ಕನ್ನಡಪ್ರಭ ವಾರ್ತೆ ಹಾಸನ
ನಗರಸಭೆ ಆರೋಗ್ಯ ನಿರೀಕ್ಷಕರಾದ ಆದೀಶ್ ಮಾಧ್ಯಮದೊಂದಿಗೆ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಮತ್ತು ಸಾವು ನೋವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ನಗರಸಭೆಯಿಂದ ಸೊಳ್ಳೆ ಉತ್ಪತ್ತಿಯಾಗದಂತೆ ಔಷಧಿ ಸಿಂಪಡಿಸಲಾಗುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ಮಳೆಗಾಲ ಇರುವುದರಿಂದ ಹಳೆ ಟೈರು, ತೆಂಗಿನ ಚಿಪ್ಪು ಸೇರಿದಂತೆ ಇತರೆ ನೀರು ನಿಲ್ಲುವ ವಸ್ತುಗಳಲ್ಲಿ ನೀರು ಶೇಖರಣೆ ಆಗಿ ಸೊಳ್ಳೆಗಳ ಉತ್ಪತ್ತಿಯ ತಾಣಗಳಾಗುತ್ತಿವೆ. ನಗರಸಭೆಯಿಂದ ಎಚ್ಚರಿಕೆ ಕೊಟ್ಟರೂ ಸಹ ಪಾಲಿಸದವರನ್ನು ಗಣನೆಗೆ ತೆಗೆದುಕೊಂಡು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದರು. ಒಂದು ದಿವಸ ಗಡುವು ನೀಡಿದ್ದು, ನಗರಸಭೆ ಆಯುಕ್ತರ ಸೂಚನೆ ಮೇರೆಗೆ ನಾವುಸಜ್ಜಾಗಿದ್ದು, ಯಾವುದೇ ರೀತಿಯ ರಸ್ತೆ ಬದಿ ಹಾಗೂ ಇತರೆ ಕಡೆಗಳಲ್ಲಿ ಟೈರು ಹಾಗೂ ಎಳನೀರಿನ ಚಿಪ್ಪು ಏನಾದರೂ ಕಂಡು ಬಂದರೇ ನಗರಸಭೆಯಿಂದ ತೆರವುಗೊಳಿಸುವುದರ ಜೊತೆಗೆ ಅಂತಹ ಅಂಗಡಿ ಮಾಲೀಕರ ಮೇಲೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಸಾರ್ವಜನಿಕರು ತಮ್ಮ ವಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿ ಡೆಂಘೀ ಹೊಡೆದು ಓಡಿಸಲು ನಮ್ಮ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.