ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಆಡಳಿತ, ತಾಲೂಕಿನ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಗುರುವಾರ ಆಯೋಜನೆ ಮಾಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ ೧೩೬ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮ ಉದ್ಘಾಟಿಸಿದ ನಂತರ ಕೆಲ ಕ್ಷಣ ಮಾತನಾಡಿದ್ದು, ಸಭೆಯಲ್ಲಿ ಮಿಂಚಿನ ಸಂಚಾರ ಉಂಟು ಮಾಡುವ ಜತೆಗೆ ಹೊಸ ಆಯಾಮ ಸೃಷ್ಠಿಸಿತು.
ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಆಡಳಿತ, ತಾ. ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯೋಜನೆ ಮಾಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೬ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲೆಗಳಲ್ಲಿ ಶಿಕ್ಷಕರು ಇಚ್ಛಿತ ವಿಷಯಗಳಲ್ಲಿ ಉತ್ತಮ ಬೋಧನೆ ನೀಡುವ ನೀವುಗಳು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಮುಖ್ಯವಾಗಿ ಸಭ್ಯತೆ ಕಲಿಸಬೇಕಿದೆ ಎಂದು ತಿಳಿಸಿ, ಸರ್ಕಾರದ ಆದೇಶದಂತೆ ಶಾಲೆಗಳ ದಾಖಲಾತಿ ಹೆಚ್ಚಿಸುವ ಸಲುವಾಗಿ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ ಎಂದು ಸಲಹೆ ನೀಡಿದರು. ವೈದ್ಯರು, ಎಂಜಿನಿಯರ್, ಐಎಎಸ್, ಕೆಎಎಸ್ ಅಧಿಕಾರಿಗಳಾಗುತ್ತೇವೆ ಎನ್ನದೇ ಶಿಕ್ಷಕ ಆಗುತ್ತೇನೆ ಎನ್ನುವ ಪ್ರತಿಯೊಬ್ಬರಿಗೂ ನನ್ನ ನಮಸ್ಕಾರ ಎಂದು ತಿಳಿಸಿ, ನೀವುಗಳು ನೀಡುವ ಶಿಕ್ಷಣದಿಂದ ಇಂದು ವೇದಿಕೆ ಮೇಲೆ ಉಪಸ್ಥಿತರಾಗುವ ಸೌಭಾಗ್ಯ ನಮ್ಮದಾಗಿದೆ ಎಂದು ನುಡಿದರು.
ಮುಂದಿನ ದಿನಗಳಲ್ಲಿ ಶಾಲೆಗಳು ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ ಕಾರ್ಯ ಹಾಗೂ ಇತರೆ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪಕ್ಷಬೇಧ ಮರೆತು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ನಿಮ್ಮ ಆಶೀರ್ವಾದದಿಂದ ಸಂಸದ ಆಗಿದ್ದೇನೆ, ನನ್ನನ್ನು ಒಬ್ಬ ಸಾಮಾನ್ಯ ವ್ಯಕ್ತಿ ಎಂದು ತಿಳಿದು ಅಗತ್ಯವಿದ್ದಾಗ ಅಥವಾ ಯಾವುದೇ ಸಮಸ್ಯೆ ಇದ್ದಲ್ಲಿ ಬಂದು ಭೇಟಿ ಮಾಡುವಂತೆ ವಿನಂತಿಸಿದರು.ಮೈಸೂರಿನ ಸೆಂಟ್ ಜೋಸೆಫ್ ಕಾಂನ್ವೆಂಟ್ನಲ್ಲಿ ಶಿಕ್ಷಕರಾದ ಮಂಜುಳ ಹಾಗೂ ಅಂಟೋನಿ ವಿಕ್ಟರ್ ಎಂಬುವರು ನೀಡಿದ ಶಿಕ್ಷಣ ಹಾಗೂ ಸಭ್ಯತೆಯ ಪಾಠದಿಂದ ನಾನು ಸಂಸದನಾಗಲು ಸಾಧ್ಯವಾಗಿದೆ ಎಂದು ಶಿಕ್ಷಕರನ್ನು ನೆನೆದು ಸಂಸದ ಶ್ರೇಯಸ್ ಎಂ.ಪಟೇಲ್ ಕೃತಜ್ಞತೆ ಸಲ್ಲಿಸಿದರು.ಶಿಕ್ಷಕರಾದ ಕುಮಾರ್, ಮಂಜೇಗೌಡ, ಮಲ್ಲಮ್ಮ, ಸುಂದರೇಶ, ಜಯಲಕ್ಷ್ಮಿ, ಮಹೇಶ ಡಿ.ಎಸ್., ಲಕ್ಷ್ಮಿಬಾಯಿ ಹಾಗೂ ದ್ವಿ.ದರ್ಜೆ ಸಹಾಯಕ ಕಿರಣ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಅವರ ಕುಟುಂಬ ಸದಸ್ಯರಿಗೆ ಧನ್ಯವಾದ ಸಲ್ಲಿಸಿ, ಗೌರವಿಸಲಾಯಿತು.
ಪುರಸಭಾಧ್ಯಕ್ಷ ಕೆ.ಶ್ರೀಧರ್, ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಕಾಳೇಗೌಡ, ಪ್ರಾಂಶುಪಾಲರಾದ ದೇವರಾಜ್ ಹಾಗೂ ಟಿ.ಎಸ್.ಕುಮಾರಸ್ವಾಮಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣಯ್ಯ ಇತರರು ಇದ್ದರು
ಹೇಳಿಕೆ-1ಪ್ರಾಥಮಿಕ ಶಿಕ್ಷಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ನೀಡುವ ಜತೆಗೆ ಪೂರ್ವಿಕರು ಸ್ಥಾಪಿಸಿದ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಪ್ರತಿ ಹೋಬಳಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಸೌಲಭ್ಯ ನೀಡಬೇಕು.
- ಎಚ್.ಡಿ.ರೇವಣ್ಣ , ಶಾಸಕ