ಗಜೇಂದ್ರಗಡ ಪಟ್ಟಣದ ಅಭಿವೃದ್ಧಿಗೆ ಪುರಸಭೆ ಆಡಳಿತ ಬದ್ಧ-ಮುಧೋಳ

KannadaprabhaNewsNetwork |  
Published : Jul 03, 2025, 11:46 PM ISTUpdated : Jul 03, 2025, 11:47 PM IST
ಗಜೇಂದ್ರಗಡ ಪುರಸಭೆಯಲ್ಲಿ ಸ್ಥಾಯಿ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಗಜೇಂದ್ರಗಡ ಪಟ್ಟಣದ ಅಭಿವೃದ್ಧಿಗೆ ಪುರಸಭೆ ಆಡಳಿತ ಬದ್ಧವಾಗಿದ್ದು, ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ಆಡಳಿತಕ್ಕೆ ಕೈ ಜೋಡಿಸಬೇಕು ಎಂದು ಪುರಸಭೆ ಸ್ಥಾಯಿ ಸಮಿತಿ ಚೇರ್‌ಮನ್‌ ಮುದಿಯಪ್ಪ ಮುಧೋಳ ಹೇಳಿದರು.

ಗಜೇಂದ್ರಗಡ: ಪಟ್ಟಣದ ಅಭಿವೃದ್ಧಿಗೆ ಪುರಸಭೆ ಆಡಳಿತ ಬದ್ಧವಾಗಿದ್ದು, ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ಆಡಳಿತಕ್ಕೆ ಕೈ ಜೋಡಿಸಬೇಕು ಎಂದು ಪುರಸಭೆ ಸ್ಥಾಯಿ ಸಮಿತಿ ಚೇರ್‌ಮನ್‌ ಮುದಿಯಪ್ಪ ಮುಧೋಳ ಹೇಳಿದರು.

ಸ್ಥಳೀಯ ಪುರಸಭೆ ಸಭಾಭವನದಲ್ಲಿ ಗುರುವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ತೆರಿಗೆ ಸಂಗ್ರಹದ ಮಾಹಿತಿ ಪಡೆದ ಬಳಿಕ ಅವರು ಮಾತನಾಡಿದರು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ದುರಸ್ತಿ, ರಸ್ತೆ ದುರಸ್ತಿ, ಮಹಿಳಾ ಶೌಚಾಲಯ ನಿರ್ವಹಣೆ ಹಾಗೂ ವಿದ್ಯುತ್ ಕಂಬಗಳ ದುರಸ್ತಿ ಇತರ ಸಮಸ್ಯೆಗಳನ್ನು ಕೆಲವು ಪುರಸಭೆ ಸದಸ್ಯರು ಗಮನಕ್ಕೆ ತಂದರು. ಅದಕ್ಕೆ ಸ್ಪಂದಿಸಿದ ಮುದಿಯಪ್ಪ ಮುಧೋಳ, ಕಳೆದ ಕೆಲವು ತಿಂಗಳ ಹಿಂದಿನಿಂದ ಪಟ್ಟಣದ ಬಸ್ ನಿಲ್ದಾಣ ಎದುರು, ಲಿಂಗರಾಜ ನಗರ, ದುರ್ಗಾ ವೃತ್ತ, ಬಸವೇಶ್ವರ ವೃತ್ತ, ಹಿರೇಬಜಾರ ಸೇರಿ ವಿವಿಧ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ದುರಸ್ತಿಗೆ ದೂರು ನೀಡಿದ್ದರು. ಹೀಗಾಗಿ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಅವರೊಂದಿಗೆ ಚರ್ಚಿಸಿ, ಈಗಾಗಲೇ ಸಾರ್ವಜನಿಕರು ದೂರಿದ್ದ ರಸ್ತೆ ಹಾಗೂ ವೃತ್ತ ಮತ್ತು ಬಡಾವಣೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈಗ ಸಭೆಯಲ್ಲಿ ಸದಸ್ಯರು ಮಾಡಿರುವ ಮನವಿಯನ್ನು ತಿಂಗಳಾಂತ್ಯದಲ್ಲಿ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದರು.

ನೀರು ಕರ ಸಂಗ್ರಹ: ಪಟ್ಟಣದ ಕೆಲವು ಬಡಾವಣೆಗಳಲ್ಲಿ ನೀರಿನ ಕರ ಸಂಗ್ರಹ ಗುರಿ ತಲುಪಿಲ್ಲ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸಭೆಗೆ ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಚೇರ್‌ಮನ್‌ ಮುದಿಯಪ್ಪ ಮುಧೋಳ ಪ್ರತಿಕ್ರಿಯಿಸಿ, ನೀರಿನ ಕರ ತುಂಬುವಂತೆ ಪುರಸಭೆ ವಾಹನಗಳಲ್ಲಿ ಜಾಗೃತಿ ಮೂಡಿಸಿ, ತೆರಿಗೆ ಪಾವತಿ ಬಾಕಿ ಹೊಂದಿರುವವರಿಗೆ ಕರ ತುಂಬಲು ನೋಟಿಸ್ ನೀಡಿ, ತೆರಿಗೆ ತುಂಬದಿದ್ದರೆ ಮುಲಾಜಿಲ್ಲದೆ ನೀರಿನ ಸಂಪರ್ಕ ಕಡಿತಗೊಳಿಸಿ ಎಂದರು. ಪುರಸಭೆ ಅಧ್ಯಕ್ಷರು ಸೇರಿ ಸದಸ್ಯರು ಅವರ ಹೇಳಿಕೆಗೆ ದನಿಗೂಡಿಸಿದರು.

ಕೆಲವು ವರ್ಷಗಳ ಹಿಂದೆ ಬೇಸಿಗೆ ಸಂದರ್ಭದಲ್ಲಿ ಪಟ್ಟಣದಲ್ಲಿ ನೀರು ಪೂರೈಸಲು ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲಾಗಿತ್ತು. ಕೊಳವೆಬಾವಿ ಮಾಲೀಕರಿಗೆ ಅಂದಾಜು ₹೧೨ ಲಕ್ಷ ಬಾಡಿಗೆ ಪಾವತಿಸಬೇಕಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಅಷ್ಟೊಂದು ಹಣ ಎಲ್ಲಿದೆ? ಜಿಲ್ಲಾಡಳಿತಕ್ಕೆ ಪತ್ರ ಬರೆದು ಅನುದಾನ ಕೇಳಿ ಎಂದು ಮುದಿಯಪ್ಪ ಮುಧೋಳ ಹಾಗೂ ಸುಭಾಸ ಮ್ಯಾಗೇರಿ ಹೇಳಿದರು.

ಸದಸ್ಯರಾದ ಮುರ್ತುಜಾ ಡಾಲಾಯತ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್, ಶರಣಪ್ಪ ಉಪ್ಪಿನಬೆಟಗೇರಿ, ಕೌಸರಬಾನು ಹುನಗುಂದ, ದಾಕ್ಷಾಯಣಿ ಚೋಳಿನ, ವಿಜಯಾ ಮಳಗಿ, ಅಧಿಕಾರಿಗಳಾದ ಸಿ.ಡಿ. ದೊಡ್ಡಮನಿ, ಗುರಪ್ಪ ಪಟ್ಟಣಶೆಟ್ಟಿ, ಶಿವಕುಮಾರ ಇಲಾಳ, ರಂಜಿತ ಬೋಯಿಟೆ, ಪಿ.ಎನ್. ದೊಡ್ಡಮನಿ, ರಾಘವೇಂದ್ರ ಮಂತಾ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು