ಗೊಲ್ಲರ ಸಂಘದಿಂದ ಎಂಪಿ ಫಂಡ್ ಅಪವ್ಯಯ

KannadaprabhaNewsNetwork | Published : Apr 1, 2025 12:49 AM

ಬಸವ ಪುತ್ಥಳಿ ನಿರ್ಮಾಣದ ಹೆಸರಲ್ಲಿ 25 ಕೋಟಿ ರು.ಗೂ ಹೆಚ್ಚು ಸರ್ಕಾರಿ ಹಣ ಕಬಳಿಸಿದ ಶಂಕೆಯ ಒಡಲಲ್ಲಿ ಹುದುಗಿಸಿಕೊಂಡಿರುವ ಚಿತ್ರದುರ್ಗ ಇದೀಗ ಅಂತಹದ್ದೇ ಮತ್ತೊಂದು ಪ್ರಕರಣಕ್ಕೆ ಸುದ್ದಿಯಾಗುತ್ತಿದೆ. ಬಸವ ಪುತ್ಥಳಿ ವಿಚಾರದಲ್ಲಿ ಕೇವಲ ಪಾದುಕೆಗಳು ಮಾತ್ರ ಕಂಡು ಬಂದರೆ, ಗೊಲ್ಲರ ಸಂಘದ ಹೊಸ ಪ್ರಕರಣದಲ್ಲಿ ಉದ್ದನೆಯ ಗೋಡೆ ನಿರ್ಮಾಣವಾಗಿದೆ.

ಕಾಮಗಾರಿಗೂ, ಅನುದಾನಕ್ಕೂ ಅಜಗಜಾಂತರ ವ್ಯತ್ಯಾಸ । ಅಂಬಲಿ ಕುಡಿಸಿ, ಮೀಸೆ ತಿಕ್ಕಿದರಾ ಅಧಿಕಾರಿಗಳು!

(ಅನುದಾನ ಅಧ್ವಾನ- ಭಾಗ-1)

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಸವ ಪುತ್ಥಳಿ ನಿರ್ಮಾಣದ ಹೆಸರಲ್ಲಿ 25 ಕೋಟಿ ರು.ಗೂ ಹೆಚ್ಚು ಸರ್ಕಾರಿ ಹಣ ಕಬಳಿಸಿದ ಶಂಕೆಯ ಒಡಲಲ್ಲಿ ಹುದುಗಿಸಿಕೊಂಡಿರುವ ಚಿತ್ರದುರ್ಗ ಇದೀಗ ಅಂತಹದ್ದೇ ಮತ್ತೊಂದು ಪ್ರಕರಣಕ್ಕೆ ಸುದ್ದಿಯಾಗುತ್ತಿದೆ. ಬಸವ ಪುತ್ಥಳಿ ವಿಚಾರದಲ್ಲಿ ಕೇವಲ ಪಾದುಕೆಗಳು ಮಾತ್ರ ಕಂಡು ಬಂದರೆ, ಗೊಲ್ಲರ ಸಂಘದ ಹೊಸ ಪ್ರಕರಣದಲ್ಲಿ ಉದ್ದನೆಯ ಗೋಡೆ ನಿರ್ಮಾಣವಾಗಿದೆ.

ಗೊಲ್ಲರ ಸಂಘದಿಂದ ನೂತನವಾಗಿ ನಿರ್ಮಾಣಾಗುತ್ತಿರುವ ಸಮುದಾಯ ಭವನಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಬಿಡುಗಡೆ ಮಾಡಲಾದ 70 ಲಕ್ಷ ರು. ಹಾಗೂ ವಿಧಾನ ಪರಿಷತ್ ಸದಸ್ಯರ 10 ಲಕ್ಷ ರು. ಅನುದಾನ ಬಳಕೆ ದುರುಪಯೋಗದ ಸಾಧ್ಯತೆಗಳ ರವಾನಿಸಿದೆ. ಕೈಗೆತ್ತಿಕೊಳ್ಳಲಾದ ಕಾಮಗಾರಿಗೂ, ಬಳಕೆ ಮಾಡಲಾದ ಅನುದಾನಕ್ಕೂ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತಿದೆ.

