ತ ಭೂಗಳ್ಳರ ಹಾವಳಿ ಹೆಚ್ಚಾಗಿದೆ. ಆ ಭೂಗಳ್ಳರೊಂದಿಗೆ ಸರ್ಕಾರವೂ ಕೈ ಜೋಡಿಸಿದೆ. ದೊಡ್ಡ ಯೋಜನೆಗಳು ಬರುವ ಮಾಹಿತಿ ಪಡೆದು ರಾಜಕಾರಣಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ಅಮಾಯಕ ರೈತರನ್ನು ಯಾಮಾರಿಸಿ ಭೂಮಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.

ದೇಶಾದ್ಯಂತ ಸಂವಿಧಾನ ಪುಸ್ತಕ ತೋರಿಸಿಕೊಂಡು ಓಡಾಡುವ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರಿಗೆ ಬಿಡದಿ ಟೌನ್ ಶಿಪ್ ಯೋಜನೆ ವಿಷಯದಲ್ಲಿ ಯಾಕೆ ಮೌನವಾಗಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಇಂತಹ ಬೂಟಾಟಿಕೆ ಬಿಟ್ಟು ಟೌನ್ ಶಿಪ್ ನಿಲ್ಲಿಸಲು ಹೇಳಲಿ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ನೆಲ ಕಚ್ಚುತ್ತದೆ ಎಂದು ಎಚ್ಚರಿಸಿದರು.

ನರಗುಂದ ಮತ್ತು ನವಲಗುಂದ ರೈತ ಬಂಡಾಯದಂತಹ ಚಳವಳಿ ನಡೆದ ನೆಲದಲ್ಲಿ ರೈತರ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಬಿಜೆಪಿ, ಜೆಡಿಎಸ್ ಹಾಗೂ ಪ್ರಸ್ತುತ ಕಾಂಗ್ರೆಸ್ ಸರ್ಕಾರಗಳು ಕೃಷಿ ವಿರೋಧಿ ನೀತಿ ತಳೆದಿವೆ. ಅಭಿವೃದ್ಧಿ ಹೆಸರಿನಲ್ಲಿ ಭೂಮಿ ವಶಪಡಿಸಿಕೊಂಡು ಕೃಷಿಕರು ಮತ್ತು ಕೃಷಿಯನ್ನು ನಾಶ ಮಾಡುತ್ತಿವೆ. ಹೀಗಾಗಿಯೇ ದೇಶದಲ್ಲಿ ರೈತರ ಬದಲು ಕೂಲಿಕಾರರ ಸಂಖ್ಯೆ ಹೆಚ್ಚಾಗಿದೆ ಎಂದು ನಾಗರಾಜ್ ವಾಗ್ದಾಳಿ ನಡೆಸಿದರು.

ಸಣ್ಣ ರೈತರು-ದೈತ್ಯ ಬಂಡವಾಳ ಶಾಹಿಗಳ ನಡುವಿನ ಹೋರಾಟ:

ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಬಿಡದಿ ಟೌನ್‌ಶಿಪ್ ಯೋಜನೆ ಸಣ್ಣ ರೈತರು ಮತ್ತು ದೈತ್ಯ ಬಂಡವಾಳ ಶಾಹಿಗಳ ನಡುವೆ ಹೋರಾಟ. ಆ ದೈತ್ಯ ಬಂಡವಾಳ ಶಾಹಿಗಳನ್ನು ಪೊರಕೆಯಿಂದ ಸರಿ ದಾರಿಗೆ ತರುತ್ತೇವೆ ಅಂದರೆ ರೈತ ಮಹಿಳೆಯರಿಗೆ ಎಷ್ಟು ಶಕ್ತಿ ಇದೆ ಎಂಬುದನ್ನು ಅರಿತುಕೊಳ್ಳಿ ಎಂದರು.

ಸರ್ಕಾರದಲ್ಲಿರುವ ಕೊಳಕನ್ನು ಗುಡಿಸಲು ಪೊರಕೆ ಬಳಸಿದ್ದೇವೆ. ರೈತ ಮಹಿಳೆಯರ ಕೈಗೆ ಪೊರಕೆ ಬಂದ ಮೇಲೆ ರಾಜ್ಯ ಸರ್ಕಾರ ಮಾತನಾಡಿದೆ. ನೀವೆಲ್ಲರು ಇತರರಿಗೆ ಸ್ಪೂರ್ತಿಯಾಗಿದ್ದೀರಿ. ಭೂಮಿ ಉಳಿಸಿಕೊಳ್ಳುವ ಚಳವಳಿ ಸಾಮಾನ್ಯವಾದುದಲ್ಲ. ಪಕ್ಷಾತೀತ, ಜಾತ್ಯತೀ ಹಾಗೂ ಧರ್ಮಾತೀತವಾಗಿ ಚಳವಳಿಯನ್ನು ಮುಂದುವರಿಸಿದರೆ ಜಯ ಖಂಡಿತ ಸಿಗುತ್ತದೆ ಎಂದು ಹೇಳಿದರು.

