ಮುಡಾ ಹಗರಣ, ಬಿಜೆಪಿ ಹೋರಾಟ ಮುಂದುವರಿಸಲಿದೆ-ಸಂಸದ ಶೆಟ್ಟರ್‌

KannadaprabhaNewsNetwork | Published : Feb 23, 2025 12:33 AM

ಸಾರಾಂಶ

ಮುಡಾ ಹಗರಣದಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿರುವುದು ನಿರೀಕ್ಷಿತ, ಲೋಕಾಯುಕ್ತ ಪೊಲೀಸರಿಂದ ತನಿಖೆ ಆದ್ರೆ ನ್ಯಾಯ ಸಿಗೋದಿಲ್ಲ ಅಂತಾ ಗೊತ್ತಿತ್ತು ಹಾಗೆ ಆಗಿದೆ. ಆದರೆ ಇದರ ಬಗ್ಗೆ ಬಿಜೆಪಿಯು ಹೋರಾಟ ಮುಂದುವರೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ಹೇಳಿದರು.

ಲಕ್ಷ್ಮೇಶ್ವರ:ಮುಡಾ ಹಗರಣದಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿರುವುದು ನಿರೀಕ್ಷಿತ, ಲೋಕಾಯುಕ್ತ ಪೊಲೀಸರಿಂದ ತನಿಖೆ ಆದ್ರೆ ನ್ಯಾಯ ಸಿಗೋದಿಲ್ಲ ಅಂತಾ ಗೊತ್ತಿತ್ತು ಹಾಗೆ ಆಗಿದೆ. ಆದರೆ ಇದರ ಬಗ್ಗೆ ಬಿಜೆಪಿಯು ಹೋರಾಟ ಮುಂದುವರೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ಹೇಳಿದರು.ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಲೋಕಾಯುಕ್ತದವರು ಮುಖ್ಯಮಂತ್ರಿ ಅಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳಾಗಿರುತ್ತಾರೆ. ಅವರಿಂದ ನ್ಯಾಯ ಸಿಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಕೊಲೆ, ಸುಲಿಗೆ, ಭ್ರಷ್ಟಾಚಾರ ಮಿತಿಮೀರಿದೆ. ಹಳೆಹುಬ್ಬಳ್ಳಿಯಲ್ಲಿ ನಡೆದ ಘಟನೆಯ ಕೇಸ್‌ ವಾಪಸ್‌ ತೆಗೆದುಕೊಂಡ ಪರಿಣಾಮವೇ ಈಗ ಉದಯಗಿರಿ ಘಟನೆ ಮರುಕಳಿಸುವಂತಾಗಿದೆ ಎಂದು ಟೀಕಿಸಿದರು. ಡಿಸಿಎಂ ಡಿಕೆಶಿ ಬೆಂಗಳೂರ ಟ್ರಾಫಿಕ್ ವ್ಯವಸ್ಥೆ ಬಗ್ಗೆ ದೇವರೇ ಕಾಪಾಡಬೇಕು ಎನ್ನುವ ಹೇಳಿಕೆ, ಅವರಿಂದ ಅಧಿಕಾರ ನಿಭಾಯಿಸುವುದಾಗುವುದಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದ್ದು, ದೇವರೆ ಕಾಪಾಡಬೇಕು ಎನ್ನುವವರು ಸರಕಾರವನ್ನು ಸಹ ದೇವರ ಕೈಯಲ್ಲಿಯೇ ಕೊಟ್ಟು ಬಿಡಲಿ ಎಂದು ಲೇವಡಿ ಮಾಡಿದರು.ಬಿಜೆಪಿಯಲ್ಲಿ ನಡೆದಿರುವ ಎಲ್ಲ ವಿದ್ಯಮಾನಗಳಿಗೂ ಪಕ್ಷದ ಹೈಕಮಾಂಡ್‌ ಇತಿಶ್ರೀ ಹಾಡಲಿದೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದ್ದು, ಸಣ್ಣ ಪುಟ್ಟ ಭಿನ್ನಮತಗಳು ಸಹಜ. ಇದಕ್ಕೆ ಶೀಘ್ರದಲ್ಲಿ ಎಲ್ಲವೂ ಸುಖಾಂತ್ಯಗೊಳ್ಳಲಿದೆ. ರಾಜ್ಯಾಧ್ಯಕ್ಷರ ಬಗ್ಗೆಯೂ ಇಷ್ಟರಲ್ಲಿಯೇ ಹೈಕಮಾಂಡ್‌ ನಿರ್ಧರಿಸಲಿದೆ ಎಂದರು.ಪ್ರಯಾಗರಾಜ್ ಕುಂಭಮೇಳದಿದ ಹಿಂದೂಗಳು ಒಕ್ಕಟ್ಟು ಹೆಚ್ಚಲಿದೆ, ಅಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೈಗೊಂಡ ವ್ಯವಸ್ಥೆಗೆ ಇಡಿ ವಿಶ್ವವೇ ಮೆಚ್ಚುಗೆ ಸೂಚಿಸಿದೆ. ಕುಂಭಮೇಳದಲ್ಲಿ ಕೋಟ್ಯಂತರ ಜನರು ಪವಿತ್ರ ಸ್ನಾನ ಮಾಡಿ ಪುನೀತರಾಗಿದ್ದಾರೆ, ಈ ಯಶಸ್ಸು ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳದೇ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕ ಡಾ. ಚಂದ್ರು ಲಮಾಣಿ ಇದ್ದರು.

Share this article