ಚಿತ್ರದುರ್ಗದ ಹೃದಯ ಭಾಗವಾದ ರಂಗಯ್ಯನ ಬಾಗಿಲು ಬಳಿ ಗೊಲ್ಲರ, ಯಾದವ ಸಂಘದ (ವಿದ್ಯಾರ್ಥಿನಿಲಯ) ಕಟ್ಟಡವಿದ್ದು, ಅದನ್ನು ನೆಲಸಮ ಮಾಡಿ ಅಲ್ಲೊಂದು ಸಮುದಾಯ ಭವನವ ನಿರ್ಮಿಸಲು ಸಂಸದರು, ವಿಧಾನ ಪರಿಷತ್ ಸದಸ್ಯರಿಂದ ಇದುವರೆಗೂ 80 ಲಕ್ಷ ರು. ಅನುದಾನ ಪಡೆಯಲಾಗಿದೆ. ಕಟ್ಟಡ ನೆಲ ಬಿಟ್ಟು ಮೇಲೆ ಎದ್ದಿಲ್ಲ. ಹಳ್ಳದ ತೀರದಲ್ಲಿ ತಡೆಗೋಡೆ ನಿರ್ಮಾಣ ಮಾಡಿದಂತೆ ಹತ್ತಾರು ಮೀಟರ್ ಉದ್ದದ ಗೋಡೆ ಮಾತ್ರ ಕಾಣಿಸುತ್ತಿದೆ. ಇದೀಗ ಮತ್ತೆ 25 ಲಕ್ಷ ರು. ಅನುದಾನಕ್ಕೆ ಸಂಸದರಿಗೆ ಬೇಡಿಕೆ ಸಲ್ಲಿಸಲಾಗಿದೆ. ಮುಂದುವರಿದ ಕಾಮಗಾರಿ ಹೆಸರಲ್ಲಿ ಜಿಲ್ಲಾಧಿಕಾರಿ ಸರ್ಕಾರಿ ಅನುದಾನವ ತುಂಬಾ ಉದಾರವಾಗಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

2019-20 ನೇ ಸಾಲಿನಲ್ಲಿ ಹಿಂದಿನ ಕೇಂದ್ರ ಸಚಿವ ಹಾಗೂ ಸಂಸದ ಎ.ನಾರಾಯಣಸ್ವಾಮಿ ಗೊಲ್ಲರ ಸಂಘದಿಂದ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಸಮುದಾಯ ಭವನಕ್ಕೆ 25 ಲಕ್ಷ ರು. ಅನುದಾನ ನೀಡಿದ್ದರು. ನಂತರದಲ್ಲಿ ಮುಂದುವರಿದ ಕಾಮಗಾರಿ ಹೆಸರಲ್ಲಿ ಮತ್ತೆ 2020-21ನೇ ಸಾಲಿನಲ್ಲಿ ನಾರಾಯಣಸ್ವಾಮಿ 25 ಲಕ್ಷ ರು. ನೀಡಿದ್ದಾರೆ. ಇದಲ್ಲದೇ ರಾಜ್ಯ ಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಕೂಡಾ ಯಾದವ ಗೊಲ್ಲರ ಸಂಘಕ್ಕೆ 20 ಲಕ್ಷ ರು. ನೀಡಿದ್ದಾರೆ. ಇದೇ ಸಾಲಿನಲ್ಲಿ ವಿಪ ಸದಸ್ಯ ಕೆ.ಎಸ್.ನವೀನ್ 10 ಲಕ್ಷ ರು. ಅನುದಾನ ಕೊಟ್ಟಿದ್ದಾರೆ. ಸರ್ಕಾರಿ ಅನುದಾನ ಅಪಾರ ಪ್ರಮಾಣದಲ್ಲಿ ವ್ಯಯವಾಗಿದ್ದರೂ ಕಾಮಗಾರಿ ಪ್ರಮಾಣ ತಾಳೆಯಾಗುತ್ತಿಲ್ಲ. ಬುಕ್ ಅಡ್ಜೆಸ್ಟ್‌ಮೆಂಟ್‌ಗೆ ಎಂಪಿ ಫಂಡ್ ಸೀಮಿತ ಆಯಿತೇ? ಎಂಬ ಅನುಮಾನಗಳು ಮೂಡಿವೆ.

