ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಸುರೇಂದ್ರ ಮೂರ್ತಿಯವರಿಗೆ ಪತ್ರಕರ್ತರ ಬಗ್ಗೆ ಹಗುರವಾಗಿ ಮಾತನಾಡಿದ ಸಂಸದರ ನಡೆ ಖಂಡಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವುದರ ಜೊತೆಯಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾರಂಗದ ಸದಸ್ಯರಾದ ನಾವು ಯಾವುದೇ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ. ಫೆ.27ರಂದು ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ರ ಬೆಂಬಲಿಗರು ಶಕ್ತಿಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಯನ್ನು ಕೂಗಿದ ವಿಚಾರವಾಗಿ ಮಾಧ್ಯಮದ ಪ್ರತಿನಿಧಿ ಪ್ರಶ್ನಿಸಲು ಮುಂದಾಗ ನಾಸಿರ್ ಹುಸೇನ್ ದೇಶದ್ರೋಹದ ಕೂಗನ್ನು ಕೂಗಿದ ಬೆಂಬಲಿಗರಿಗೆ ಎಚ್ಚರಿಕೆ ನೀಡುವ ಬದಲು ಪ್ರಶ್ನಿಸಿದ ಪತ್ರಕರ್ತರಿಗೆ ಧಮ್ಕಿ ಹಾಕುವ ಮೂಲಕ ದೇಶದ್ರೋಹದ ಕೃತ್ಯಕ್ಕೆ ಬೆಂಬಲಿಸಿದ್ದಾರೆ. ನಾಸಿರ್ ಹುಸೇನ್ ಮತ್ತು ಅವರ ಬೆಂಬಲಿಗರ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು, ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಕೂಡಲೇ ನೂತನ ಸಂಸದರು ಪತ್ರಕರ್ತರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಹಿರಿಯ ಪತ್ರಕರ್ತರ ತಿರುಮಲೆ ಶ್ರೀನಿವಾಸ್ ಮಾತನಾಡಿ, ಪತ್ರಕರ್ತರಿಗೆ ಯಾರೂ ಕೂಡ ಈ ರೀತಿ ಧಮ್ಕಿ ಹಾಕುವ ಕೆಲಸವನ್ನು ಮಾಡಬಾರದು. ಸಮಾಜದಲ್ಲಿ ಅಂಕುಡೊಂಕುಗಳ ಬಗ್ಗೆ ಬೆಳಕು ಚೆಲುವ ಪತ್ರಕರ್ತರಿಗೆ ರಕ್ಷಣೆ ಸಿಗುವ ಕೆಲಸ ಸರ್ಕಾರದಿಂದ ಆಗಬೇಕಿದೆ. ಜನಪ್ರತಿನಿಧಿಗಳು ಗೌರವಯುತವಾಗಿ ನಡೆದುಕೊಳ್ಳಬೇಕಿದೆ ಎಂದು ಹೇಳಿದರು.ತಾಲೂಕು ಪತ್ರಕರ್ತ ಎಚ್.ಆರ್. ಮಾದೇಶ್, ನರಸಿಂಹಮೂರ್ತಿ, ದೇವರಾಜು, ರಂಗನಾಥ್ ಬಾಬು, ಬಾಬು ಸಿದ್ದಲಿಂಗೇಶ್ವರ್, ದೊಡ್ಡಿ ಜಗದೀಶ್, ಗಿರೀಶ್, ಕುಮಾರ್, ನಾಗೇಶ್, ಈಶ ಸಿದ್ದಲಿಂಗೇಶ್ವರ್ ಸೇರಿ ಅನೇಕರು ಭಾಗವಹಿಸಿದ್ದರು.