ಎಸ್ಐಟಿ ತನಿಖೆ ಬೇಡ। ನಿಯಮ ಬಾಹಿರವಾಗಿ ನೀಡಿದ ನಿವೇಶನಗಳ ಹಕ್ಕುಪತ್ರ ರದ್ದುಪಡಿಸಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮೈಸೂರಿನ ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಟಿ ತನಿಖೆ ನೀಡಬಾರದು. ನಿಯಮ ಬಾಹಿರವಾಗಿ ಎಷ್ಟು ನಿವೇಶನಗಳನ್ನು ಹಂಚಲಾಗಿದೆಯೋ ಅವುಗಳ ಹಕ್ಕುಪತ್ರಗಳನ್ನು ರದ್ದುಪಡಿಸಬೇಕು. ಫಲಾನುಭವಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹಿಸಿ ಶುಕ್ರವಾರ ಮೈಸೂರಿನ ಮೂಡಾ ಕಚೇರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.ಮೂಡಾದಲ್ಲಿ ಸಾವಿರಾರು ಕೋಟಿ ರು. ಬೆಲೆಬಾಳುವ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಇದು, ಸುಮಾರು 4-5 ಸಾವಿರ ಕೋಟಿ ರು. ಹಗರಣ. ಈ ವಿಷಯದಲ್ಲಿ ರಾಜ್ಯದ ಮುಖ್ಯ ಮಂತ್ರಿ ಅವರು ಬುದ್ಧಿವಂತಿಕೆ ಉತ್ತರ ನೀಡುವ ಮೂಲಕ ಜನರನ್ನು ಯಾಮಾರಿಸುತ್ತಿದ್ದಾರೆ. ಈ ನಡವಳಿಕೆ ಪ್ರಾಮಾಣಿಕತೆಯ ಸಮರ್ಥನೆ ಅಲ್ಲ, ಅವರ ಪತ್ನಿ ಮೇಲೆ ಬಂದಿರುವ ಆರೋಪ ಇದಾಗಿದೆ ಎಂದ ಸಿ.ಟಿ. ರವಿ ಒಮ್ಮೆ ನೋಟಿಫಿಕೇಷನ್ ಆಗಿರುವ ಭೂಮಿಯನ್ನು ಖರೀದಿ ಮಾಡಿರುವುದು ಅಪರಾಧ ಎಂದರು.
1997 ರಲ್ಲಿಯೇ 6(1) ಆಗಿರುವಂತಹ ಭೂಮಿಯನ್ನು ಸಿಎಂ ಅವರ ಭಾಮೈದ ಖರೀದಿ ಮಾಡಿದ್ದಾರೆ. ಈ ರೀತಿಯ ಭೂಮಿ ಯನ್ನು ಖರೀದಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ, 1998ರಲ್ಲಿ ಭೂ ಸ್ವಾಧೀನ ಕೈ ಬಿಡಲಾಗಿದೆ ಎಂದು ಹೇಳಲಾಗಿದೆ, ಆದರೆ, ಅದು ಮೈಸೂರಿನ ಮೂಡಾ ದಾಖಲೆಯಲ್ಲಿ ಹೇಳಿಲ್ಲ, 2010ರಲ್ಲಿ ಸಿಎಂ ಭಾಮೈದ ಮುಖ್ಯಮಂತ್ರಿ ಅವರ ಪತ್ನಿಗೆ ದಾನವಾಗಿ ಕೊಟ್ಟಿದ್ದಾರೆ. ಇದು, 2013ರ ವಿಧಾನಸಭೆ ಚುನಾವಣೆಯಲ್ಲಿ ಅಫಿಡವಿಟ್ನಲ್ಲಿ ಇದು ಕೂಡ ಉಲ್ಲೇಖ ಆಗಿಲ್ಲ, ಆದರೆ, 2018ರಲ್ಲಿ ಉಲ್ಲೇಖ ಮಾಡಿದ್ದಾರೆ. ಅದರ ಆರ್ಟಿಸಿಯಲ್ಲಿ ಕೃಷಿ ಭೂಮಿ ಎಂದು ಹೇಳಲಾಗಿದೆ. 2023 ರ ಚುನಾವಣೆ ಯಲ್ಲಿ 8 ಕೋಟಿ ಆಸ್ತಿ ಮೌಲ್ಯ ಎಂದು ತೋರಿಸಿದ್ದಾರೆ ಎಂದ ಸಿ.ಟಿ. ರವಿ ಇದು ಪ್ರಾಮಾಣಿಕತೆ ಉತ್ತರ ಅಲ್ಲ ನಿಜ ಸಮಾಜ ವಾದಿ ಉತ್ತರವೂ ಅಲ್ಲ ಭ್ರಷ್ಟಾಚಾರವನ್ನು ಭಂಡತನದ ಉತ್ತರ ಇಲ್ಲಿ ಅಧಿಕಾರದ ಪ್ರಭಾವ ಬೀರಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.ರಾಜಕಾರಣದಲ್ಲಿ ಈ ರೀತಿ ಆರೋಪಗಳು ಬಂದ ಸಂದರ್ಭದಲ್ಲಿ ಮತ್ತೆ ಅಧಿಕಾರದಲ್ಲಿ ಮುಂದುವರಿಯದೆ ಇರುವುದು ಹಲವು ನಿರ್ದೇಶನಗಳು ನಮ್ಮ ಮುಂದೆ ಇವೆ. ಈ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆಗಿದೆ. ಹಾಗಾಗಿ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ಜುಲೈ 15 ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಈ ಬಗ್ಗೆ ಚರ್ಚೆಯನ್ನು ಕೈಗೆತ್ತಿಕೊಳ್ಳಲಿದೆ ಎಂದ ಅವರು, ನಗರ ಹಾಗೂ ಪಟ್ಟಣಗಳಲ್ಲಿ ನಿವೇಶನಗಳ ಬಗ್ಗೆ ಪಬ್ಲಿಕ್ ಆಡಿಟ್ ನಡೆಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್ ಹಾಗೂ ಸೋಮಶೇಖರ್ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 11 ಕೆಸಿಕೆಎಂ 1