ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ದೇವಳ ಕಾಲೇಜಿನಲ್ಲಿ ನಡೆಯುತ್ತಿರುವ ನುಡಿಹಬ್ಬದ ಮೊದಲ ದಿನ ರಂಗಭೂಮಿ, ಸಿನಿಮಾ ಗೋಷ್ಟಿಯಲ್ಲಿ ಖ್ಯಾತ ನಟ, ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ, ನಟ ಡಾಲಿ ಧನಂಜಯ್, ನಿರ್ದೇಶಕ ಮಹೇಶ್ ಬಾಬು, ಕಾರ್ತಿಕ್ ಗೌಡ ಹಾಗೂ ನಟ ಪ್ರಕಾಶ್ ತೂಮಿನಾಡ್ ನೆರೆದ ವಿದ್ಯಾರ್ಥಿ ಸಮೂಹ ಹಾಗೂ ಸಭಿಕರನ್ನು ರಂಜಿಸಿದರು.ಪ್ರಕಾಶ್ ತೂಮಿನಾಡ್ ಮಾತನಾಡಿ, ವಿದ್ಯೆಯೊಂದಿಗೆ ಉದ್ಯೋಗ ಅವಕಾಶಗಳನ್ನೂ ಚೆನ್ನಾಗಿ ಬಳಸಿಕೊಳ್ಳಿ ಎಂದರು.ಡಾಲಿ ಧನಂಜಯ ಮಾತಾಡಿ, ನೆಗೆಟಿವ್ ಯೋಚನೆ ಬಿಡಿ, ಸೋತರೆ ತಲೆಕೆಡಿಸಿಕೊಳ್ಳದೆ ಗೆಲುವಿನ ಕಡೆಗೆ ಪ್ರಾಮಾಣಿಕವಾಗಿ ಕನಸು ಕಟ್ಟಿಕೊಂಡು ಸಾಧನೆಯೆಡೆಗೆ ತೊಡಗಿಸಿಕೊಳ್ಳಿ ಎಂದರು.
ವಿದ್ಯಾರ್ಥಿಗಳು ತಾವು ರಚಿಸಿದ ಚಿತ್ರಗಳನ್ನು ತಾರೆಯವರಿಗೆ ನೀಡಿ ಸಂಭ್ರಮಿಸಿದರು.ವಿವಿಧ ಕಾರ್ಯಕ್ರಮ:
ಕಾರ್ಯಕಮ್ಮದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಕಬ್ಬಿನಾಲೆಯವರೊಂದಿಗೆ ಸಂವಾದ, ಗುಡುರಾಜ ಸನಿಲ್ ಅವರಿಂದ ಪ್ರಕೃತಿ ಸಂಸ್ಕೃತಿ, ಅರವಿಂದ ಹೆಬ್ಬಾರ್ ಅವರಿಂದ ಸಂಗೀತ ಸ್ವಾದ, ಡಾ. ಶಿಲ್ಪಾ ಎಚ್. ನವೀನ್ ಅವರಿಂದ ಮೊಬೈಲು ಮತ್ತು ಆರೋಗ್ಯ, ಜನಸಾಮಾನ್ಯ ಸಾಧಕರಾದ ಯಾಸೀರ್ ಯಾಚಿ, ನಾಗರಾಜ ಪೈ, ಗಣೇಶ ಪಂಜಿಮಾರು, ಸುಮಾ ಪಂಜಿಮಾರು, ಮಾಧವ ಉಳ್ಳಾಲ್ ಅವರಿಂದ ಸ್ಫೂರ್ತಿಯ ಉಪನ್ಯಾಸ ನಡೆಯಿತು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಭಾಷೆಯ ಬಳಕೆಯಲ್ಲಿ ಎಚ್ಚರವಿರಲಿ: ವಸಂತ ಭಾರದ್ವಾಜಸಮ್ಮೇಳನಾಧ್ಯಕ್ಷ ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ಭಾಷೆಯನ್ನು ಬಹಳ ಎಚ್ಚರದಲ್ಲಿ ಬಳಸಬೇಕು. ಅಪಪ್ರಯೋಗಗಳು ಆಗಬಾರದು. ಎಲ್ಲರ ಮನೆಯಲ್ಲೂ ಕನ್ನಡದ ನಿಘಂಟು, ಪದಕೋಶ ಇರಬೇಕು. ಸರಿಯಾದ ಪದಗಳನ್ನು ಬಳಸಬೇಕು. ಶಬ್ದದ ಮೂಲ ಸ್ವರೂಪ, ಸಹಜವಾದ ಅರ್ಥ ತಿಳಿಯಬೇಕು ಎಂದರು.
ಆಧುನಿಕ ಸಂಧಿಗಳು ಬಂದು ತಪ್ಪು ಪ್ರಯೋಗಗಳಾಗುತ್ತಿವೆ. ಭಾಷೆಯ ಭಾವ ಮತ್ತು ಭಂಗಿ ಮುಖ್ಯವಾಗುತ್ತದೆ. ಮಾತಾಡುವ ಭಾಷೆ ಹೇಗೆ ತಲುಪುತ್ತಿದೆ ಎನ್ನುವುದು ಗೊತ್ತಿರಬೇಕು. ಕನ್ನಡ ಭಾಷೆಯ ಅಸೀಮ ಶಕ್ತಿಯ ಬಗ್ಗೆ ಈ ಆಧುನಿಕ ಯುಗದಲ್ಲಿ ಎಷ್ಟು ಆಲೋಚನೆ ಮಾಡುತ್ತೇವೆ ಎನ್ನುವುದನ್ನು ಚಿಂತಿಸಬೇಕು ಎಂದು ಹೇಳಿದರು.