ಜುಲೈ 23ರಂದು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ವಿ.ಗೋಪಾಲಗೌಡ ಸಾರ್ವಜನಿಕ ಕೋರ್ಟ್‌ನಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ.‌ ಕೃಷಿ ಅರ್ಥಶಾಸ್ತ್ರಜ್ಞ ಡಾ.ಪ್ರಕಾಶ್ ಕಮ್ಮರಡಿ, ಸಮಾಜಶಾಸ್ತ್ರಜ್ಞ ಡಾ.ಎ.ಆರ್.ವಾಸಿ, ಹಿರಿಯ ಪತ್ರಕರ್ತ ಡಿ.ಉಮಾಪತಿ ಭಾಗವಹಿಸುವರು. ಅಂದು ಜಂಗಮಕೋಟೆ ಮತ್ತು ಆನೇಕಲ್ ರೈತರು ಇಲ್ಲಿಗೆ ಬರಲಿದ್ದಾರೆ ಎಂದು ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.

ಹೈಕೋರ್ಟ್ ಅರ್ಜಿ ರೈತರ ದಿಕ್ಕು ತಪ್ಪಿಸುವ ಹುನ್ನಾರ:

ಕರ್ನಾಟಕ ಪ್ರಾಂತ ರೈತ ಸಂಘ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮಾತನಾಡಿ, ಭೂ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದ‌ ಅರ್ಜಿ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ‌ಇದು ಮುಖ್ಯಮಂತ್ರಿಗಳು ಮತ್ತು ರಿಯಲ್ ಎಸ್ಟೇಟ್ ಕುಳಗಳು ರೈತರ ದಿಕ್ಕು ತಪ್ಪಿಸಲು ಮಾಡಿರುವ ಹುನ್ನಾರ ಎಂದು ಟೀಕಿಸಿದರು.

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ವ್ಯಕ್ತಿ ಮೂಲಕ ಅವರುಗಳು ಬೇಕೆಂದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಸಿದ್ದಾರೆ. ಈಗ ಹೈಕೋರ್ಟ್ ಅರ್ಜಿ ವಜಾ ಮಾಡಿರುವುದನ್ನು ಮುಂದಿಟ್ಟುಕೊಂಡು ಈ ಯೋಜನೆ ತಡೆಯಲು ಕೋರ್ಟ್‌ ನಿಂದಲೂ ಸಾಧ್ಯವಿಲ್ಲ ಎಂದು ಗೊಂದಲ ಸೃಷ್ಟಿಸಲಾಗಿದೆ. ನಾವು ಚನ್ನರಾಯಪಟ್ಟಣ ಹೋರಾಟ ಗೆದ್ದಿದ್ದು ಹೋರಾಟದ ಮೂಲಕವೇ ಹೊರತು ಕೋರ್ಟ್ ಮೂಲಕವಲ್ಲ. ಬಿಡದಿ ಹೋರಾಟವನ್ನು ಅದೇ ರೀತಿ ಮುಂದಕ್ಕೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು.

ರೈತರು ಕೊಡುವವರೇ ಹೊರತು ಬೇಡುವವರಲ್ಲ. ಇಲ್ಲಿನ ರೈತರ ಹೋರಾಟಕ್ಕಾಗಿ ಚನ್ನಪಟ್ಟಣದ ರೈತ ಕೆ.ಎನ್. ರಾಜು 10 ಸಾವಿರ, ಮಾಗಡಿ ತಾಲೂಕಿನ ಶಿವಲಿಂಗಯ್ಯ 3 ಸಾವಿರ ಸೇರಿದಂತೆ ರೈತ ಮುಖಂಡರು ಆರ್ಥಿಕ ನೆರವು ನೀಡಿದರು.

ಬೈರಮಂಗಲ ಪಿಡಿಒ‌ ಉಮೇಶ್ ಅವರಿಗೆ ಹೋರಾಟದ ನಿರ್ಣಯಗಳ ಪ್ರತಿಯನ್ನು ರೈತ ನಾಯಕರು ಸಲ್ಲಿಸಿದರು. ಪ್ರತಿ ಸ್ವೀಕರಿಸಿದ ಪಿಡಿಒ ಅವರು, ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಬೈರಮಂಗಲ- ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘ ಅಧ್ಯಕ್ಷ ರಾಮಯ್ಯ, ರೈತ ನಾಯಕಿ ಅನುಸೂಯಮ್ಮ, ರೈತಸಂಘ ಮುಖಂಡರಾದ ಸಂಪತ್ ಕುಮಾರ್ , ಮಂಚೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ...

ಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ್ ಎರಡು ತಿಂಗಳಲ್ಲಿ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ‌. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಆದರೂ ಈ ಹೋರಾಟವನ್ನು ಹತ್ತಿಕ್ಕಲು ವಿವಿಧ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿ- ಜೆಡಿಎಸ್‌ ಅನ್ನು ಪೂರ್ತಿ ನಂಬಬೇಡಿ. ಅವರು ವಿಧಾನಸೌಧದಲ್ಲಿ ಹೋರಾಟ ಮಾಡಲಿ. ರಾಜ್ಯಾದ್ಯಂತ ಆ ಪಕ್ಷಗಳ ಕಾರ್ಯಕರ್ತರು ಬಿಡದಿ ರೈತರ ಪರ ದನಿ ಎತ್ತಲಿ.‌ ಇದು‌ ಪಕ್ಷಾತೀತ ಹೋರಾಟ.‌ ಮುಂದೆ ಈ ಹೋರಾಟ ರಾಷ್ಟ್ರ ಮಟ್ಟಕ್ಕೆ ತಲುಪಲಿದೆ.

-ಟಿ.ಯಶವಂತ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರಾಂತ ರೈತಸಂಘ

ಕೋಟ್ .............

ರೈತರ ಜಮೀನಿಗೆ ಅಧಿಕಾರಿಗಳು ಕಾಲಿಡದಂತೆ ನಾವು ಹೋರಾಟ ತೀವ್ರಗೊಳಿಸಬೇಕು. ಅವರನ್ನು ಎದುರಿಸಲು ನಮ್ಮ ರೈತರ ಸೇನೆ ಸನ್ನದ್ದವಾಗಬೇಕು. ಅದಕ್ಕಾಗಿ ನಾವು ಪೊರಕೆ, ಬಾರುಕೋಲು ಜೊತೆಗಿಟ್ಟುಕೊಳ್ಳಬೇಕು. ನಾವು ನಕಲಿ ರೈತರಲ್ಲ. ನಿಜವಾದ ರೈತರಾದ ಕಾರಣಕ್ಕೆ ಬೈರಮಂಗಲಕ್ಕೆ ಬಂದು‌ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಮಾಡಿದ್ದೇವೆ. ರೈತರ ಗುಂಡು, ಲಾಠಿ, ಪ್ರಕರಣಕ್ಕೆ ರೈತರು ಹೆದರುವುದಿಲ್ಲ.

-ಮಂಚೇಗೌಡ, ರೈತ ಮುಖಂಡರು

ಕೋಟ್ .........

ಸ್ವಾಭಿಮಾನವೇ ರೈತರ ಶಕ್ತಿ. ಕೃಷಿ ಭೂಮಿ ಖರೀದಿಗೆ ನಿರ್ಬಂಧ ಮರು ಸ್ಥಾಪನೆಯಾಗಬೇಕು.

ರಾಮಕೃಷ್ಣ ಹೆಗಡೆಯವರು ನಂಜುಂಡಸ್ವಾಮಿ ಅವರನ್ನು ರೈತ ಅಲ್ಲ ಎಂದಾಗ, ನಂಜುಂಡಸ್ವಾಮಿ ಅವರು ತಮ್ಮ ಜಾಮೀನಿನ ಸರ್ವೇ ನಂಬರ್ ಮತ್ತು ಬೆಳೆದ ಬೆಳೆ ಮಾಹಿತಿಯನ್ನು ಹಂಚಿಕೊಂಡು, ಹೆಗಡೆ ಮತ್ತು ಅವರ ಮಂತ್ರಿಮಂಡಲಕ್ಕೆ ಜಮೀನಿಗೆ ಬಂದು ಬೆಳೆ ಕೊಯ್ಲು ಮಾಡಲಿ, ಅವರಿಗೆ ನಾನು ಕೂಲಿ ಕೊಡುವೆ ಎಂದು ಸವಾಲು ಹಾಕಿದ್ದರು. ಅಂತಹ ಚಳವಳಿ ಮರುಕಳಿಸಬೇಕಿದೆ. ಭೂಮಿ ಉಳಿವಿಗಾಗಿ ಈ ಟೌನ್‌ಶಿಪ್ ರದ್ದಾಗಬೇಕು.

- ಅನುಸೂಯಮ್ಮ, ರೈತ ನಾಯಕಿ, ಚನ್ನಪಟ್ಟಣ

21ಕೆಆರ್ ಎಂಎನ್ 3,4.ಜೆಪಿಜಿ

ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆಯುತ್ತಿರುವ ಚಳವಳಿಯಲ್ಲಿ

ನರಗುಂದ ಮತ್ತು ನವಲಗುಂದ ರೈತ ಬಂಡಾಯದ ಹುತಾತ್ಮರ ಸ್ಮರಣಾರ್ಥ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ಬಿಡದಿ ಭೂ ಸ್ವಾಧೀನ ವಿರೋಧಿ ದಿನಾಚರಣೆ ಕಾರ್ಯಕ್ರಮದ ಚಿತ್ರಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ಜಿಡಿಪಿಗೆ ಹೈನುಗಾರಿಕೆಯಿಂದ ಶೇ. ೨೫ ರಷ್ಟು ಕೊಡುಗೆ
ನೀರನ್ನು ಮಿತವಾಗಿ ಬಳಸಲು ಮನವಿ