ಮೂಲ್ಕಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಮೂಲ್ಕಿಯ ಕಾರ್ನಾಡ್ ಗಾಂಧಿ ಮೈದಾನದಲ್ಲಿ ನೊಂದಾವಣೆ ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶೇ. 93 ರಷ್ಟು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿದ್ದು, ಐಟಿ ಮತ್ತು ಜಿಎಸ್ಟಿ ಸಮಸ್ಯೆಗಳಿಂದಾಗಿ ಅರ್ಜಿ ವಿಲೇವಾರಿ ಸಮಸ್ಯೆಯಾಗಿದ್ದು ರಾಜ್ಯ ಮಟ್ಟದಲ್ಲಿ ಬಗೆಹರಿಸಬೇಕಾಗಿದೆ. ಅನ್ನಭಾಗ್ಯ ಯೋಜನೆಗೆ ರಾಜಕೀಯ ಪ್ರೇರಿತ ಅಡಚಣೆಗಳು ಬಂದರೂ ಅನುಷ್ಠಾನಗೊಂಡಿದ್ದು ಫಲಪ್ರದವಾಗಿದೆಯೆಂದು ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ.
ಮೂಲ್ಕಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಮೂಲ್ಕಿಯ ಕಾರ್ನಾಡ್ ಗಾಂಧಿ ಮೈದಾನದಲ್ಲಿ ನಡೆದ ನೊಂದಾವಣೆ ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಡಿಪಿ ಪ್ರಗತಿಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಪ್ರಥಮವಾಗಿದ್ದು ಆರ್ಥಿಕ ಸುಧಾರಣೆಯಾಗಿ ಜನರ ಬದುಕು ಹಸನಾಗಿದೆ. ಸರ್ಕಾರ ಬಡವರ ಪರವಾಗಿದೆ ಎನ್ನುವುದಕ್ಕೆ ಗ್ಯಾರಂಟಿ ಯೋಜನೆಗಳು ಸಾಕ್ಷಿಯಾಗಿದ್ದು ಮುಂದಿನ ದಿನಗಳಲ್ಲಿ ಅಂಗನವಾಡಿ ಶಿಕ್ಷಕರಿಗೆ ಕನಿಷ್ಠ ವೇತನ ಹಾಗೂ ಮುಷ್ಕರ ನಿರತ ಗ್ರಾಮಕರಣಿಕರ ವೇತನ ಪರಿಷ್ಕರಣೆ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಲಾಗುವುದೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಲ್ವಿನ್ ಕ್ಲೆಮೆಂಟ್ ಕುಟಿನ್ಹಾ ವಹಿಸಿದ್ದರು.
ಸಮಿತಿ ಸದಸ್ಯರಾದ ವಾಹಿದ್ ತೋಕೂರು, ಜನಾರ್ದನ ಬಂಗೇರ, ಕೆಎಸ್ ರಾವ್ ನಗರ, ಅನಿತಾ ಆರಾಹ್ನ ಕಿನ್ನಿಗೋಳಿ, ನೆಲ್ಸನ್ ಬಳ್ಕುಂಜೆ, ರಕ್ಷಿತ್ ಕೊಳಚಿ ಕಂಬಳ, ಸುಧಾಕರ ಸಾಲ್ಯಾನ್ ಏಳಿಂಜೆ, ಇ ಒ ಕುಸುಮಾಧರ ಮತ್ತಿತರರು ಇದ್ದರು.
ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ವಂದಿಸಿದರು. ಶೈಲಜಾ ನಿರೂಪಿಸಿದರು
ಬಳಿಕ ಗ್ಯಾರಂಟಿ ಯೋಜನೆಗಳ ಅರ್ಜಿಗಳ ಅನುಷ್ಠಾನದ ವಿಲೇವಾರಿ ಶಿಬಿರ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.