ರೈತರ ಒತ್ತಡಕ್ಕೆ ಹೆಸರು ಖರೀದಿಸಿದ್ದು!

KannadaprabhaNewsNetwork |  
Published : Apr 24, 2026, 12:45 AM IST
ಖರೀದಿ ಕೇಂದ್ರ ಸಿಬ್ಬಂದಿ ಉಪವಿಭಾಗಾಧಿಕಾರಿಗಳಿಗೆ ಬರೆದಿರುವ ಪತ್ರದ ಪ್ರತಿ. | Kannada Prabha

ಸಾರಾಂಶ

2025ರ ಡಿ. 23ರಂದು ಬ್ಯಾಹಟ್ಟಿ ಬೆಂಬಲ ಬೆಲೆ ಕೇಂದ್ರದಲ್ಲಿ 74 ರೈತರಿಂದ ಹೆಸರು ಖರೀದಿ ಗುಣಮಟ್ಟದಿಂದ ಕೂಡಿದೆ ಎಂದು ಚೀಲಗಳ ಮೇಲೆ ಬಾರ್‌ಕೋಡ್‌ ಹಾಕಿ ನರಗುಂದ ವೇರ್‌ಹೌಸ್‌ಗೆ ಸಾಗಿಸಲಾಗಿತ್ತು. ಅಲ್ಲಿ ಮೂರು ವಾರ ಇಟ್ಟುಕೊಂಡ ಬಳಿಕ ನೀವು ನೀಡಿರುವ ಹೆಸರು ಕಳಪೆಯಾಗಿದ್ದು, ಹಿಂತೆಗೆದುಕೊಂಡು ಹೋಗಿ ಎಂದು ಖರೀದಿ ಕೇಂದ್ರದ ಸಿಬ್ಬಂದಿ ಜ. 15ರ ಆನಂತರ ನೋಟಿಸ್‌ ನೀಡಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರೈತರೇ ನಮಗೆ ಒತ್ತಡ ಹಾಕಿದ್ದರಿಂದ ಹೆಸರು ಖರೀದಿಸಿದ್ದು. ಇದರಲ್ಲಿ ನಮ್ಮದೇನೂ ತಪ್ಪಿಲ್ಲ. ಹೀಗಾಗಿ ಹಿಂತೆಗೆದುಕೊಂಡು ಹೋಗುವಂತೆ ಅವರಿಗೆ ನೋಟಿಸ್‌ ನೀಡಿದ್ದೇವೆ.

ಇದು ತಾಲೂಕಿನ ಬ್ಯಾಹಟ್ಟಿ ಬೆಂಬಲ ಬೆಲೆ ಕೇಂದ್ರದ ಸಿಬ್ಬಂದಿ ಉಪವಿಭಾಗಾಧಿಕಾರಿಗೆ ಲಿಖಿತವಾಗಿ ನೀಡಿರುವ ಉತ್ತರ. ಈ ಮೂಲಕ ತಮ್ಮ ತಪ್ಪಿನಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಕೆರಳಿರುವ ರೈತರು, ನಾವು ಒತ್ತಡ ಹಾಕಿ ಮಾರಾಟ ಮಾಡಲು ಸಾಧ್ಯವೇ? ಒತ್ತಡ ಹೇರುತ್ತಾರೆ ಎಂದರೆ ನಿಯಮ ಮೀರಿ ಖರೀದಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಆಗಿದ್ದೇನು?

2025ರ ಡಿ. 23ರಂದು ಬ್ಯಾಹಟ್ಟಿ ಬೆಂಬಲ ಬೆಲೆ ಕೇಂದ್ರದಲ್ಲಿ 74 ರೈತರಿಂದ ಹೆಸರು ಖರೀದಿ ಗುಣಮಟ್ಟದಿಂದ ಕೂಡಿದೆ ಎಂದು ಚೀಲಗಳ ಮೇಲೆ ಬಾರ್‌ಕೋಡ್‌ ಹಾಕಿ ನರಗುಂದ ವೇರ್‌ಹೌಸ್‌ಗೆ ಸಾಗಿಸಲಾಗಿತ್ತು. ಅಲ್ಲಿ ಮೂರು ವಾರ ಇಟ್ಟುಕೊಂಡ ಬಳಿಕ ನೀವು ನೀಡಿರುವ ಹೆಸರು ಕಳಪೆಯಾಗಿದ್ದು, ಹಿಂತೆಗೆದುಕೊಂಡು ಹೋಗಿ ಎಂದು ಖರೀದಿ ಕೇಂದ್ರದ ಸಿಬ್ಬಂದಿ ಜ. 15ರ ಆನಂತರ ನೋಟಿಸ್‌ ನೀಡಿದ್ದಾರೆ.

ಬೆಳೆ ಮಾರಿದ ಹಣ ಬರುತ್ತದೆ ಎಂದು ಎದುರು ನೋಡುತ್ತಿದ್ದ ರೈತರು ನೋಟಿಸ್‌ ಕಂಡು ದಂಗಾಗಿದ್ದಾರೆ. ನಾವು ಮಾರಾಟ ಮಾಡಿ ತಿಂಗಳಾದ ಬಳಿಕ ಅದ್ಹೇಗೆ ಕಳಪೆಯಾಯಿತು? ಎಂದು ಚರ್ಚಿಸಿದ್ದಾರೆ. ಬಳಿಕ ನಮಗೆ ಮಾರಾಟ ಮಾಡಿದ ಹಣ ನೀಡಬೇಕೆಂದು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಅದರನ್ವಯ ಉಪವಿಭಾಗಾಧಿಕಾರಿ ವಿಚಾರಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಹೆಸರು ಖರೀದಿಸಿ ಬಾರ್‌ಕೋಡ್‌ ಹಾಕಿದ ಮೇಲೆ ಗುಣಮಟ್ಟ ಇಲ್ಲವೆಂದು ನೋಟಿಸ್‌ ನೀಡಿರುವುದೇಕೆ? ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಉಪವಿಭಾಗಾಧಿಕಾರಿ ಬ್ಯಾಹಟ್ಟಿ ಬೆಂಬಲ ಬೆಲೆ ಕೇಂದ್ರಕ್ಕೆ ತಾಕೀತು ಮಾಡಿದ್ದರು.

