- ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆ । ಮಹೇಶ್ ಮನೆಯಲ್ಲಿ ಕಾಫಿ ಸಭೆ
ಕನ್ಕಡಪ್ರಭ ವಾರ್ತೆ ಹೊನ್ನಾಳಿ
ಜಿಪಂ ಮಾಜಿ ಸದಸ್ಯ ಮಹೇಶ್ ಇಂದಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಲು ತೀರ್ಮಾನಿಸಿದ್ದು ಒಳ್ಳೆಯ ನಿರ್ಧಾರವಾಗಿದೆ. ಎಲ್ಲ ವೈಮನಸ್ಸುಗಳ ಮರೆತು ಹಾಗೂ ವ್ಯತ್ಯಾಸಗಳನ್ನು ಸರಿ ಮಾಡಿಕೊಂಡು ಮುಂದೆ ಸಾಗುವುದು ನಮ್ಮಗಳ ಉದ್ದೇಶವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಭಾನುವಾರ ಪಟ್ಟಣದ ಎಂ.ಆರ್.ಮಹೇಶ ಅವರ ಮನೆಗೆ ತೆರಳಿ ಸಭೆ ನಡೆಸಿದ ಸಂದರ್ಭ ಅವರು ಮಾತನಾಡಿದರು. ಬಿಜೆಪಿ ಕೆಲ ಪದಾಧಿಕಾರಿಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿರುವುದು ನಿಜ. ಇದು ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಅಸಮಾಧಾನ ಮೂಡಿಸಿತ್ತು. ರಾಜ್ಯ ಬಿಜೆಪಿ ಉಸ್ತುವಾರಿ ಅಗರವಾಲ್ ಸಭೆ ಕರೆದು ಎಲ್ಲ ವೈಮನಸ್ಸು ಮರೆತು ಪಕ್ಷ ಸಂಘಟನೆ ಮಾಡಿ ಎಂದು ಸೂಚಿಸಿರುವ ಪ್ರಯುಕ್ತ ಹಿಂದಿನ ವ್ಯತ್ಯಾಸ ಮರೆತು ಪಕ್ಷ ಸಂಘಟನೆಗೆ ನಮ್ಮೊಂದಿಗೆ ಮಹೇಶ್ ಅವರು ಕೈ ಜೋಡಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಪಕ್ಷದ ಸಂಘಟನೆ ಮುಖ್ಯ ವೈಯಕ್ತಿಕ ಪ್ರತಿಷ್ಠೆಗೆ ಹೋಗದೇ ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡಿ ಎಂದು ಬಹಳ ನೋವಿನಿಂದ ಹೇಳಿರುವ ಸಂದೇಶದಿಂದ, ನನ್ನ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯರ ಮಧ್ಯ ಇದ್ದ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಮಾಜಿ ಸಚಿವರ ಕೈ ಬಲಬಡಿಸಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.
- - -