ಊರಲ್ಲಿ ಸಣ್ಣದೊಂದು ಸಮುದಾಯ ಭವನ ನಿರ್ಮಿಸುತ್ತೇವೆ, ಹತ್ತು ಲಕ್ಷ ರು. ಅನುದಾನ ಕೊಡಿ ಎಂದು ಗ್ರಾಮೀಣರು ಕೇಳಿದರೂ ಅವರ ಬೇಡಿಕೆ ಈಡೇರಿಸಿಕೊಳ್ಳುವಷ್ಟರಲ್ಲಿ ಸುಸ್ತಾಗಿರುತ್ತಾರೆ. ಹಾಗೊಂದು ವೇಳೆ ಅನುದಾನ ಪಡೆದುಕೊಂಡರೂ ಸಮುದಾಯ ಭವನ (ಗುಣಮಟ್ಟದ ಖಾತರಿ ಇಲ್ಲ) ಮೇಲೆದ್ದಿರುತ್ತದೆ. ಆದರೆ ಚಿತ್ರದುರ್ಗದ ಯಾದವ ಸಂಘಕ್ಕೆ ನೀಡಲಾದ ಅನುದಾನ ನಾಯಕನಹಟ್ಟಿ ತಿಪ್ಪೇಶನ ರಥದ ಮೇಲೆ ಎಸೆಯುವ ಸೂರು ಬೆಲ್ಲ, ಮೆಣಿಸಿನಂತೆ ಭಾಸವಾಗುತ್ತಿದೆ. ಸರ್ಕಾರಿ ಅನುದಾನ ಸಿಕ್ಕವರಿಗೆ ಸೀರುಂಡೆ ಎಂಬಂತಾಗಿದೆ. ಗೊಲ್ಲರ ಸಂಘದ ವಿಚಾರದಲ್ಲಿ ಅಧಿಕಾರಿಗಳು ಸಂಘ ಸಂಸ್ಥೆಗಳಿಗೆ ಅನುದಾನದ ಅಂಬಲಿ ಕುಡಿಸಿ, ಮೀಸೆ ತಿಕ್ಕಿದರಾ? ಎಂಬ ಮಾತು ನೆನಪಾಗುತ್ತಿದೆ.

ಲೆಕ್ಕ ಪತ್ರಗಳು ನಿರ್ವಹಣೆ ಮಾಡಲಾಗಿಲ್ಲವೆಂಬ ದೂರನ್ನು ಪರಿಗಣಿಸಿ ಸಹಕಾರ ಸಂಘಗಳ ನಿಬಂಧಕರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರ ಅನುಸಾರ ಗೊಲ್ಲರ ಸಂಘಕ್ಕೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಗಳ ನೇಮಿಸಿದೆ. ಉಪ ವಿಭಾಗಾಧಿಕಾರಿಗಳು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ಅಲ್ಲಿಯ ಸ್ಥಿತಿ ಪರಿಶೀಲಿಸಲಿದ್ದಾರೆ.

ಫೋಟೋ ಪೈಲ್ ನೇಮ್: ವೆಂಕಟೇಶ್, ಜಿಲ್ಲಾಧಿಕಾರಿ.