ನಮ್ಮದೇನು ತಪ್ಪಿಲ್ಲ:

ಇದಕ್ಕೆ ಲಿಖಿತ ಉತ್ತರ ನೀಡಿರುವ ಬ್ಯಾಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರೈತರೇ ಒತ್ತಡ ಹಾಕಿ ಹೆಸರು ಮಾರಾಟ ಮಾಡಿದ್ದರು. ಜತೆಗೆ ಗುಣಮಟ್ಟ ಇರದಿದ್ದರೆ ವಾಪಸ್‌ ಪಡೆಯುವುದಾಗಿ ತಿಳಿಸಿದ್ದರು. ಹೀಗಾಗಿ ನಾವು ಕೇಂದ್ರದಲ್ಲಿ ಗುಣಮಟ್ಟ ಪರಿಶೀಲಿಸಿರಲಿಲ್ಲ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತ ಸಮುದಾಯ, ನಿಮ್ಮ ನಿಯಮ ಮೀರಿ ಒತ್ತಡ ಹೇರಿ ಮಾರಾಟ ಮಾಡಲು ಸಾಧ್ಯವೇ? ಗುಣಮಟ್ಟ ಪರಿಶೀಲಿಸದೆ ಅದ್ಹೇಗೆ ಬಾರ್‌ಕೋಡ್‌ ಹಾಕುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ಒತ್ತಡ ಹೇರಿದ್ದರೆ ಪೊಲೀಸರನ್ನು ಕರೆಸಬಹುದಿತ್ತು ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ಆಗಲೇ ಏಕೆ ತರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಎಚ್ಚರಿಕೆ:

ಆಗ ಒತ್ತಡ ಹೇರಿ ನಾವೇನೂ ಮಾರಾಟ ಮಾಡಿಲ್ಲ. ಇದೀಗ ನಮಗೆ ಮಾರಾಟ ಮಾಡಿದ ಹಣ ನೀಡದಿದ್ದರೆ ಉಗ್ರ ಹೋರಾಟದ ಮೂಲಕ ಒತ್ತಡ ಹೇರಬೇಕಾಗುತ್ತದೆ. ಇಲ್ಲದ ನೆಪ ಹೇಳದೇ ಬರಬೇಕಿರುವ ಹಣ ನೀಡಿ ಎಂಬ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.

ಇದೀಗ ಉಪವಿಭಾಗಾಧಿಕಾರಿ ಅಂಕಣದಲ್ಲಿ ಚೆಂಡು ಇದ್ದು ಎತ್ತ ಹೊಡೆಯುತ್ತಾರೆ ಎಂಬುದು ಸದ್ಯದ ಕುತೂಹಲ.ಬ್ಯಾಹಟ್ಟಿಯಲ್ಲಿ ಒತ್ತಡ ಹೇರಿ ರೈತರು ಮಾರಾಟ ಮಾಡಿದ್ದಾರೆ ಎಂದು ಬೆಂಬಲ ಬೆಲೆ ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ. ಆದರೆ, ಹೀಗೇ ಒತ್ತಡ ಹಾಕಿದರೆ ಖರೀದಿಸಲು ಬರುವುದಿಲ್ಲ. ಇದರಲ್ಲಿ ಕೇಂದ್ರದ ಸಿಬ್ಬಂದಿಯೇ ತಪ್ಪು ಮಾಡಿದ್ದಾರೆ.

ವಿರೂಪಾಕ್ಷ ಲಮಾಣಿ, ಉಪನಿರ್ದೇಶಕ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆರೈತರು ಒತ್ತಡ ಹೇರಿ ಮಾರಾಟ ಮಾಡಿದ್ದರೆ ಅದರ ಮರುದಿನವೇ ಹಿರಿಯ ಅಧಿಕಾರಿಗಳ ಗಮನ ಏಕೆ ತರಲಿಲ್ಲ? ಅನ್ಯ ವ್ಯಾಪಾರಿಗಳಿಂದ ಕಳಪೆ ಮಾಲು ಖರೀದಿಸಿ ಅದನ್ನು ರೈತರಿಗೆ ತಳಕು ಹಾಕುತ್ತಿದ್ದಾರೆ. ತಮ್ಮ ಬುಡಕ್ಕೆ ಬರುತ್ತದೆ ಎಂದರಿತು ಜಾರಿಕೊಳ್ಳಲು ಮುಂದಾಗಿದ್ದಾರೆ.

ಮಲ್ಲಣ್ಣ ಅಲೇಕರ್‌, ಬ್ಯಾಹಟ್ಟಿ ರೈತರು, ರಾಜ್ಯ ಉಪಾಧ್ಯಕ್ಷರು, ರೈತಸೇನಾ ಕರ್ನಾಟಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಯಿಂದ ನಾಳೆಯಿಂದ ಐದು ದಿನ ಇನ್‌ಕಾಮೆಕ್ಸ್‌
ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದು ಗೆದ್ದ ಬಡ ಮಕ್ಕಳು !