ಕನ್ನಡಪ್ರಭ ವಾರ್ತೆ ಮೂಲ್ಕಿ
ಇಂದಿನಿಂದ ಶರ್ಬತ್ಕಟ್ಟೆ ದೇವಾಲಯ ಬ್ರಹ್ಮಕಲಶೋತ್ಸವ
ಮಂಗಳೂರು: ನಗರದ ಶರ್ಬತ್ ಕಟ್ಟೆಯ ಭದ್ರಕಾಳಿ ದೇವಸ್ಥಾನದ ಪುನಃಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.28 ರಿಂದ ಮಾ.1ರವರೆಗೆ ನಡೆಯಲಿದೆ.ಕ್ಷೇತ್ರದ ಪ್ರಧಾನ ಅರ್ಚಕ ಉಮೇಶ್ನಾಥ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕದ್ರಿ ಯೋಗೀಶ್ವರ ಮಠದ ನಿರ್ಮಲನಾಥ್ ಜೀ ಮಹಾರಾಜ್ ಉಪಸ್ಥಿತಿಯಲ್ಲಿ ದೇರೆಬೈಲು ವಿಠಲದಾಸ ತಂತ್ರಿ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಸುಮಾರು 2.5 ಕೋಟಿ ರು. ಮೊತ್ತದಲ್ಲಿ ದೇವಸ್ಥಾನ ನವೀಕರಣಗೊಂಡಿದೆ. ಶಿರಾ ಶಿಲೆ ಕಲ್ಲು, ತಾಮ್ರ ಹಾಗೂ ಮರಗಳನ್ನು ಬಳಸಿ ವಾಸ್ತು ಪ್ರಕಾರ ಗುಡಿಯ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.
ಫೆ.28ರಂದು ಸಂಜೆ 5ರಿಂದ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸೇರಿದಂತೆ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 7ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ. ಫೆ. 29ರಂದು ಬೆಳಗ್ಗೆ 11.45ಕ್ಕೆ ಭದ್ರಕಾಳಿ ವಿಗ್ರಹ ಪ್ರತಿಷ್ಠೆ, ಅಷ್ಟಬಂಧ ಲೇಪನ, ಪ್ರಸನ್ನಪೂಜೆ. ಸಂಜೆ 6.30ರಿಂದ ಕಲಶ ಮಂಡಲ ರಚನೆ, ಕಲಶಪೂರಣ, ಪ್ರಧಾನ ಹೋಮ, ಭದ್ರಕಾಳಿ ಬಲಿಪೂಜೆ. 7ರಿಂದ ಧಾರ್ಮಿಕ ಸಭೆ ನಡೆಯಲಿದೆ. ಮಾ.1ರಂದು ಬೆಳಗ್ಗೆ 7.43ಕ್ಕೆ ಬ್ರಹ್ಮಕಲಶಾಭಿಷೇಕ ಚಂಡಿಕಾಯಾಗ, ಮಹಾಪೂಜೆ. ಸಂಜೆ 6.30ರಿಂದ ಶ್ರೀ ಚಕ್ರಪೂಜೆ, ಮಂಗಳಾ ಮಂತ್ರಾಕ್ಷತೆ. 7ರಿಂದ ಧಾರ್ಮಿಕ ಸಭೆ ನಡೆಯಲಿದೆ ಎಂದರು.ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿ ಅಧ್ಯಕ್ಷ ರಾಜೇಶ್ ಕದ್ರಿ, ಧಾರ್ಮಿಕ ಕಾರ್ಯಕ್ರಮದ ಸಂಘಟಕ ರಿತೇಶ್ ದಾಸ್ ಕೊಪ್ಪಳಕಾಡು, ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ಮೋಹನ ಕೊಪ್ಪಳ, ಬ್ರಹ್ಮಕಲಶೋತ್ಸವ ಸಮಿತಿ ಮೇಲುಸ್ತುವಾರಿ ಶ್ರೇಯಸ್ ಜೋಗಿ ಇದ್ದರು.