ಮಂಡ್ಯ ಮಂಜುನಾಥ
ಕಳೆದ ಮೂರು ವರ್ಷಗಳಿಂದ ಬೇಸಿಗೆ ಮಳೆ, ಮುಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಕುಡಿಯುವ ನೀರಿನ ಪರಿಸ್ಥಿತಿ ಈ ವರ್ಷದಷ್ಟು ಹದಗೆಟ್ಟಿರಲಿಲ್ಲ. ಈ ಬಾರಿ ಜಿಲ್ಲೆಗೆ ಬೇಸಿಗೆ ಮಳೆ ಕೊರತೆ ಎದುರಾಗಿದೆ. ಮುಂಗಾರು ಮಳೆಯ ಅಭಾವ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಎದುರಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳಲಾರಂಭಿಸಿದೆ.
ಹಿರಿಯ ಅಧಿಕಾರಿಗಳ ಒತ್ತಡದಿಂದ ಹಸ್ತಾಂತರ:ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೆಟ್ಟು ನಿಂತು ವರ್ಷಗಳೇ ಕಳೆದರೂ ಅವುಗಳನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿರಲಿಲ್ಲ. ನಿರ್ವಹಣೆ ವೆಚ್ಚ ಹೆಚ್ಚು ಎಂಬ ಕಾರಣಕ್ಕೆ ಏಜೆನ್ಸಿಗಳು ದೂರ ಉಳಿದಿದ್ದವು. ಐದು ವರ್ಷಗಳ ಕಾಲ ಏಜೆನ್ಸಿಗಳು ನಿರ್ವಹಣೆ ಮಾಡಿದ ಬಳಿಕ ಹಲವಾರು ಘಟಕಗಳನ್ನು ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಗಳ ಮಾತಿಗೆ ಕಟ್ಟುಬಿದ್ದು ಏಜೆನ್ಸಿಗಳಿಂದ ವಿದ್ಯುತ್ ಬಿಲ್ ಬಾಕಿ ಪಾವತಿಸಿ ಪಂಚಾಯ್ತಿಗಳಿಗೆ ಹಸ್ತಾಂತರ ಮಾಡಿಸಿಕೊಂಡಿವೆ.
ಕೆಟ್ಟಿವೆ ೭೫ ರಿಂದ ೮೦ ಘಟಕಗಳು:
ಸಾಕಷ್ಟು ವರ್ಷ ಕಾರ್ಯಾಚರಣೆಯಾಗಿರುವ ಘಟಕಗಳು ಹಳೆಯದಾಗಿವೆ. ಬಿಡಿಭಾಗಗಳ ಬೆಲೆಯೂ ದುಬಾರಿಯಾಗಿದೆ. ಹೀಗಾಗಿ ಘಟಕಗಳು ಪದೇ ಪದೇ ರಿಪೇರಿಗೆ ಬರುತ್ತಲೇ ಇರುವುದರಿಂದ ಪಂಚಾಯ್ತಿಗಳಿಗೆ ಘಟಕಗಳು ಹೊರೆಯಾಗಿ ಪರಿಣಮಿಸಿವೆ. ಮಂಡ್ಯ ತಾಲೂಕಿನ ಬೇಲೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕಳೆದೊಂದು ತಿಂಗಳ ಹಿಂದೆ ದುರಸ್ತಿಯಾಗಿದ್ದರೆ, ಬಿ.ಯರಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾಚರಣೆಯಲ್ಲಿದ್ದರೂ ನೀರು ಶುದ್ಧೀಕರಣಗೊಳ್ಳುತ್ತಿಲ್ಲ. ಈ ಘಟಕದ ನೀರನ್ನು ಗ್ರಾಮದ ಜನರು ಉಪಯೋಗಿಸುತ್ತಲೇ ಇಲ್ಲ. ಆದರೂ ಅಧಿಕಾರಿಗಳ ದೃಷ್ಟಿಯಲ್ಲಿ ಈ ಘಟಕ ಚಾಲನೆಯಲ್ಲಿರುವುದಾಗಿ ಹೇಳಲಾಗುತ್ತಿದೆ. ಅದೇ ರೀತಿ ಬೂದನೂರು ಪಂಚಾಯ್ತಿ ವ್ಯಾಪ್ತಿಯಲ್ಲೂ ಒಂದು ಘಟಕ ನಿರುಪಯುಕ್ತವಾಗಿರುವುದು. ಬೇಲೂರು ಪಂಚಾಯ್ತಿಗೆ ಸೇರಿದ ಕಾವೇರಿ ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವೂ ದುರಸ್ತಿಯಲ್ಲಿರುವುದು ಕಂಡುಬಂದಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳು ಏಳೆಂಟು ವರ್ಷಗಳಿಂದ ಕಾರ್ಯಾಚರಣೆ ನಡೆಸಿರುವುದರಿಂದ ಸರಿಯಾದ ನಿರ್ವಹಣೆಯಿಲ್ಲದೆ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ, ಬಿಡಿಭಾಗಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ನೀರು ಸಮರ್ಪಕವಾಗಿ ಶುದ್ಧೀಕರಣಗೊಳ್ಳುತ್ತಿಲ್ಲದಿರುವುದೂ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಲೇ ಇವೆ. ಹಾಗಾಗಿ ಜಿಲ್ಲೆಯಲ್ಲಿರುವ ಒಟ್ಟು ೬೭೭ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಾಜ್ಯ ಮಟ್ಟದಲ್ಲಿ ಟೆಂಡರ್ ಮಾಡಿ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿ ಪಂಚಾಯ್ತಿಗಳಿಗೆ ಹಸ್ತಾಂತರ ಮಾಡಿದರೆ ಆಗ ನಿರ್ವಹಣೆ ಮಾಡುವುದಕ್ಕೆ ಸುಲಭವಾಗಲಿದೆ. ಇಲ್ಲದಿದ್ದರೆ ದುರಸ್ತಿಯ ವೆಚ್ಚ ಹೆಚ್ಚುತ್ತಲೇ ಹೋಗುತ್ತಿರುತ್ತದೆ ಎಂದು ಹೆಸರೇಳಲಿಚ್ಚಿಸದ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.
ಜಲಜೀವನ್ ಯೋಜನೆ ಆಮೆವೇಗದಲ್ಲಿ ಸಾಗುತ್ತಿರುವ ಪ್ರತಿ ಮನೆಗೆ ನಳ ಸಂಪರ್ಕವಿದ್ದರೂ ನೀರೇ ಬರುತ್ತಿಲ್ಲ. ಹಲವು ಗ್ರಾಪಂಗಳಲ್ಲಿ ಓವರ್ಹೆಡ್ ಟ್ಯಾಂಕ್ಗಳು ನಿರ್ಮಾಣವಾಗಿಲ್ಲ. ಕೆಲವೆಡೆ ಓವರ್ಹೆಡ್ ಟ್ಯಾಂಕ್ಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ಹಣ ಬಿಡುಗಡೆಯಾಗಿಲ್ಲವೆಂಬ ಕೂಗು ಕೇಳಿಬಂದಿದೆ. ಹೀಗಾಗಿ ಜಲಜೀವನ್ ಜನರ ಕುಡಿಯುವ ನೀರಿನ ದಾಹವನ್ನು ಇಂಗಿಸದಂತಾಗಿವೆ. ಹೀಗಾಗಿ ಗ್ರಾಮ ಪಂಚಾಯಿತಿಗಳು ಸರ್ಕಾರಿ ಕೊಳವೆ ಬಾವಿಗಳ ಮೂಲಕವೇ ಗ್ರಾಮಗಳಿಗೆ ನೀರೊದಗಿಸುವ ಕಾರ್ಯವನ್ನು ನಡೆಸುತ್ತಿವೆ. ಈ ಕೊಳವೆ ಬಾವಿಗಳಲ್ಲೂ ನೀರಿನ ಇಳುವರಿ ಕುಂಠಿತಗೊಂಡಿರುವುದು, ಇನ್ನೊಂದೆಡೆ ಮಳೆಯಾಗದಿರುವುದು ದಿನೇ ದಿನೇ ಪರಿಸ್ಥಿತಿಯನ್ನು ಕ್ಲಿಷ್ಟಗೊಳಿಸುತ್ತಿವೆ.
ಮಂಡ್ಯ ತಾಲೂಕಿನಲ್ಲಿ ೧೭೨ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ೧೬೨ ಕಾರ್ಯನಿರ್ವಹಿಸುತ್ತಿವೆ. ೧೦ ಘಟಕಗಳು ಮಾತ್ರ ಕೆಟ್ಟಿವೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದರಿಂದ ಎರಡು ಘಟಕಗಳು ಕಾರ್ಯಾಚರಣೆಯಲ್ಲಿಲ್ಲದಿರುವ ಮಾಹಿತಿ ನಮಗೆ ಇಲ್ಲ. ಅದರ ಬಗ್ಗೆ ಪಿಡಿಓಗಳಿಂದ ಮಾಹಿತಿ ಪಡೆದುಕೊಳ್ಳುವೆ. ನಿರುಪಯುಕ್ತವಾಗಿರುವ ಘಟಕಗಳನ್ನು ಜನರಿಗೆ ಉಪಯೋಗವಾಗುವಂತೆ ಮಾಡಲಾಗುವುದು.