ಭಾರತದ ಏಕತೆ ರಕ್ಷಣೆಯಲ್ಲಿ ಮುಖರ್ಜಿ ಪಾತ್ರ ಅಮೂಲ್ಯ

KannadaprabhaNewsNetwork |  
Published : Jun 25, 2025, 12:33 AM IST
ಪೊಟೋ೨೪ಎಸ್.ಆರ್.ಎಸ್೧೧ (ಬಿಜೆಪಿಯ ಜಿಲ್ಲಾ ಪ್ರಧಾನ  ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮಾತನಾಡಿದರು.) | Kannada Prabha

ಸಾರಾಂಶ

ಮುಖರ್ಜಿಯವರು ಹಿಂದೂಗಳ ಒಗ್ಗಟ್ಟಿಗಾಗಿ ಶ್ರಮಿಸಿದ ಮಹಾನ್ ಚೇತನರಾಗಿದ್ದಾರೆ. ನಾವೆಲ್ಲರೂ ಅವರ ತತ್ವ ಆದರ್ಶಗಳ ಅಳವಡಿಸಿಕೊಂಡು ಸಾಗಬೇಕಾಗಿದೆ

ಶಿರಸಿ: ಜನಸಂಘದ ಸಂಸ್ಥಾಪಕ ದಿ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸವನ್ನು ಬನವಾಸಿ ಬಿಜೆಪಿ ಶಕ್ತಿ ಕೇಂದ್ರದಿಂದ ಗಿಡ ನೆಡುವ ಮೂಲಕ ಆಚರಿಸಲಾಯಿತು.

ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಗಿಡ ನೆಟ್ಟು ದಿ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ, ಭಾರತದ ಏಕತೆಯ ರಕ್ಷಣೆಯಲ್ಲಿ ದಿ.ಶಾಮ ಪ್ರಸಾದ್ ಮುಖರ್ಜಿಯವರ ಪಾತ್ರ ಅತ್ಯಂತ ಅಮೂಲ್ಯವಾದದ್ದು. ಬಂಗಾಳ ಮತ್ತು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಉಳಿಸುವ ಹೋರಾಟದಲ್ಲಿ ಅವರು ಮಾಡಿದ ಅತ್ಯುನ್ನತ ತ್ಯಾಗಕ್ಕೆ ಪ್ರತಿಯೊಬ್ಬ ಭಾರತೀಯ ಕೃತಜ್ಞನಾಗಿರಲೇಬೇಕು. ಆಧುನಿಕ ಭಾರತದ ನಿರ್ಮಾಣದಲ್ಲಿ ಅವರ ಕೊಡುಗೆ ನಾವೆಲ್ಲರೂ ಸ್ಮರಿಸಬೇಕಾಗಿದೆ ಎಂದರು.

ಬಿಜೆಪಿಯ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ್ ನಾಯ್ಕ್ ಮಾತನಾಡಿ, ಮುಖರ್ಜಿಯವರು ಹಿಂದೂಗಳ ಒಗ್ಗಟ್ಟಿಗಾಗಿ ಶ್ರಮಿಸಿದ ಮಹಾನ್ ಚೇತನರಾಗಿದ್ದಾರೆ. ನಾವೆಲ್ಲರೂ ಅವರ ತತ್ವ ಆದರ್ಶಗಳ ಅಳವಡಿಸಿಕೊಂಡು ಸಾಗಬೇಕಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಗೆಲುವ ಶತಸಿದ್ಧ. ಆದರೆ ನಮ್ಮಲ್ಲಿ ಸಂಘಟನೆಯ ಕೊರತೆಯಿದೆ. ಪಕ್ಷ ಸಂಘಟನೆಯು ಅತಿಮುಖ್ಯವಾಗಿದ್ದು ನಾವೆಲ್ಲರೂ ಪಕ್ಷ ಸಂಘಟನೆಯ ಕಡೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಕಳೆದ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಪ್ರಮುಖರು ನನ್ನ ಸೋಲಿಗೆ ಷಡ್ಯಂತ್ರ ನಡೆಸಿದ್ದರು ಎಂಬ ಶಾಸಕರ ಹೇಳಿಕೆಯಲ್ಲಿ ಹುರುಳಿಲ್ಲ. ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರ ಪರಿಶ್ರಮದಿಂದ ಉಪಚುನಾವಣೆಯಲ್ಲಿ ೩೨ಸಾವಿರಕ್ಕೂ ಅಧಿಕ ಮತ ಹಾಗೂ ಕಳೆದ ಚುನಾವಣೆಯಲ್ಲಿ ೪ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಾಸಕರು ಕಾಂಗ್ರೆಸ್ ಪಕ್ಷದಲ್ಲಿರುವಾಗ ಎರಡು ಬಾರಿ ಅತಿ ಕಡಿಮೆ ಮತಗಳಿಂದ ಗೆದ್ದು, ಒಂದು ಬಾರಿ ಸೋಲನುಭವಿಸಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಶಾಸಕರು ಇಂತಹ ಹೇಳಿಕೆ ನಿಲ್ಲಿಸಬೇಕು. ಮುಂದಿನ ಚುನಾವಣೆಗೆ ಇಂದಿನಿಂದಲೇ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಕೊಳ್ಳೋಣ ಎಂದರು.

ಹಿರಿಯ ಮುಖಂಡ ಭಾಶಿ ಶಂಕರ ಗೌಡ ಮಾತನಾಡಿ, ರಾಜಕೀಯದಲ್ಲಿ ಪಕ್ಷ ನಿಷ್ಠೆ ಮುಖ್ಯವಾಗಿದೆ. ಈ ಭಾಗದ ಶಾಸಕರಿಗೆ ಪಕ್ಷ ನಿಷ್ಠೆಯಿಲ್ಲವಾಗಿದೆ. ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರು ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರಕ್ಕೆ ಒಳ್ಳೆಯ ನಾಯಕನನ್ನು ಪರಿಚಯಿಸಬೇಕಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ತೊಂದರೆಯಾಗದಂತೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕನನ್ನು ಆಯ್ಕೆಮಾಡಬೇಕಾಗಿದೆ. ಮುಂಬರುವ ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕಾಗಿ ದುಡಿದಿರುವ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದರು.

ಬಿಜೆಪಿ ಜಿಲ್ಲಾ ಸದಸ್ಯ ಅರವಿಂದ ಶೆಟ್ಟಿ, ಗ್ರಾಮೀಣ ಮಂಡಳ ಉಪಾಧ್ಯಕ್ಷ ಮೃತ್ಯುಂಜಯ ಚೌದರಿ, ವಿ.ಎಸ್. ನಾಯ್ಕ್, ಜಿಲ್ಲಾ ಓಬಿಸಿ ಮೋರ್ಚಾ ಸದಸ್ಯ ವಿಶ್ವನಾಥ ಹಾದಿಮನಿ ಪಕ್ಷ ಸಂಘಟನೆಯ ಕುರಿತು ಮಾತನಾಡಿದರು.

ಹಿರಿಯರಾದ ಗಣೇಶ ಸಣ್ಣಲಿಂಗಣ್ಣನವರ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಪುಟ್ಟರಾಜ ಸವಣೂರು, ಬನವಾಸಿ ಶಕ್ತಿಕೇಂದ್ರದ ಅಧ್ಯಕ್ಷ ಚಂದ್ರಶೇಖರ ಗೌಡ ಹಾಗೂ ವಿವಿಧ ಶಕ್ತಿ ಕೇಂದ್ರದ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