ಕೆಎಲ್‌ಇ ಹಾಗೂ ಜೆಎನ್‌ಸಿಎಸ್‌ಆರ್‌ ಮಧ್ಯೆ ಒಡಂಬಡಿಕೆ

KannadaprabhaNewsNetwork | Published : Mar 26, 2025 1:36 AM

ಇಲ್ಲಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಜವಾಹರಲಾಲ್ ನೆಹರೂ ಸೆಂಟರ್ ಫಾರ್‌ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗಳ ಮಧ್ಯೆ ಮಹತ್ವದ ಒಪ್ಪಂದಕ್ಕೆ (ಎಂಒಯು) ಮಂಗಳವಾರ ಸಹಿ ಹಾಕಲಾಯಿತು.

ಹುಬ್ಬಳ್ಳಿ: ಇಲ್ಲಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಜವಾಹರಲಾಲ್ ನೆಹರೂ ಸೆಂಟರ್ ಫಾರ್‌ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗಳ ಮಧ್ಯೆ ಮಹತ್ವದ ಒಪ್ಪಂದಕ್ಕೆ (ಎಂಒಯು) ಮಂಗಳವಾರ ಸಹಿ ಹಾಕಲಾಯಿತು.

ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ. ಪ್ರಕಾಶ ತೆವರಿ ಹಾಗೂ ಜೆಎನ್ ಸಿಎಎಸ್‌ಆರ್ ಅಧ್ಯಕ್ಷ ಡಾ. ಜಿ.ಯು. ಕುಲಕರ್ಣಿ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ಪರಸ್ಪರ ವಿನಿಯಮ ಮಾಡಿಕೊಂಡರು.

ವೈಜ್ಞಾನಿಕ ಸಂಶೋಧನೆ, ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ವಿನಿಮಯ, ಜ್ಞಾನ ಹಂಚಿಕೆ, ಶೈಕ್ಷಣಿಕ, ಸಂಶೋಧನೆ, ಕೈಗಾರಿಕೆ ಮುಂತಾದ ವಲಯಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳ ಕಲಿಕೆ ಹಾಗೂ ಜ್ಞಾನಾಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಈ ಒಪ್ಪಂದ ಅನುಕೂಲವಾಗಲಿದೆ.

ಈ ಸಂದರ್ಭದಲ್ಲಿ ಐಐಟಿ ಡೀನ್ ಡಾ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಸಂಶೋಧನಾ ಕ್ಷೇತ್ರದಲ್ಲಿರುವ ಅವಕಾಶಗಳ ಕಲ್ಪಿಸುವ ಉದ್ದೇಶದಿಂದ ಎರಡು ಸಂಸ್ಥೆಗಳ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ದೇಶ ಅಭಿವೃದ್ಧಿಗೆ ಇದು ಪೂರಕವಾಗಿದೆ ಎಂದು ತಿಳಿಸಿದರು.

ಡಾ. ಜಿ.ಯು. ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ ಹಾಗೂ ಜ್ಞಾನಾಭಿವೃದ್ಧಿಗೆ ಈ ಒಪ್ಪಂದ ಪೂರಕವಾಗಿದೆ. ಮೂಲ ಸಂಶೋಧನೆ, ವೈದ್ಯಕೀಯ, ಆರೋಗ್ಯ ಕ್ಷೇತ್ರ ಸೇರಿ ಹಲವು ವಲಯಗಳಲ್ಲಿ ಸಂಶೋಧನೆ ಕೈಗೊಳ್ಳಲು ಅನುಕೂಲವಾಗಿದೆ. ಈ ಎರಡು ದಿಗ್ಗಜ ಸಂಸ್ಥೆಗಳನ್ನು ಒಡಂಬಡಿಕೆ ಮೂಲಕ ಹತ್ತಿರ ತಂದಿದ್ದಕ್ಕೆ ಧನ್ಯವಾದ ತಿಳಿಸಿದರು.

ಸಂಶೋಧನೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿಯ ವಿದ್ಯಾರ್ಥಿಗಳಿಂದ ಇನ್ನೂ ಹೆಚ್ಚು ಸಂಶೋಧನೆ ಹಾಗೂ ಆವಿಷ್ಕಾರಗಳು ನಡೆಯಲಿ ಎಂದು ಆಶಿಸಿದರು.

ಕೆಎಲ್ಇ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ಭಾರತದಲ್ಲಿ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜೆಎನ್‌ಸಿಎಸ್ಆರ್ ಮಧ್ಯದ ಈ ಒಪ್ಪಂದ ಪ್ರಸ್ತುತ ಅಗತ್ಯವಿದೆ. ಎಂಜಿನಿಯರಿಂಗ್ ಎಂಬುದು ವಿಜ್ಞಾನ ಕ್ಷೇತ್ರದ ಪ್ರಮುಖ ಅಂಗವಾಗಿದೆ. ಉತ್ಪಾದನಾ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿವೆ. ಇಂತಹ ಸಂದರ್ಭದಲ್ಲಿ ವಿಜ್ಞಾನ ಹಾಗೂ ಎಂಜಿನಿಯರಿಂಗ್ ಮಧ್ಯೆ ಸೇತುವೆ ನಿರ್ಮಿಸಬೇಕಿದೆ. ಈ ದಿಸೆಯಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದರು.

ಡಾ. ಎನ್‌.ಎ. ಅಯಾಚಿತ, ಡಾ.ಬಸವರಾಜ ಅನಾಮಿ ಇತರರು ಇದ್ದರು.

25ಎಚ್‌ಯುಬಿ5,6ಒಡಂಬಡಿಕೆ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.