ನಿ. ಐಎಎಸ್‌ ಬಾಲಸುಬ್ರಮಣಿಯನ್‌, ಇಫ್ಕೋ ಎಂಡಿ ಯೋಗೇಂದ್ರ ಕುಮಾರ್‌ಗೆ ಕೃಷಿ ವಿವಿ ಗೌಡ

KannadaprabhaNewsNetwork |  
Published : May 14, 2025, 01:56 AM IST
V. Balasubramanian | Kannada Prabha

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಮೇ 15ರಂದು ನಡೆಯಲಿದ್ದು, ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ಹಾಗೂ ಇಫ್ಕೋ ಇ-ಬಜಾರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ಕುಮಾರ್‌ ಅವರಿಗೆ ಗೌರವ ಡಾಕ್ಟರೇಟ್‌ ಸೇರಿ 1271 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಮೇ 15ರಂದು ನಡೆಯಲಿದ್ದು, ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ಹಾಗೂ ಇಫ್ಕೋ ಇ-ಬಜಾರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ಕುಮಾರ್‌ ಅವರಿಗೆ ಗೌರವ ಡಾಕ್ಟರೇಟ್‌ ಸೇರಿ 1271 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11ಗಂಟೆಗೆ ಜಿಕೆವಿಕೆ ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್‌ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆಯುವ ಘಟಿಕೋತ್ಸವದ ಅಧ್ಯಕ್ಷತೆಯನ್ನು ಕುಲಾಧಿಪತಿ, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ವಹಿಸಲಿದ್ದಾರೆ. ಕೃಷಿ ಸಚಿವ, ಕೃಷಿ ವಿವಿ ಸಹಕುಲಾಧಿಪತಿ ಎನ್. ಚಲುವರಾಯಸ್ವಾಮಿ ಭಾಗಿಯಾಗಲಿದ್ದಾರೆ. ಇಫ್ಕೋ ವ್ಯವಸ್ಥಾಪಕ ನಿರ್ದೆಶಕ ಡಾ. ಯು.ಎಸ್. ಅವಸ್ಥಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದರು.

871 ಸ್ನಾತಕ ಪದವಿ, 311 ಸ್ನಾತಕೋತ್ತರ ಪದವಿ, ಹಾಗೂ 89 ಡಾಕ್ಟೊರಲ್ ಪದವಿ ಸೇರಿ ಒಟ್ಟಾರೆ 1271ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಡಾಕ್ಟರ್ ಆಫ್ ಫಿಲಾಸಫಿ 30, ಸ್ನಾತಕೋತ್ತರ ಪದವಿ 62, ಸ್ನಾತಕ ಪದವಿಯಲ್ಲಿ 58 ಚಿನ್ನದ ಪದಕ, ಪ್ರಮಾಣ ಪತ್ರ ನೀಡಲಾಗುತ್ತಿದೆ. ಮಂಡ್ಯದ ಕೃಷಿ ಮಹಾವಿದ್ಯಾಲಯದ ಪ್ರವಳಿಕ ಕೆ.ಎಂ. ಅವರು ಪಿಚ್‌ಡಿಯಲ್ಲಿ 4 ಚಿನ್ನದ ಪದಕ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದರು. ಬೆಂಗಳೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ವೈ.ಎನ್. ಶಿವಲಿಂಗಯ್ಯ, ಕುಲಸಚಿವ ಡಾ. ಕೆ.ಸಿ. ನಾರಾಯಣಸ್ವಾಮಿ, ಸಹ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ರಘುಪ್ರಸಾದ್ ಇದ್ದರು.-------

ದೀಪ್ತಿಗೆ 13 ಚಿನ್ನದ ಪದಕ:

ಶಿವಮೊಗ್ಗದ ತಲಕಾಲಕೊಪ್ಪದ ದೀಪ್ತಿ ಟಿ.ಎಲ್. ಬಿಎಸ್ಸಿ ಕೃಷಿಯಲ್ಲಿ ಅತಿ ಹೆಚ್ಚು 13 ಚಿನ್ನದ ಪದಕ ಪದಕ ಪಡೆದಿದ್ದಾರೆ. ಭವಿಷ್ಯದಲ್ಲಿ ಕೃಷಿ ವಿಜ್ಞಾನಿಯಾಗುವ ಕನಸು ಹೊತ್ತು ನೀಟ್ ಪರೀಕ್ಷೆಗೆ ಹಾಜರಾಗದೆ ಕೃಷಿ ಪದವಿಗೆ ಸೇರಿದ್ದೆ. ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ರೈತರಿಗೆ ನೆರವಾಗುವ ಗುರಿಯಿದೆ ಎಂದು ಹೇಳಿದರು.

ಮೆಕ್ಯಾನಿಕ್‌ ಪುತ್ರಿಗೆ ಕೃಷಿ ವಿಜ್ಞಾನಿ ಕನಸು

ಮಂಡ್ಯ ಕೃಷಿ ವಿವಿಯಲ್ಲಿ ಪದವಿ ಬಿಎಸ್ಸಿ (ಆನರ್ಸ್) ಕೃಷಿಯಲ್ಲಿ ಒಂಬತ್ತು ಪದಕ ಪಡೆದ ಮೈಸೂರು ಮೂಲದ ಆರ್. ಸ್ಪೂರ್ತಿಯ ತಂದೆ ಮೆಕ್ಯಾನಿಕ್ ಶಾಪ್ ಹೊಂದಿದ್ದಾರೆ. ರಾಂಚಿಯ ಐಐಎಬಿ ಸಂಸ್ಥೆಯಲ್ಲಿ ಎಂಎಸ್ಸಿ ಓದುತ್ತಿದ್ದಾರೆ. ಭತ್ತದಲ್ಲಿ ಹೆಚ್ಚು ಇಳುವರಿ ಕೊಡುವ ಅತ್ಯುತ್ತಮ ತಳಿ ಅಭಿವೃದ್ಧಿಪಡಿಸುವ ಗುರಿಯಿದೆ ಎಂದರು.

ಹುಳುಗಳ ನಿಯಂತ್ರಣ ಧ್ಯೇಯ:

ಆರ್‌ಬಿಐನಲ್ಲಿ ಸೆಕ್ಯೂರಿಟಿ ಗಾರ್ಡ್ ಉದ್ಯೋಗ ಮಾಡುವವರ ಪುತ್ರ ಡಿ.ಎಸ್. ಯಕ್ಷಿತ್. ಕೃಷಿ ಬಿಎಸ್ಸಿ ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಮಣ್ಣಿನ ಫಲವತ್ತತೆಗೆ ಧಕ್ಕೆಯಾಗದ ನ್ಯಾನೊ ಸಿಲಿಕಾ ಕೆಮಿಕಲ್ಸ್ ಅಭಿವೃದ್ಧಿಗೆ ಒತ್ತು ಕೊಟ್ಟು ಮೆಕ್ಕೆಜೋಳದಲ್ಲಿ ರೈತರನ್ನು ಭಾದಿಸುವ ಲದ್ದಿಹುಳಗಳ ನಿಯಂತ್ರಣಕ್ಕೆ ಶ್ರಮಿಸುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